ಲೋಕಾಯುಕ್ತ ಪ್ರಶ್ನೆಗಳಿಗೆ ಡಿಕೆ ಶಿವಕುಮಾರ್ ತತ್ತರ

ಲೋಕಾಯುಕ್ತ ಎಸ್ ಪಿ ಪಿಕೆ ಶಿವಶಂಕರ್, ಡಿವೈಎಸ್ ಪಿ ಪಾಲಾಕ್ಷಯ್ಯ ಅವರಿದ್ದ ತಂಡ ಸುಮಾರು 35 ಪ್ರಶ್ನೆಗಳನ್ನು ಡಿಕೆ ಶಿವಕುಮಾರ್ ಅವರತ್ತ ಎಸೆದಿದ್ದಾರೆ. ಡಿಕೆ ಶಿವಕುಮಾರ್ ಮಾತ್ರ ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನಪಟ್ಟಿದ್ದು ಬಿಟ್ಟರೆ, ಹಲವು ಪ್ರಶ್ನೆಗಳಿಗೆ ಉತ್ತರಿಸಲು ಇನ್ನೂ ಕಾಲಾವಕಾಶ ಬೇಕು ಎಂದಿದ್ದಾರೆ.
ಡಿಕೆ ಶಿವಕುಮಾರ್ ಅವರ ಅಸಮರ್ಪಕ ಉತ್ತರದಿಂದ ಬೇಸತ್ತ ಲೋಕಾಯುಕ್ತ ಅಧಿಕಾರಿಗಳು, ಬೇರೆ ವಿಧಿವಿಲ್ಲದೆ ಡಿಕೆ ಶಿವಕುಮಾರ್ ಅವರಿಗೆ ದಾಖಲೆ ಸಮೇತ ವಿವರಿಸಲು ಕಾಲಾವಕಾಶ ನೀಡಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ 5.11 ಎಕರೆ ಜಮೀನನ್ನು ಅಕ್ರಮವಾಗಿ ಡಿ ನೋಟಿಫೈ ಮಾಡಿಸಿಕೊಂಡಿದ್ದ ಆರೋಪವನ್ನು ಡಿಕೆ ಶಿವಕುಮಾರ್ ಹೊಂದಿದ್ದಾರೆ.
ಹಳೆ ಮದರಾಸು ರಸ್ತೆಯ ಬೆನ್ನಿಗಾನಹಳ್ಳಿಯಲ್ಲಿ ಹೊಸ ಬಡಾವಣೆ ನಿರ್ಮಾಣಕ್ಕೆ 1984ರಲ್ಲಿಯೇ ಬಿಡಿಎ ನೋಟಿಫೈ ಮಾಡಿದ್ದ 5.11 ಎಕರೆ ಜಮೀನನ್ನು ಡಿಕೆ ಶಿವಕುಮಾರ್ ಕಾನೂನು ಬಾಹಿರವಾಗಿ ಡಿನೋಟಿಫೈ ಮಾಡಿಸಿಕೊಂಡಿದ್ದರು. ಮಾಜಿ ಮುಖ್ಯಮಂತ್ರಿ ಯಡೀಯೂರಪ್ಪ ಅವರು 2010ರ ಮಾರ್ಚ್ 13 ರಂದು 5.1 ಎಕರೆ ಜಮೀನನ್ನು ಡಿನೋಟಿಫೈ ಮಾಡಿ ಆದೇಶ ಹೊರಡಿಸಿದ್ದರು.
ಮೆಟ್ರೋ ಟರ್ಮಿನಲ್ ಸಮೀಪ ಇರುವ 1.62 ಕೋಟಿ ರುಪಾಯಿಗೆ ಖರೀದಿ ಮಾಡಲಾಗಿತ್ತು. ಮಾರುಕಟ್ಟೆ ಮೌಲ್ಯ 40 ಕೋಟಿ ರು,ಗೂ ಅಧಿಕವಾಗಿದ್ದರೂ ಕಡಿಮೆ ಬೆಲೆ ಮಾರಾಟ ಮಾಡಲಾಗಿದೆ ಎಂದು ಟಿಜೆ ಅಬ್ರಹಾಂ ಅವರು ಲೋಕಾಯುಕ್ತ ಕೋರ್ಟಿಗೆ ಮೊರೆ ಹೊಕ್ಕಿದ್ದರು.
ಟಿಜೆ ಅಬ್ರಹಾಂ ಅವರು ಸಲ್ಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿದ ನ್ಯಾ. ಎನ್ ಕೆ ಸುಧೀಂದ್ರ ರಾವ್ ಅವರು ಪ್ರಕರಣದ ತನಿಖೆ ನಡೆಸುವಂತೆ ಲೋಕಾಯುಕ್ತ ಪೊಲೀಸರಿಗೆ ನಿರ್ದೇಶಿಸಿದ್ದರು. ಈ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಡಿಕೆ ಶಿವಕುಮಾರ್ ಅವರು ವಿಚಾರಣೆಗೆ ಸರಿಯಾಗಿ ಸ್ಪಂದಿಸದಿದ್ದರೆ, ಲೋಕಾಯುಕ್ತ ಪೊಲೀಸರು ಡಿಕೆಶಿಯನ್ನು ವಶಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ಹೊಂದಿದ್ದಾರೆ.












Click it and Unblock the Notifications