ನಡುರಸ್ತೆಯಲ್ಲೇ ಯುವತಿ ಕೊರಳ ಕೊಯ್ದು ಹತ್ಯೆ
ಸೋಮವಾರ(ಮೇ.28) ಇಳಿಸಂಜೆ ಹೊತ್ತಲ್ಲಿ ಬಿಟಿಎಂ ಲೇಔಟ್ ನ 2ನೇ ಹಂತದ 7ನೇ ಮುಖ್ಯರಸ್ತೆ, 7ನೇ ಅಡ್ಡರಸ್ತೆಯಲ್ಲಿ ದಿವ್ಯಾ ಎಂಬ ಯುವತಿಯ ಹತ್ಯೆಯಾಗಿದೆ.
ಉಡುಪಿ ಜಿಲ್ಲೆ ಸಾಲಿಗ್ರಾಮ ಮೂಲದ ದಿವ್ಯಾ ಶ್ಯಾಮ ಎನ್ ಎಸ್ ಪಾಳ್ಯದಲ್ಲಿ ವಾಸವಾಗಿದ್ದಳು. ತಾವರೆಕೆರೆ ಮುಖ್ಯರಸ್ತೆಯಲ್ಲಿರುವ AstroMueller ಎಂಬ ಶೂ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಳು.
ಸೋಮವಾರ ಸಂಜೆ ಸುಮಾರು 6.50ರ ಹೊತ್ತಿಗೆ ಬೈಕಿನಿಂದ ಇಬ್ಬರು ದುಷ್ಕರ್ಮಿಗಳೂ ಬಂದು ಆಕೆ ಮೇಲೆ ಹಲ್ಲೆ ಮಾಡಿದ್ದಾರೆ. ಮಚ್ಚು, ಲಾಂಗ್ ನಂಥ ಆಯುಧಗಳಿಂದ ಆಕೆ ಕೊರಳನ್ನು ಕೊಯ್ದಿದ್ದಾರೆ. ಸುತ್ತಮುತ್ತಲಿದ್ದ ಅಂಗಡಿಯವರು, ಸಾರ್ವಜನಿಕರು ಈ ದಾರುಣ ಘಟನೆಯನ್ನು ಮೂಕ ಪ್ರೇಕ್ಷಕರಾಗಿ ನಿಂತು ನೋಡಿದ್ದಾರೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ದಿವ್ಯಾಳನ್ನು ಸಾಗರ್ ಅಪೊಲೋ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ತೀವ್ರವಾದ ರಕ್ತ ಸೋರಿಕೆಯಿಂದ ಅಸ್ವಸ್ಥಲಾಗಿದ್ದ ದಿವ್ಯಾ ಆಸ್ಪತ್ರೆಯಲ್ಲಿ ಅಸುನೀಗಿದ್ದಾಳೆ.
'ನಾನು ಹತ್ತಿರವಿದ್ದ ಬೇಕರಿ ಕಡೆಗೆ ನಡೆದುಕೊಂಡು ಹೋಗುತ್ತಿದ್ದೆ. ಯಾರೋ ಜೋರಾಗಿ ಕೂಗಿದ ಶಬ್ದ ಕೇಳಿ ಬಂತು. ನಾನು ತಿರುಗಿ ನೋಡುವಷ್ಟರಲ್ಲಿ ಇಬ್ಬರು ಬೈಕಿನಲ್ಲಿ ಹೋಗುತ್ತಿದ್ದರು. ಹುಡುಗಿ ಕುತ್ತಿಗೆ ಹಿಡಿದುಕೊಂಡು ಕುಸಿದು ಬೀಳುತ್ತಿದ್ದಳು. ಸಿನಿಮಾದಲ್ಲಿ ನೋಡೋ ಕ್ರೈ ಸೀನ್ ಇದ್ದ ಹಾಗೆ ಇತ್ತು' ಎಂದು ಪ್ರತ್ಯಕ್ಷದರ್ಶಿ ರಾಜಪ್ಪ ವಿವರಿಸುತ್ತಾರೆ.
ಮೇಲ್ನೋಟಕ್ಕೆ ಇದು ಪ್ರೇಮ ಪ್ರಕರಣ ಎಂದು ತಿಳಿದು ಬಂದಿದೆ. ದುಷ್ಕರ್ಮಿ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು. ಮೈಕೋ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಡಿಸಿಪಿ ಹರ್ಷ ಹೇಳಿದ್ದಾರೆ.
ಈ ಮುಂಚೆ ದಿವ್ಯಾ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಇತ್ತೀಚೆಗೆ ಪ್ರದೀಪ್ ಎಂಬ ಇನ್ನೊಬ್ಬ ಯುವಕನ ಜೊತೆ ಸಂಪರ್ಕ ಹೊಂದಿದ್ದಳು ಎಂದು ತಿಳಿದುಬಂದಿದೆ. ದಿವ್ಯಾಳ ಹೆತ್ತವರಿಗೆ ವಿಷಯ ತಿಳಿಸಲಾಗಿದೆ ಎಂದು ಡಿಸಿಪಿ ಹರ್ಷ ಹೇಳಿದ್ದಾರೆ.