ಹುಣಸೂರು ವಿದ್ಯಾರ್ಥಿಗಳ ಹತ್ಯೆ: ಪ್ರಭಾವಿ ರಾಜಕಾರಣಿ ಪುತ್ರನ ಕೈವಾಡ

ಹತ್ಯೆ ರಹಸ್ಯ ಇಂದು ಜಗಜ್ಜಾಹೀರು: ಸಚಿವ ರಾಮದಾಸ್ ಅವರೇ ಇದನ್ನು ಪುಷ್ಟೀಕರಿಸಿದ್ದು, ವಿದ್ಯಾರ್ಥಿಗಳ ಅಪಹರಣ ಹಾಗೂ ಹತ್ಯೆಯಲ್ಲಿ ಬಹುತೇಕ ಸ್ಥಳೀಯರೇ ಸೇರಿದ್ದಾರೆ ಎಂದು ಹೇಳಿಸಿದ್ದಾರೆ. ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರಿ ಅಶೋಕ್ ಕುಮಾರ್ ಪುತ್ರ ಸುಧೀಂದ್ರ ಹಾಗೂ ಪ್ರಾವಿಷನ್ ಸ್ಟೋರ್ ಮಾಲೀಕ ಶ್ರೀನಾಥ್ ಪುತ್ರ ವಿಘ್ನೇಶ್ ಕೊಲೆ ಪ್ರಕರಣದ ಸಂಪೂರ್ಣ ವಿವರ ಬುಧವಾರ ಮದ್ಯಾಹ್ನದ ವೇಳೆಗೆ ಹೊರಬೀಳುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಬಿಬಿಎಂ ವಿದ್ಯಾರ್ಥಿಗಳ ಹತ್ಯೆ ಸಂಬಂಧ 11 ಯುವಕರನ್ನು ವಿಚಾರಣೆಗೊಳಪಡಿಸಿದ್ದು, ಹೆಚ್ಚಿನ ಮಾಹಿತಿ ನೀಡಲು ಸಿಸಿಬಿ ಪೊಲೀಸರು ನಿರಾಕರಿಸಿದ್ದಾರೆ. ಎಲ್ಲಾ ಆರೋಪಿಗಳನ್ನು ನಗರದ ಗೌಪ್ಯ ಸ್ಥಳವೊಂದರಲ್ಲಿ ವಿಚಾರಣೆಗೆ ಒಳಪಡಿಸಿ ಹತ್ಯೆಯ ಬಗ್ಗೆ ವಿವರ ಸಂಗ್ರಹಿಸಲಾಗಿದೆ.
ಕಳೆದ 7-8 ತಿಂಗಳ ಹಿಂದೆ ಹುಣಸೂರು ಬಳಿ ನಡೆದಿದ್ದ 15 ಲಕ್ಷ ರೂ. ಲೂಟಿ ಪ್ರಕರಣದಲ್ಲಿ ಪಾಲ್ಗೊಂಡಿದ್ದ ರಾಜಕೀಯ ಮುಖಂಡರ ಪುತ್ರನೇ ಈ ಹತ್ಯೆಯಲ್ಲೂ ಭಾಗಿಯಾಗಿದ್ದಾನೆಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಮೊಬೈಲ್ ಸುಳಿವು: ಮೊಬೈಲ್ ಕರೆಯ ಜಾಡು ಹಿಡಿದ ವಿಶೇಷ ಪೊಲೀಸ್ ತಂಡ ಆರೋಪಿಗಳನ್ನು ಬೆನ್ನಟ್ಟಿ ಕೊನೆಗೂ ಅವರನ್ನು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದೆ. ಹುಣಸೂರು ತಾಲ್ಲೂಕಿನ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ಅನ್ನು ಸಿಮ್ ಕಾರ್ಡ್ ಸಹಿತ ರಿಪೇರಿಗೆ ಕೊಟ್ಟಿದರು. ಆರೋಪಿಗಳು ವಿದ್ಯಾರ್ಥಿಗಳನ್ನು ಅಪಹರಿಸಿದ ನಂತರ ಇದೇ ಮೊಬೈಲ್ ಬಳಸುತ್ತಿದ್ದರು. ಈ ಕರೆಗಳ ಜಾಡು ಹಿಡಿದ ಪೊಲೀಸರಿಗೆ ಮೊಬೈಲ್ ಹೊಂದಿದ ವ್ಯಕ್ತಿ ರಿಪೇರಿಗೆ ಕೊಟ್ಟಿದ್ದ ವಿಷಯ ತಿಳಿಸಿದ. ಮೊಬೈಲ್ ರಿಪೇರಿ ಮಾಡುವವನ್ನು ವಿಚಾರಣೆಗೆ ಒಳಪಡಿಸಿದಾಗ ಇಡೀ ಪ್ರಕರಣದ ರಹಸ್ಯ ಬಯಲಾಗಿದೆ.
ಆರೋಪಿಗಳು ಸುಧೀಂದ್ರನ ಕುಟುಂಬದ ವ್ಯವಹಾರವನ್ನು ಹತ್ತಿರದಿಂದ ಬಲ್ಲವರಾಗಿದ್ದರು ಎಂದು ಹುಣಸೂರು ವಿದ್ಯಾರ್ಥಿಗಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡಿದೆ ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಆರ್.ಕೆ. ದತ್ತ ಸಹ ತಿಳಿಸಿದರು.












Click it and Unblock the Notifications