ಮಂಗ್ಳೂರು ವಿದ್ಯಾರ್ಥಿನಿ ಸಾವು, ಪರಿಸ್ಥಿತಿ ಉದ್ರಿಕ್ತ
ಬೆಂಗಳೂರು ನಗರದ ಅತ್ಯಂತ ಸಂಚಾರ ದಟ್ಟಣೆ ಇರುವ ಪ್ರದೇಶಗಳಲ್ಲಿ ಒಂದಾದ ಮಾಗಡಿ ರಸ್ತೆಯಲ್ಲಿ ಭಾನುವಾರ(ಸೆ.16) ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದೆ. ಮಾಗಡಿ ರಸ್ತೆ ಪ್ರಸನ್ನ ಥಿಯೇಟರ್ ಬಳಿ ನಡೆದ ಅಪಘಾತದ 45 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ.
ಹೆಲ್ಮೆಟ್ ಇಲ್ಲದೆ ಬೈಕು ಚಲಿಸುತ್ತಿದ್ದ ಜಯಕೃಷ್ಣ (45) ಬಿಎಂಟಿಸಿ ಬಸ್ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಜಯಕೃಷ್ಣ ಅವರು ಪೊಲೀಸರ ಕೈಗೆ ಸಿಕ್ಕಿಕೊಳ್ಳದಂತೆ ತಪ್ಪಿಸಿಕೊಳ್ಳುವ ಯತ್ನದಲ್ಲಿ ಆಯ ತಪ್ಪಿ ಬಿಎಂಟಿಸಿ ಬಸ್ ಅಡಿ ಸಿಲುಕಿಕೊಂಡರು ಎಂದು ಪ್ರತ್ಯಕ್ಷ ದರ್ಶಿಗಳು ಹೇಳಿದ್ದಾರೆ.
ಜಯಕೃಷ್ಣ ಅವರ ಜೀವ ಉಳಿಸಲು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಸ್ಥಳೀಯರು ಯತ್ನಿಸಿದರೂ ಫಲಕಾರಿಯಾಗಲಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಮಾಗಡಿ ಸಂಚಾರಿ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಜಯಕೃಷ್ಣ ಸಾವಿಗೆ ಪೊಲೀಸರ ವಿಪರೀತ ತಪಾಸಣೆಯೇ ಕಾರಣ, ಬಿಎಂಟಿಸಿ ಚಾಲಕನ ನಿರ್ಲಕ್ಷ್ಯವೂ ಇದರಲ್ಲಿ ಸೇರಿದೆ ಎಂದು ಸ್ಥಳೀಯರು ಕೆಲ ಕಾಲ ರಸ್ತೆ ತಡೆಗೆ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಈಗ ಪರಿಸ್ಥಿತಿ ತಿಳಿಗೊಂಡು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.
ಇನ್ನೊಂದು ಘಟನೆಯಲ್ಲಿ ಹೊಸಕೋಟೆಯ ರಾಮಪುರದಲ್ಲಿ ಮರಳು ಸಾಗಿಸುವ ಲಾರಿ ಹಾಗೂ ಆಟೋರಿಕ್ಷಾ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ಅಪಘಾತದಲ್ಲಿ ಆಟೋದಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು 25 ವರ್ಷದ ಫಿರೋಜ್ ಹಾಗೂ 20 ವರ್ಷದ ಮತೀನ್ ಎಂದು ಗುರುತಿಸಲಾಗಿದೆ.
ಮಂಗಳೂರು ಕ್ರೈಂ ಸುದ್ದಿ[ದಕ್ಷಿಣ ಕನ್ನಡ ಪೊಲೀಸ್ ಮೂಲದಿಂದ]: ವೈದ್ಯರ ನಿರ್ಲಕ್ಷ್ಯದಿಂದ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕೋಟೆಕಾರು ಗ್ರಾಮದಲ್ಲಿ ನಡೆದಿದೆ. ಮಿತ್ರಾನಗರ ಲೇಔಟ್ ನಿವಾಸಿ ದೀಪಿಕಾಮೃತ ವಿದ್ಯಾರ್ಥಿನಿ. 17 ವರ್ಷದ ದೀಪಿಕಾ ಸೈಂಟ್ ಆಗ್ನೇಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.
ದೀಪಿಕಾ ಕಳೆದ ಹಲವು ದಿನಗಳಿಂದ ಹೊಟ್ಟೆ ನೋವು ಎಂದು ಬಳಲುತ್ತಿದ್ದಳು, ಚಿಕಿತ್ಸೆಗಾಗಿ ಕೋಟೆ ಕಾರುವಿನ ಜಿ.ಎಸ್.ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಈಕೆಗೆ ಸರಿಯಾದ ಚಿಕಿತ್ಸೆ ನೀಡದ ಕಾರಣ, ವೈದ್ಯರ ನಿರ್ಲಕ್ಷ್ಯ ಧೋರಣೆಯಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ವಿದ್ಯಾರ್ಥಿನಿ ದೀಪಿಕಾ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ಆಕೆ ಸಂಬಂಧಿಕರು, ಸ್ನೇಹಿತರು ಆಸ್ಪತ್ರೆಯ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳಕ್ಕೆ ದಕ್ಷಿಣ ಕನ್ನಡ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ನರ್ಸ್ ಸಾವು: ಕದ್ರಿ ಶಿವಬಾಗ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ಸ್ಟಾಫ್ ನರ್ಸ್ 34 ವರ್ಷದ ಆಶಾ ಲವೀನಾ ಲೋಬೋ ಸಾವನ್ನಪ್ಪಿದ್ದಾರೆ.
ಶನಿವಾರ ಸಂಜೆ ಆಸ್ಪತ್ರೆ ಕೆಲಸ ಮುಗಿಸಿ ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಕದ್ರಿ ಶಿವಬಾಗ್ ಬಳಿ ಇರುವ ಆಭರಣ ಮಳಿಗೆ ಎದುರು ಟೆಂಪೋ ಡಿಕ್ಕಿ ಬಡಿದು ಮೃತಪಟ್ಟಿದ್ದಾರೆ. ಮೃತ ಆಶಾ ಲವೀನಾ ಅವರು ಪತಿ ಪಣಂಬೂರು ಎಂ.ಸಿ.ಎಫ್. ಉದ್ಯೋಗಿ ವಲೇರಿಯನ್ ರಾಜೇಶ್ ಲೋಬೊ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.