ಯೋಗೀಶ್ವರ್ ವಿರುದ್ಧ ನೈಸ್ ಆಗಿ ಬಿತ್ತು ವಂಚನೆ ಕೇಸು

ತಮ್ಮ ಸಂಸ್ಥೆಗೆ ಎರಡು ಕೋಟಿ ರೂ. ವಂಚನೆ ಮಾಡಿರುವ ಆರೋಪದಲ್ಲಿ ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ವಿರುದ್ಧ ಎಫ್ಐಆರ್ ದಾಖಲಿಸಲು ವಿಧಾನಸೌಧ ಪೊಲೀಸರು ಹಿಂದೇಟು ಹಾಕಿರುವ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿದ್ದು, ವಿಪಕ್ಷದ ಒತ್ತಾಯಕ್ಕೆ ಮಣಿದ ಸರಕಾರ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದ ಘಟನೆ ಬುಧವಾರ ನಡೆದಿದೆ.
ಏನಾಯಿತೆಂದರೆ... ಸಚಿವ ಯೋಗೀಶ್ವರ್ ನೈಸ್ ಸಂಸ್ಥೆಗೆ 2 ಕೋಟಿ ರೂ. ವಂಚಿಸಿದ್ದಾರೆ. ಆ ಸಂಬಂಧ ನೈಸ್ ಸಂಸ್ಥೆಯವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸಲು ನಿರಾಕರಿಸಿದ್ದಾರೆ ಎಂದು ವಿಧಾನಸಭೆಯಲ್ಲಿ ಡಿ.ಕೆ. ಶಿವಕುಮಾರ್ ಬುಧವಾರ ವಿಷಯ ಪ್ರಸ್ತಾಪಿಸಿದರು.
ಅಧಿಕಾರ ಬಳಸಿ ಕೊಂಡು ಸಚಿವರ ವಿರುದ್ಧ ಎಫ್ಐಆರ್ ದಾಖಲಾಗದಂತೆ ನೋಡಿಕೊಳ್ಳಲಾಗಿದೆ. ಆರೋಪಿಯನ್ನು ರಕ್ಷಿಸುವ ಕಾರ್ಯ ನಡೆದಿದ್ದು, ಕೂಡಲೇ ಎಫ್ಐಆರ್ ದಾಖಲಿಸಿಕೊಳ್ಳಲು ಸರಕಾರ ಸೂಚನೆ ನೀಡಬೇಕು ಎಂದು ಅವರು ಒತ್ತಾಯಿಸಿದರು.
ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ತನ್ನ ಮೇಲೆ ಯಾವುದೇ ತನಿಖೆ ಮಾಡದೆ ಎಫ್ಐಆರ್ ದಾಖಲಾಗಿದ್ದು, ಸಚಿವರೊಬ್ಬರ ಮೇಲೆ ಯಾವ ಕಾರಣಕ್ಕಾಗಿ ಎಫ್ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕಿದ್ದಾರೆ ಎಂದು ಡಿಕೆಶಿ ಪ್ರಶ್ನಿಸಿದರು. ಯೋಗೀಶ್ವರ್ ವಿರುದ್ಧ ಎಫ್ಐಆರ್ ದಾಖಲಿಸಬೇಕು, ಬಳಿಕ ತನಿಖೆ ನಡೆಸಿ ಸತ್ಯಾಸತ್ಯದ ಬಗ್ಗೆ ಪರಾಮರ್ಶೆ ನಡೆಯಲಿ. ತಪ್ಪಿತಸ್ಥರಾದರೆ ಅವರಿಗೆ ಶಿಕ್ಷೆಯಾಗಬೇಕು ಎಂದು ಡಿಕೆಶಿ ಸಭಾಧ್ಯಕ್ಷರನ್ನು ಕೋರಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸಂಸದೀಯ ಸಚಿವ ಸುರೇಶ್ ಕುಮಾರ್ ಮಾತನಾಡಿ, ಅರಣ್ಯ ಸಚಿವ ಸಿ.ಪಿ. ಯೋಗೀಶ್ವರ್ ವಿರುದ್ಧ 2 ಕೋಟಿ ರೂ. ವಂಚಿಸಿರುವ ಕುರಿತು ಕೂಡಲೇ ಎಫ್ಐಆರ್ ದಾಖಲಿಸಿಕೊಳ್ಳುವಂತೆ ವಿಧಾನಸೌಧ ಠಾಣೆ ಪೊಲೀಸರಿಗೆ ಸೂಚನೆ ನೀಡಲಾಗುವುದು ಎಂದರು.












Click it and Unblock the Notifications