ಈಶಾನ್ಯ ಭಾರತೀಯರಿಗೆ ವಿಎಚ್ ಪಿ ಅಭಯ
ಕೆಲವು ಕಿಡಿಗೇಡಿಗಳ ಬೆದರಿಕೆಗೆ ಬಗ್ಗುವುದರಲ್ಲಿ ಅರ್ಥವಿಲ್ಲ. ಕರ್ನಾಟಕ ರಾಜ್ಯದ ಜನ ಶಾಂತಿಪ್ರಿಯರು, ಯಾವುದೇ ಕಾರಣಕ್ಕೆ ನೀವು ಭಯಪಡುವುದು ಬೇಡ. ನಿಮಗೆ ಬೆದರಿಕೆ ಕರೆ ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ಅಥವಾ ವಿಎಚ್ ಪಿ ಕಚೇರಿಗೆ (080-2660 4641, 2242 4918) ಕರೆ ಮಾಡಿ ಎಂದು ವಿಎಚ್ಪಿ ಪ್ರಾಂತ್ಯ ಕಾರ್ಯದರ್ಶಿ ಟಿಎಪಿ ಶೆಣೈ ತಿಳಿಸಿದ್ದಾರೆ.
ಪೊಲೀಸ್ ಗಸ್ತು: ಪೊಲೀಸರ ರಾತ್ರಿ ಬೀಟ್ ಗಿಂತ ಮೊದಲು ಸೀಟಿ ಊದುತ್ತಾ 'ಆಲ್ ಇಸ್ ವೆಲ್' ಎನ್ನುತ್ತಿದ್ದ ಗೂರ್ಖಾಗಳು ಕೂಡಾ ತಮ್ಮ ಸ್ವಂತ ಊರಿನ ಕಡೆ ಮುಖ ಮಾಡಿರುವುದು ಬೆಂಗಳೂರಿನ ಅನೇಕ ಬಡಾವಣೆಗಳಲ್ಲಿ ಆತಂಕ ತಂದಿದೆ.
ಮಸಾಜ್ ಪಾರ್ಲರ್, ಬ್ಯೂಟಿ ಪಾರ್ಲರ್, ಸಲೂನ್, ಚೀನಿ ಹೋಟೆಲ್, ಸೆಕ್ಯುರಿಟಿ ಗಾರ್ಡ್ ಏಜೆನ್ಸಿಗಳಲ್ಲೂ ಈಶಾನ್ಯ ರಾಜ್ಯಗಳ ಉದ್ಯೋಗಿಗಳ ಸಂಖ್ಯೆ ದಿನೇ ದಿನೇ ಕ್ಷೀಣಿಸುತ್ತಿದೆ. ಇದಕ್ಕಿಂತ ಗೂರ್ಖಾಗಳ ಸಂಖ್ಯೆ ಇಳಿಮುಖವಾಗುತ್ತಿರುವುದು ಕೋರಮಂಗಲ, ಬಿಟಿಎಂ ಲೇಔಟ್, ಇಂದಿರಾನಗರ ಮುಂತಾದ ಪ್ರತಿಷ್ಠಿತ ಬಡಾವಣೆಗಳಲ್ಲಿ ಗೂರ್ಖಾಗಳಿಲ್ಲದಿರುವುದನ್ನು ಮನಗಂಡ ಪೊಲೀಸರು ಹೆಚ್ಚುವರಿಯಾಗಿ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಕಳೆದ ರಾತ್ರಿಯಿಂದ ಈಶಾನ್ಯ ರಾಜ್ಯಗಳ ಜನರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ರಾತ್ರಿ ವೇಳೆ ಪೊಲೀಸರ ಗಸ್ತು ತಿರುಗಾಟ ಆರಂಭವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದ್ದಾರೆ.
ತಪ್ಪದ ಆತಂಕ : ವಿಲ್ಸನ್ ಗಾರ್ಡನ್ ನಲ್ಲಿ 6 ಮಂದಿಯನ್ನು ಸೆರೆ ಹಿಡಿದ ಸುದ್ದಿ ಎಲ್ಲೆಡೆ ಪ್ರಸಾರವಾದರೂ ಎಚ್ಚೆತ್ತುಕೊಳ್ಳದ ದುಷ್ಕರ್ಮಿಗಳು ನಗರ ಕೆಲವೆಡೆ ತಮ್ಮ ಕೈಚಳಕ ತೋರಿದ್ದಾರೆ.
ಬಿಟಿಎಂ ಲೇಔಟ್ ನಲ್ಲಿ ಮಣಿಪುರ ಮೂಲದ ಇಬ್ಬರು ಯುವಕ, ಯುವತಿಯರ ಮೇಲೆ ಕೋರಮಂಗಲ ಶಿವ ಟಾಕೀಸ್ ಬಳಿ ದುಷ್ಕರ್ಮಿಗಳು ಅಡ್ಡಗಟ್ಟಿ, ರಂಜಾನ್ ಮೊದಲು ಜಾಗ ಖಾಲಿ ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಹೆದರಿಸಿದ ಘಟನೆ ನಡೆದಿದೆ. ಆದರೆ, ಕೀಡಿಗೇಡಿಗಳನ್ನು ತಕ್ಷಣವೇ ಅಡ್ಡಗಡ್ಡಿ ಸೆರೆ ಹಿಡಿದ ಸಾರ್ವಜನಿಕರು ಆಡುಗೋಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಲ್ಸನ್ ಗಾರ್ಡನ್, ಆಡುಗೋಡಿ, ಆಶೋಕನಗರ, ಜೆಪಿ ನಗರ, ಮೈಕೋ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸುಮಾರು 7 ಹಲ್ಲೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ವಿಶೇಷ ರೈಲುಗಳ ಸೌಲಭ್ಯ: 3 ದಿನಗಳಲ್ಲಿ ಒಟ್ಟಾರೆ 6 ರೈಲುಗಳನ್ನು ಒದಗಿಸುವ ಮೂಲಕ ರೈಲ್ವೇ ಇಲಾಖೆ ಪ್ರಶಂಸೆಗೆ ಪಾತ್ರವಾಗಿದೆ. ವಿಪತ್ತು, ವಿಶೇಷ ಸಂದರ್ಭಗಳಲ್ಲಿ ಮಾತ್ರ ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ವಿಶೇಷ ರೈಲು ವ್ಯವಸ್ಥೆ ಮಾಡಲಾಗುತ್ತದೆ.
ಬೆಂಗಳೂರಿನಿಂದ ಹೊರಟ 2 ವಿಶೇಷ ರೈಲುಗಳು ಸುರಕ್ಷಿತವಾಗಿ ಗುವಹಾಟಿ ತಲುಪಿದೆ. ಮಿಕ್ಕ ರೈಲುಗಳು ಶನಿವಾರ ಸಂಜೆ ತಲುಪುವ ಸಾಧ್ಯತೆಯಿದೆ. ರಾಜ್ಯ ಸರ್ಕಾರಗಳ ಅವಿರತ ಮನವಿಯ ನಂತರವೂ ಬೆಂಗಳೂರು, ಚೆನ್ನೈ, ಕೊಯಮತ್ತೂರು, ಹೈದರಾಬಾದ್, ವಡೋದರ, ಪುಣೆ, ಮುಂಬೈ ಸೇರಿದಂತೆ ಹಲವೆಡೆಗಳಿಂದ ಈಶಾನ್ಯ ರಾಜ್ಯಗಳ ಜನ ಪ್ರವಾಹ ಹರಿಯುತ್ತಿದೆ.