ಎನ್ಸಿಟಿಸಿ ಪ್ರಸ್ತಾವನೆಗೆ ಸದಾನಂದ ಗೌಡ ವಿರೋಧ

ಅವರು, ಆಂತರಿಕ ಭದ್ರತೆಯ ಬಗ್ಗೆ ಪ್ರಧಾನ ಮಂತ್ರಿಗಳು ಏ. 14, ಮಂಗಳವಾರ ನವದೆಹಲಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿ, ಸರಕಾರದ ಉದ್ದೇಶಿತ ಎನ್.ಸಿ.ಟಿ.ಸಿ ಪ್ರಸ್ತಾವನೆ ವಿರೋಧಿಸಿ ಇತರ ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ ಮಾತಿಗೆ ತಮ್ಮ ಸಹಮತ ವ್ಯಕ್ತಪಡಿಸಿದರು. ಕೇಂದ್ರದ ನಿಲುವನ್ನು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮುಂತಾದವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಗಡಿನಾಡಿನಿಂದ ದೂರವಿರುವ ಪ್ರದೇಶಗಳಲ್ಲಿ ಬಿ.ಎಸ್.ಎಫ್ ತುಕಡಿಗಳು ಕಾರ್ಯ ನಿರ್ವಹಿಸುವಾಗ ಅವುಗಳಿಗೆ ಶೋಧನೆ, ವಸ್ತುಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳುವುದು ಮತ್ತು ಬಂಧಿಸುವ ಅಧಿಕಾರವನ್ನು ಕೊಡುವ ಉದ್ದೇಶಿತ ಬಿ.ಎಸ್.ಎಫ್ ಕಾಯ್ದೆ 1968ಕ್ಕೆ ತಿದ್ದುಪಡಿ ಪ್ರಸ್ತಾವನೆಯನ್ನು ಮರುಪರಿಗಣಿಸಬೇಕೆಂದು ಕೇಂದ್ರ ಸರ್ಕಾರವನ್ನು ಸದಾನಂದ ಗೌಡ ಆಗ್ರಹಿಸಿದರು.
ಹಲವು ನಕ್ಸಲ್ ಪೀಡಿತ ರಾಜ್ಯಗಳಿಗೆ ಹೆಚ್ಚುವರಿ ಪ್ಯಾರಾಮಿಲಿಟರಿ ತುಕಡಿಗಳು, ಆರ್ಥಿಕ ಅನುದಾನ, ಹಾಗೂ ಅರಣ್ಯ ಮತ್ತು ಪರಿಸರ ಕಾನೂನುಗಳ ಅನುಷ್ಠಾನದಲ್ಲಿ ರಿಯಾಯಿತಿ ಮುಂತಾದವುಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಆದರೆ ನಕ್ಸಲ್ ಸಮಸ್ಯೆಯಿಂದ ತೊಂದರೆಗೀಡಾಗಿರುವ ಕರ್ನಾಟಕ ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ನೆರವು ಲಭಿಸುತ್ತಿಲ್ಲ ಎಂದು ಅವರು ಆರೋಪಿಸಿದರು.
ಕರಾವಳಿ ರಕ್ಷಣಾಪಡೆ, ನೌಕಾದಳ ಹಾಗೂ ಕರಾವಳಿ ಪೊಲೀಸರ ನಡುವೆ ಹಾಲಿ ಇರುವ ಸಂವಹನ ವ್ಯವಸ್ಥೆಯಲ್ಲಿ ಹಲವಾರು ನ್ಯೂನತೆಗಳಿದ್ದು, ಈ ಮೂರು ಘಟಕಗಳ ನಡುವೆ ಅವಶ್ಯಕ ಮತ್ತು ಉಪಯುಕ್ತವಾದ ಸಂಪರ್ಕ ಮೂಡಿಸಲು ಉದ್ದೇಶಿತ ಸಮಗ್ರ ಸಂವಹನ ಯೋಜನೆಯನ್ನು ಆದಷ್ಟು ಶೀಘ್ರವಾಗಿ ಅನುಷ್ಠಾನಗೊಳಿಸಲು ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಮೇಲಿನ ಅಂಶಗಳ ಜೊತೆಗೆ ಈ ಕೆಳಕಂಡ ವಿಷಯಗಳ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದರು.
* ಸೈಬರ್ ಅಪರಾಧದ ತನಿಖೆಗೆ ಕೇಂದ್ರಿಯ ತನಿಖಾ ಸಂಸ್ಥೆಗಳು, ಅದರಲ್ಲಿಯೂ ವಿಶೇಷವಾಗಿ ಸಿಬಿಐ ಮತ್ತು ರಾ (ಆರ್ ಎ ಡಬ್ಲ್ಯೂ) ಸಹಕಾರ ಹಾಗೂ ಬೆಂಬಲ ನೀಡುವುದು.
* ಪೊಲೀಸ್ ವ್ಯವಸ್ಥೆಯ ಆಧುನೀಕರಣ ಯೋಜನೆಯನ್ನು ಮುಂದುವರೆಸುವುದು, ನೆರವು ಹಾಗೂ ವ್ಯಾಪ್ತಿ ವಿಸ್ತಾರಪಡಿಸುವುದು.
* ಇಡೀ ದೇಶಕ್ಕೆ ಅನ್ವಯವಾಗುವ ಸಮಗ್ರ ತರಬೇತಿ ಕಾರ್ಯಕ್ರಮವನ್ನು ರೂಪಿಸಿ ಅನುಷ್ಠಾನ ಮಾಡುವುದು.












Click it and Unblock the Notifications