ಮಳೀನ ಇಲ್ಲ ಎಲ್ಲಿಂದ ಸಾಲ ತೀರಿಸೋಣು ಹೇಳ್ರಿ?
ಬ್ಯಾಂಕ್ ಅಧಿಕಾರಿಗಳು ಹಣ ಪಾವತಿ ಮಾಡುವಂತೆ ಕಿರುಕುಳ ನೀಡುತ್ತಿದ್ದಾರೆ ಎನ್ನುವುದು ರೈತರ ಆರೋಪ. ಆದರೆ ಬ್ಯಾಂಕ್ ಅಧಿಕಾರಿಗಳು ರೈತರಿಗೆ ನಾವು ಯಾವುದೇ ಕಾರಣಕ್ಕೂ ಕಿರುಕುಳ ನೀಡಿಲ್ಲ ಸಾಲದ ಕಂತಿನ ಹಣ ಮತ್ತು ಬಡ್ಡಿ ಹಣ ಪಾವತಿ ಮಾಡಲು ಕೇಳಿದ್ದೇವಷ್ಟೆ. ಮರುಪಾವತಿ ಮಾಡಲು ಕೆಲ ತಿಂಗಳವರಗೆ ಅವಕಾಶ ಕೊಡಲಾಗಿದೆ ಅಂತಾರೆ.
"ಈಗಾಗಲೇ ಬ್ಯಾಂಕ್ ಅಧಿಕಾರಿಗಳು ಟ್ರಾಕ್ಟರ್ ಗಳನ್ನು ಜಪ್ತಿ ಮಾಡ್ಯಾರ. ಈಗ ಮಳೀನು ಇಲ್ಲ ಬೆಳೀನು ಇಲ್ಲ ಎಲ್ಲಿಂದ ಬ್ಯಾಂಕ್ ಸಾಲ ತೀರಿಸೋಣು ಹೇಳ್ರಿ" ಎಂದು ಅನ್ನದಾತರು ಅಲವತ್ತುಕೊಳ್ಳುತ್ತಿದ್ದಾರೆ. ಭಾರತೀಯ ಸ್ಟೇಟ್ ಬ್ಯಾಂಕ್ ಮುಂದೆ ರೈತರು ತಮಗೆ ನೀಡಿದ ಪತ್ರಗಳನ್ನು ಹಿಡಿದುಕೊಂಡು ನಿಂತಿದ್ದು, ದಯಮಾಡಿ ನಮ್ಮ ಟ್ರಾಕ್ಟರ್ ಗಳನ್ನು ಜಪ್ತಿ ಮಾಡಬೇಡಿ, ಚೆನ್ನಾಗಿ ಮಳೆಯಾದ್ರೆ ಸಾಲ ಮರುಪಾವತಿ ಮಾಡುತ್ತೇವೆ ಎಂದು ಗೋಗರೆಯುತ್ತಿದ್ದಾರೆ.
ಯಾದಗಿರಿ ತಾಲೂಕಿನ ಗುರುಮಠಕಲ್, ತಾತಳಗೇರಾ, ಗುಂಜನೂರು ಗ್ರಾಮದ ರೈತರು ಕೃಷಿ ಚಟುವಟಿಕೆಗೆ ಅನುಕೂಲವಾಗಲು ಎಸ್ ಬಿ ಐ ಬ್ಯಾಂಕ್ ಮೂಲಕ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು. ಕಳೇದ 4-5 ವರ್ಷದಿಂದ ಟ್ರಾಕ್ಟರ್ ಮೇಲಿನ ಸಾಲ ಮತ್ತು ಬಡ್ಡಿ ಪಾವತಿ ಮಾಡಿಲ್ಲ. ಈ ಕಾರಣದಿಂದಾಗಿ, ಬ್ಯಾಂಕ್ ಅಧಿಕಾರಿಗಳು ಕಂತಿನ ಹಣ ಮತ್ತು ಬಡ್ಡಿ ಪಾವತಿ ಮಾಡುವಂತೆ ರೈತರಿಗೆ, ಪತ್ರ ನೀಡಿದ್ದಾರೆ. ಸಾಲದ ಹಣ ಪಾವತಿ ಮಾಡಿ ಬ್ಯಾಂಕಿಗೆ ಅಡವು ಇಟ್ಟಿರುವ ಆಸ್ತಿಗಳನ್ನು ಬಿಡುಗಡೆ ಮಾಡಿಕೊಳ್ಳಬೆಕೆಂದು ಪತ್ರ ಬರೆದಿದ್ದಾರೆ.
