ಸಿಟಿ ರವಿ ಬಚಾವ್- ಪತ್ನಿ ಪಲ್ಲವಿಗೆ ಕಿರಿಕ್
ಆದರೆ, ಈ ಪ್ರಕರಣದಲ್ಲಿ ರವಿ ಅವರ ಪತ್ನಿ ಪಲ್ಲವಿ ಸಿಎ ಮಾದರಿ ನಿವೇಶನ ಪಡೆಯುವ ಉದ್ದೇಶದಿಂದ ಆಂಜನೇಯ ವಿದ್ಯಾಸಂಸ್ಥೆ ಪದಾಧಿಕಾರಿಗಳೆಂದು ಸುಳ್ಳು ದಾಖಲೆ ಸೃಷ್ಟಿಸಿದ್ದರು. ಈ ರೀತಿ ನಕಲಿ ದಾಖಲೆ ಸೃಷ್ಟಿಸಿ ಸಿಎ ನಿವೇಶ ಪಡೆದಿರುವುದು ಲೋಕಾಯುಕ್ತರ ತನಿಖೆಯಿಂದ ಸಾಬೀತಾಗಿದೆ.
ಪಲ್ಲವಿ, ಅವರ ಸೋದರ ಸುದರ್ಶನ್ ಮತ್ತು ಕರ್ನಾಟಕ ಹೌಸಿಂಗ್ ಬೋರ್ಡ್ ಅಧಿಕಾರಿಯೊಬ್ಬರ ಮೇಲಿನ ಆರೋಪಗಳು ಸಾಬೀತಾಗಿದೆ. ಮೂವರ ಮೇಲೂ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಜತೆಗೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಾಸಕರ ಪತ್ನಿ ಪಲ್ಲವಿ ಹೆಸರಿನಲ್ಲಿ ಮಂಜೂರಾಗಿರುವ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿ ತನಿಖಾಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಕರ್ನಾಟಕ ಗೃಹ ಮಂಡಳಿ ಆಯುಕ್ತರಿಗೆ ಪತ್ರ ಕೂಡ ಬರೆದಿದ್ದಾರೆ.
ಇನ್ನೊಂದೆಡೆ, ಸಿ.ಟಿ. ರವಿ ಹೆಸರಿನಲ್ಲಿ 1997ರಲ್ಲಿ ಚಿಕ್ಕಮಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ವಸತಿ ನಿವೇಶನ ಪಡೆದುಕೊಂಡಿದ್ದರು. ಹೀಗಿದ್ದರೂ, ಪತ್ನಿ ಪಲ್ಲವಿ ಅವರು ಕಾನೂನು ಉಲ್ಲಂಘಿಸಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ಎರಡು ನಿವೇಶನ ಪಡೆದಿರುವುದು ನಿಜ ಎನ್ನುವುದನ್ನು ಕೂಡ ಲೋಕಾಯುಕ್ತ ಪೊಲೀಸರ ತನಿಖೆ ದೃಢಪಡಿಸಿದೆ. ಹೀಗಾಗಿ, ಪತ್ನಿ ಪಲ್ಲವಿ ಮೇಲಿನ ಎರಡೂ ಆರೋಪಗಳು ಸಾಬೀತಾಗಿವೆ.
ಸ್ಥಳೀಯ ಶಾಸಕ ಸಿಟಿ ರವಿ ನಕಲಿ ದಾಖಲೆ ಸೃಷ್ಟಿಸಿ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯಿಂದ ಚಿಕ್ಕಮಗಳೂರಿನಲ್ಲಿ ನಿವೇಶನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಚಿಕ್ಕಮಗಳೂರು ನಗರಸಭೆ ಸದಸ್ಯ ದೇವಿಪ್ರಸಾದ್ ಎಂಬವರು ಲೋಕಾಯುಕ್ತ ಕೋರ್ಟ್ಗೆ 2011ರ ಡಿಸೆಂಬರ್ನಲ್ಲಿ ದೂರು ನೀಡಿದ್ದರು.
ಶಾಸಕ ಸಿಟಿ ರವಿ ಮತ್ತು ಕುಟುಂಬವು ನಕಲಿ ದಾಖಲೆ ಸೃಷ್ಟಿಸಿ ಹೌಸಿಂಗ್ ಬೋರ್ಡ್ನಿಂದ ಚಿಕ್ಕಮಗಳೂರಿನಲ್ಲಿ 39,000 ಅಡಿಗಳ ನಿವೇಶ ಪಡೆದುಕೊಂಡಿದ್ದಾರೆ. ಅಲ್ಲದೆ ಕುಟುಂಬದ ಸದಸ್ಯರ ಹೆಸರಿನಲ್ಲಿ ವಸತಿ ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದರು.
ಈ ಪ್ರಕರಣದಲ್ಲಿ ಸಿಟಿ ರವಿ ಪತ್ನಿ ಪಲ್ಲವಿ ರವಿ, ಕರ್ನಾಟಕ ಹೌಸಿಂಗ್ ಬೋರ್ಡ್ ಆಯುಕ್ತ ಲಕ್ಷ್ಮಿನಾರಾಯಣ ಸೇರಿದಂತೆ ಒಟ್ಟು 11 ಮಂದಿ ವಿರುದ್ಧ ಆರೋಪ ಹೊರಿಸಲಾಗಿತ್ತು. ದೂರು ಸ್ವೀಕರಿಸಿದ್ದ ನ್ಯಾಯಾಲಯ ಆರೋಪಗಳ ಬಗ್ಗೆ ತನಿಖೆಗೆ ಲೋಕಾಯುಕ್ತ ಬೆಂಗಳೂರು ವಿಭಾಗ ಪೊಲೀಸರಿಗೆ ಆದೇಶಿಸಿತ್ತು. ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು ಇದೀಗ ಕೋರ್ಟ್ಗೆ ಅಂತಿಮ ತನಿಖಾ ವರದಿ ಸಲ್ಲಿಸಿದ್ದಾರೆ.