ಮುಖಾಮುಖಿ: ಆರಂಭದಲ್ಲೇ ‘ಕೈ’ ಕಟ್, ಬಾಯಿ ಮುಚ್

ಇದೇ ವೇಳೆ ಮತದಾರರೊಂದಿಗೆ ಮುಖಾಮುಖಿ ನಡೆಸಲು ಹೋಗಿ ಕಾರ್ಯಕರ್ತರು ನೇರವಾಗಿ ಮುಖ-ಮುಖಕ್ಕೆ ಗುದ್ದಿಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಇಂತಹ ದುಃಸ್ಥಿತಿಗೆ ತಲುಪಿರುವುದನ್ನು ನೋಡಿ ಮತದಾರ ಪ್ರಭುಗಳು ಮುಸಿಮುಸಿ ನಗುವಂತಾಗಿದೆ.
ಕೊನೆಗೆ, ತಮ್ಮ ಭಾಷಣದ ಸರದಿ ಬಂದಾಗ ಕೆಪಿಸಿಸಿಯ ಘನವೆತ್ತ ಅಧ್ಯಕ್ಷ ಮಹೋದಯ್ ಡಾ. ಪರಮೇಶಿ, ಕಾರ್ಯಕ್ರಮದಲ್ಲಿ ಗೊಂದಲ ಸೃಷ್ಟಿಸಿ ಅಶಿಸ್ತಿಗೆ ಕಾರಣಕರ್ತರಾದ ಕಾರ್ಯಕರ್ತರ ವಿರುದ್ಧ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಕೈ ಅಂಗಳ ಸಾರಿಸಿದ್ದಾರೆ.
ಭಾನುವಾರ ಏನಾಯಿತೆಂದರೆ... ಇಲ್ಲಿ ನಡೆದ ಮೊದಲ ಸಭೆಯಲ್ಲಿ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಸೇರಿದಂತೆ ಇನ್ನಿತರ ನಾಯಕರು ಭಾಗವಹಿಸಿದ್ದರು. ನಾಯಕರ ಎದುರೇ ತುರುವನೂರು ಗ್ರಾಮದ ಕಾಕಿ ಹನುಮಂತರೆಡ್ಡಿ ಎಂಬವರಿಗೆ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರೆಡ್ಡಿ ಮತ್ತು ಆತನ ಬೆಂಬಲಿಗರು ಹಿಗ್ಗಾಮುಗ್ಗ ಥಳಿಸಿ, ಸಭೆಯಿಂದ ಹೊರ ಕರೆದುಕೊಂಡು ಹೋದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೆಲವು ಮುಖಂಡರ ಹೆಸರನ್ನು ಮೊದಲು ಹೇಳಬೇಕೆಂಬ ಕಾರಣಕ್ಕೆ ಆರಂಭವಾದ ಗದ್ದಲ ಮಾತಿಗೆ ಮಾತು ಬೆಳೆದು ಪರಸ್ಪರ ಕೈ-ಕೈ ಮಿಲಾಯಿಸುವ ಪರಿಸ್ಥಿತಿಗೆ ತಿರುಗಿತು. ಜಿಲ್ಲಾ ಪಂಚಾಯತ್ ಸದಸ್ಯ ಬಾಬುರೆಡ್ಡಿ ಮತ್ತು ಆತನ ಕೆಲವು ಬೆಂಬಲಿಗರು ಹನುಮಂತರೆಡ್ಡಿಯ ಮೇಲೆ ಏಕಾಏಕಿ ಹಲ್ಲೆಗೆ ಮುಂದಾಗಿ ಥಳಿಸುವ ಮೂಲಕ ಕಾಂಗ್ರೆಸ್ ಮುಖಂಡರಿಗೆ ಇರಸುಮುರಸು ಉಂಟುಮಾಡಿದರು.
ಆದರೆ ಜಿಲ್ಲಾ ಪಂಚಾಯತ್ ಸದಸ್ಯರೊಬ್ಬರು ಕಾರ್ಯಕರ್ತನನ್ನು ಹೊಡೆಯುತ್ತಿದ್ದರೂ, ವೇದಿಕೆಯಲ್ಲಿ ವಿರಾಜಮಾನರಾಗಿದ್ದ ಯಾವೊಬ್ಬ ಮುಖಂಡನಾಗಲಿ ಆತನ ಸಹಾಯಕ್ಕೆ ಬಾರದೆ ಅಚ್ಚರಿ ಮೂಡಿಸಿದರು.












Click it and Unblock the Notifications