ಬ್ಯಾಂಕಿನಿಂದ ನೂರಾರು ರೈತರು ಸಾಲ ಪಡೆದಿದ್ದಾರೆ. ಆದರೆ, ಮಳೆ ಕೈಕೊಟ್ಟಿದರಿಂದ ನಮ್ಮಲ್ಲಿ ಹಣವಿಲ್ಲ, ಹೀಗಾಗಿ, ನಮಗೆ ಕೆಲ ತಿಂಗಳವರಗೆ ಅವಕಾಶ ಕೊಡಬೇಕು, ಬ್ಯಾಂಕ್ ಅಧಿಕಾರಿಗಳು ಕಿರುಕುಳ ಕೊಡಬಾರದು, ಮುಂದಿನ ಬೆಳೆ ಬಂದ ನಂತರ, ಸಾಲದ ಮೇಲಿನ ಹಣ ಪಾವತಿ ಮಾಡುತ್ತೇವೆ ಎನ್ನುತ್ತಿದ್ದಾರೆ.
ಸದ್ಯಕ್ಕೆ ಬಡ್ಡಿ ಮನ್ನಾ ಮಾಡಿ ರೈತರಿಗೆ ರಾಜ್ಯ ಸರ್ಕಾರ ಅನುಕೂಲ ಮಾಡಲಿ ಎಂದು ರೈತರ ಒತ್ತಾಯವಾಗಿದೆ. ಇದರ ಬಗ್ಗೆ ಬ್ಯಾಂಕ್ ಅಧಿಕಾರಿ ಡಿ.ಡಿ.ಒಡೆಯರ್ ಅವರಿಗೆ ಕೇಳಿದ್ರೆ, ನಾವು ಯಾವುದೇ ರೀತಿಯಿಂದ ರೈತರಿಗೆ ಕಿರುಕುಳ ನೀಡುತ್ತಿಲ್ಲ. ಯಾರು ಸಾಲ ಪಾವತಿ ಮಾಡುವ ಸಾಮರ್ಥ್ಯ ಹೊಂದಿದ್ದಾರೋ ಅವರು ಪಾವತಿ ಮಾಡಬಹುದು. ಇಲ್ಲದಿದ್ದರೆ ಮುಂದಿನ ಕೆಲ ತಿಂಗಳ ನಂತರ ಹಣವಿದ್ದಾಗ ಪಾವತಿ ಮಾಡಿ ಬ್ಯಾಂಕ್ ನ ಸೌಲಭ್ಯ ಪಡೆಯಬಹುದು ಎನ್ನುತ್ತಾರೆ.
ಯಾದಗಿರಿ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಕಳೆದ ವರ್ಷವೂ ಸರಿಯಾಗಿ ಬೆಳೆ ಬರದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದರು ಈ ಸಾರಿಯಾದ್ರು ಮಳೆಯಾದ್ರೆ ಬೆಳೆ ಬೆಳೆಯಬೇಕು ಎಂದುಕೊಂಡಿದ್ದ ರೈತರು ಮತ್ತೆ ಬರಗಾಲಕ್ಕೆ ತತ್ತರಿಸಿದ್ದಾರೆ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿರುವ ಸರಕಾರ ಯಾದಗಿರಿ ರೈತರ ಸಂಕಷ್ಟಕ್ಕೆ ಧಾವಿಸಬೇಕಿದೆ. ಜಿಲ್ಲೆಯ ರೈತರಿಂದ ಮತ ಪಡೆದ ಶಾಸಕರು ಬೆಂಗಳೂರಿನಲ್ಲಿ ಕೂಡದೆ ಜಿಲ್ಲೆಗೆ ಬಂದು ಪರಿಹಾರ ದೊರಕಿಸಬೇಕಿದೆ ಎನ್ನುತ್ತಾರೆ ರೈತರು.