ಅರೆಸ್ಟ್ ವಾರಂಟ್ ಸಂತೋಷ ತಂದಿಲ್ಲ: ಕುಮಾರಸ್ವಾಮಿ!

ಅದಕ್ಕೆ ಕಾರಣವಾಗಿದ್ದು ಕುಮಾರಸ್ವಾಮಿಯವರದೇ ಸ್ವಂತ ಮಾತು! ಯಡಿಯೂರಪ್ಪ ಜಾಮೀನು ಅರ್ಜಿ ತಿರಸ್ಕೃತಗೊಂಡು ಲೋಕಾಯುಕ್ತ ವಿಶೇಷ ನ್ಯಾಯಾಲಯದಿಂದ ಅರೆಸ್ಟ್ ವಾರಂಟ್ ಜಾರಿಯಾಗುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ತಾವು ಯಡಿಯೂರಪ್ಪನವರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ ಎಂದಿದ್ದಾರೆ.
"ಯಡಿಯೂರಪ್ಪ ಪ್ರಕರಣದಿಂದ ರಾಜಕಾರಣಿಗಳ ಬಗ್ಗೆ ಜನತೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ವೈಯಕ್ತಿಕವಾಗಿ ನನಗೆ ಈ ಘಟನೆಯಿಂದ ಸಂತೋಷವಾಗಿಲ್ಲ. ಜನನಾಯಕರು ತಪ್ಪು ಹಾದಿಯಲ್ಲಿ ನಡೆಯಬಾರದು. ಇದರಿಂದ ರಾಜಕಾರಣಿಗಳೆಲ್ಲರೂ ತಲೆತಗ್ಗಿಸುವಂತಾಗಿದೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಮುಂದುವರಿದ ಅವರು "ಆದರೆ ಕಾಂಗ್ರೆಸ್ ನಾಯಕರ ವರ್ತನೆ ಆಶ್ಚರ್ಯ ತಂದಿದೆ. ಶಿವಮೊಗ್ಗಾದಲ್ಲಿ ಸೇರಿದ್ದ ಕಾಂಗ್ರೆಸ್ ನಾಯಕರು ಕೇಕೆ ಹಾಕಿ ವಿಜಯೋತ್ಸವ ಆಚರಿಸುತ್ತಿದ್ದಾರೆ. ಇವರೆಲ್ಲಾ ಕೇಂದ್ರದಲ್ಲಿರುವ ಕಾಂಗ್ರೆಸ್ ನಾಯಕರ ಪ್ರತಿನಿಧಿಗಳಂತಿದ್ದು ಅವರ ವರ್ತನೆಗಳನ್ನೇ ನೆನಪಿಸುವಂತಿದ್ದಾರೆ. ಇವರ ಈ ನಡೆಯಿಂದ ಜನಸಾಮಾನ್ಯರು ರಾಜಕಾರಣಿಗಳ ಬಗ್ಗೆ ಲಘುವಾಗಿ ಮಾತನಾಡುವಂತಾಗುತ್ತದೆ" ಎಂದಿದ್ದಾರೆ.
ಒಂದು ಕಾಲದ ಮಿತ್ರರು, ಈಗ ಶತ್ರುಗಳಂತೆ ಬಡಿದಾಡುತ್ತಿರುವ ಈ ಮಾಜಿ ಸಿಎಂಗಳಿಬ್ಬರ ನಡೆ-ನುಡಿ ಯಾವಾಗ ಹೇಗೆ ಬದಲಾಗುತ್ತದೆ ಎಂಬುದು ಸ್ವತಃ ಅವರಿಗೇ ತಿಳಿದಿಲ್ಲವೇನೋ ಎಂಬ ಸಂಶಯ ಮೂಡುವಂತಿದೆ. ಅಥವಾ ತನ್ನ ತಲೆಯ ಮೇಲೆ ತೂಗುತ್ತಿರುವ 'ತೂಗುಗತ್ತಿ' ಕುಮಾರಸ್ವಾಮಿಗೆ ನೆನಪಾಗಿರಬಹುದೇನೋ!
ಜನರಂತೂ ನಿಜವಾಗಿಯೂ ಈಗ ತಲೆತಗ್ಗಿಸಲೇಬೇಕು. ಎಂತೆಂಥವರನ್ನೆಲ್ಲಾ ಆಯ್ಕೆ ಮಾಡಿ ನಮ್ಮ ನಾಯಕರೆಂದು ಒಪ್ಪಿಕೊಂಡು ಅವರ ಕೈಗೆ ಅಧಿಕಾರ ಕೊಟ್ಟು ತಮ್ಮ ಕೈಗೆ ಚಿಪ್ಪು ತಂದುಕೊಂಡಿದ್ದಕ್ಕೆ ಸಂತೋಷಪಡಲಾದೀತೇ?! ಮುಂದೆ ರಾಜಕಾರಣಿಗಳಲ್ಲಿ ಯಾರನ್ನು ನಂಬುವುದು ಯಾರನ್ನಲ್ಲ ಎಂಬ ಗೊಂದಲ ಜನರಲ್ಲಿ ಇನ್ನೂ ಹೆಚ್ಚಾಗಬಹುದಾದ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ!












Click it and Unblock the Notifications