ರಾಜೀನಾಮೆ ಕೊಡಲಾರೆ : ಗಡ್ಕರಿಗೆ ಸಿಎಂ ಪತ್ರ; ಅನಂತ್ ದಿಲ್ಲಿಗೆ
ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ಫೋನ್ ಕದ್ದಾಲಿಕೆ ಆರೋಪದಲ್ಲಿ ಹುರುಳಿಲ್ಲ. ದೂರವಾಣಿ ಕದ್ದಾಲಿಕೆ ಪ್ರಕರಣದ ತನಿಖೆಗೆ ಸಮಿತಿ ರಚಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಗೃಹ ಸಚಿವ ಪಿ.ಚಿದಂಬರಂರಿಗೆ ಮನವಿ ಮಾಡುತ್ತೇನೆ. ಬಿಜೆಪಿ ಹೈ ಕಮಾಂಡ್ ಕೂಡಾ ಸಮಿತಿಯ ನಿಗಾ ವಹಿಸಲಿ ಎಂದು ಯಡಿಯೂರಪ್ಪ ತಮ್ಮ ಪತ್ರದಲ್ಲಿ ಬರೆದಿದ್ದಾರೆ.[ವಿಡಿಯೋ ನೋಡಿ]
ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿ ಸೋರಿಕೆಯಾಗಿರುವುದರಲ್ಲಿ ನನ್ನ ಕೈವಾಡವಿಲ್ಲ. ಫೋನ್ ಕದ್ದಾಲಿಕೆ, ಭೂ ಹಗರಣ ಬಗ್ಗೆ ಸಮಿತಿ ನೀಡುವ ವರದಿ ನಂತರ ಯಾವುದೇ ಕ್ರಮ ಬೇಕಾದರೂ ಕೈಗೊಳ್ಳಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಲೋಕಾಯುಕ್ತ ಸಂತೋಷ್ ಹೆಗ್ಡೆ, ಕೇಂದ್ರ ಸಚಿವ ಎಸ್ ಎಂ ಕೃಷ್ಣ , ಮಾಜಿ ಪ್ರಧಾನಿ ದೇವೇಗೌಡ, ಎಚ್ ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರು ತನಿಖಾ ಸಮಿತಿಯಲ್ಲಿರಲಿ ಎಂದು ಯಡಿಯೂರಪ್ಪ ಸೂಚಿಸಿದ್ದಾರೆ.
ಈ ಮಧ್ಯೆ ಯಡಿಯೂರಪ್ಪ ಅವರ ಪತ್ರ ಸಿಕ್ಕ ಬೆನ್ನಲ್ಲೇ, ಅನಂತ ಕುಮಾರ್ ಅವರನ್ನು ದೆಹಲಿಗೆ ಹೈಕಮಾಂಡ್ ಕರೆಸಿಕೊಂಡಿದೆ. ಗಣಿ ವರದಿ, ಪರ್ಯಾಯ ನಾಯಕತ್ವ ಮುಂತಾದ ವಿಷಯ ಕುರಿತು ಚರ್ಚಿಸುವ ಸಾಧ್ಯತೆಯಿದೆ.
ಭೂ ಹಗರಣ ವಿಚಾರಣೆ ಮುಂದಕ್ಕೆ: ಸಿಎಂ ಸಲ್ಲಿಸಿರುವ ರಿಟ್ ಅರ್ಜಿ ಸಂಬಂಧಿಸಿದಂತೆ ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಅಜೀತ್ ಜೆ ಗುಜ್ಜಲ್ ಹಾಗೂ ನಾಗರತ್ನಅವರನ್ನೊಳಗೊಂಡ ವಿಭಾಗೀಯ ಪೀಠ, ವಿಚಾರಣೆಯನ್ನು ಆ.18ಕ್ಕೆ ಮುಂದೂಡಿದೆ.