ಕರಾವಳಿ, ಮಲೆನಾಡಿನಾದ್ಯಂತ ಕುಂಭದ್ರೋಣ ಮಳೆ

ಈ ಕಾರಣದಿಂದಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿರುವ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಮೇಲ್ಮುಖವಾಗಿದೆ. ಕಳೆದ 24 ಗಂಟೆಗಳಲ್ಲಿ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ 21 ಸೆಂ.ಮೀ. ಮಳೆಯಾಗಿದೆ. ತಗ್ಗಿನ ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಜನ ಕಂಗಾಲಾಗಿದ್ದರೂ, ರೈತಾಪಿವರ್ಗದಲ್ಲಿ ಹರ್ಷ ಮೂಡಿದೆ. ಭತ್ತ ಬಿತ್ತನೆ ಕಾರ್ಯ ಭರದಿಂದ ಸಾಗುತ್ತಿದೆ.
ಕುಂದಾಪುರ ತಾಲೂಕಿನ ಕೊಲ್ಲೂರು ಮತ್ತು ಬಾವಡಿ ನಡುವೆ ಇರುವ ಸೇತುವೆ ನೀರಿನಲ್ಲಿ ಮುಳುಗಿದ್ದು, ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಉಲ್ಲಾಳ ಸೇರಿದಂತೆ ಅನೇಕ ಕಡಲತೀರದಲ್ಲಿ ಕಡಲ ಕೊರೆತ ಹೆಚ್ಚಿದ್ದರಿಂದ ದಡದಲ್ಲಿರುವ ಜನ ಆತಂಕಕ್ಕೀಡಾಗಿದ್ದಾರೆ. ನದಿಗಳು ಕೂಡ ಉಕ್ಕಿ ಹರಿಯುತ್ತಿದ್ದು ಪ್ರವಾಹ ಸೃಷ್ಟಿಯಾಗುವ ಸನ್ನಿವೇಶ ಎದುರಾಗಿದೆ.
ಮುಖ್ಯಮಂತ್ರಿಗಳು ಧರ್ಮಸ್ಥಳಕ್ಕೆ ಪ್ರವಾಸ ಮಾಡಿದ್ದರಿಂದ ಭಕ್ತಾದಿಗಳಿಗೆ ತೊಂದರೆಯಾಗಿದ್ದರೂ, ಧರ್ಮಸ್ಥಳದಿಂದ ಸುಬ್ರಮಣ್ಯಕ್ಕೆ ಸಾಗುವ ರಸ್ತೆ ದುರುಸ್ತಿ ಕಂಡಿದೆ. ಯುದ್ಧೋಪಾದಿಯಲ್ಲಿ ರಸ್ತೆ ಕಾಮಗಾರಿ ಅಧಿಕಾರಿಗಳು ಮಾಡಿ ಮುಗಿಸಿದ್ದಾರೆ. ಮುಖ್ಯಮಂತ್ರಿಗಳು ಮೇಲಿಂದ ಮೇಲೆ ಈ ಪ್ರದೇಶಗಳಿಗೆ ಪ್ರವಾಸ ಕೈಗೊಂಡರೆ ಅಭಿವೃದ್ಧಿ ತಾನಾಗಿಯೇ ಆಗುವುದರಲ್ಲಿ ಸಂದೇಹವಿಲ್ಲ.
ಸೂಳ್ಯ ಮತ್ತು ಮಂಗಳೂರು ನಡುವಿನ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದ್ದರಿಂದ ಸಂಚಾರಕ್ಕೆ ವ್ಯತ್ಯವಾಗಿದೆ. ಅನೇಕ ಕಡೆಗಳಲ್ಲಿ ಮರಗಳು ಉರುಳಿದ್ದರಿಂದಲೂ ಸಂಚಾರಕ್ಕೆ ಅಡಚಣೆಯಾಗಿದೆ. ಬಿತ್ತನೆ ಕಾರ್ಯ ಚುರುಕಾಗುವುದರ ಜೊತೆಗೆ ಮಳೆಯಿಂದಾಗಿ ಈ ಜಿಲ್ಲೆಗಳಲ್ಲಿ ಸಾಕಷ್ಟು ಆಸ್ತಪಾಸ್ತಿ ಹಾನಿಯೂ ಉಂಟಾಗಿದೆ.












Click it and Unblock the Notifications