ಕುಮಾರ್, ಸಿದ್ದು ರಾಜಕೀಯ ಸನ್ಯಾಸ ಏಕೆ?: ಯಡಿಯೂರಪ್ಪ
ಸುತ್ತೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಕಾಲದ 22ನೇ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನಕ್ಕೆ ಚಾಲನೆ ನೀಡಲು ಆಗಮಿಸಿದ್ದ ಸಂದರ್ಭ ಮೈಸೂರಿನ ಹೆಲಿಪ್ಯಾಡ್ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಉತ್ತಮ ನಾಯಕರಾಗಿದ್ದು ಅವರು ಇತ್ತೀಚಿಗಿನ ರಾಜಕೀಯದಿಂದ ಬೇಸತ್ತು ರಾಜಕೀಯ ಸನ್ಯಾಸ ಸ್ವೀಕರಿಸುವ ಮಾತುಗಳನ್ನಾಡಿದ್ದಾರೆ.
ಆದರೆ ಅವರು ಯಾವುದೇ ಕಾರಣಕ್ಕೂ ಅಂತಹ ನಿರ್ಧಾರ ಕೈಗೊಳ್ಳಬಾರದು. ಎಲ್ಲರೂ ಒಟ್ಟಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡೋಣ ಬದಲಿಗೆ ಬೆನ್ನು ಹಾಕಿ ಹೋಗುವುದು ಸರಿಯಲ್ಲ ಎಂದು ಹೇಳಿದರು. ಈ ಸಂದರ್ಭ ಸಚಿವರಾದ ರಾಮದಾಸ್, ವಿಜಯಶಂಕರ್, ರೇಣುಕಾಚಾರ್ಯ ಸೇರಿದಂತೆ ಹಲವರು ಮುಖಂಡರು ಅವರ ಜೊತೆಯಲ್ಲಿದ್ದರು.
ವೀರಶೈವ ಅಧಿವೇಶನಕ್ಕೆ ಚಾಲನೆ: ಬಳಿಕ ಸುತ್ತೂರಿಗೆ ತೆರಳಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಸುತ್ತೂರಿನ ಮಠದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ 22ನೇ ಅಖಿಲ ಭಾರತ ವೀರಶೈವ ಮಹಾಸಭಾ ಅಧಿವೇಶನಕ್ಕೆ ಚಾಲನೆ ನೀಡಿದರು.
ಲಕ್ಷಾಂತರ ಜನರು ನೆರೆದಿದ್ದ ಬ್ರಹತ್ ಸಮಾರಂಭದಲ್ಲಿ ಸುತ್ತೂರು ಮಠದ ದೇಶಿಕೇಂದ್ರ ಸ್ವಾಮೀಜಿ, ಸಿದ್ದಗಂಗೆಯ ಶ್ರೀ ಡಾ.ಶಿವಕುಮಾರ ಸ್ವಾಮೀಜಿ, ಬಾಳೆಹೊನ್ನೂರು ರಂಭಾಪುರಿ ಪೀಠಾಧ್ಯಕ್ಷ ಶ್ರೀ ರೇಣುಕೇಶ್ವರಸ್ವಾಮೀಜಿ, ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ಸಾವಿರಾರು ಮಠಾಧೀಶರು, ವೀರಶೈವ ಮುಖಂಡರು, ಸಚಿವರಾದ ರೇಣುಕಾಚಾರ್ಯ, ವಿಜಯಶಂಕರ್, ರಾಮದಾಸ್, ಉದಾಸಿ, ಲೋಕಸಭಾ ಸದಸ್ಯ ರಾಘವೇಂದ್ರ, ಶಾಸಕರಾದ ಹೆಚ್.ಎಸ್.ಮಹದೇವಪ್ರಸಾದ್, ಪ್ರೊ.ಮಲ್ಲಿಕಾರ್ಜುನಪ್ಪ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ಸಂದರ್ಭ "ಮಹಾಸಂಗಮ" ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಭವ್ಯ ಮೆರವಣಿಗೆ: ಸಮಾರಂಭಕ್ಕೆ ಮೊದಲು ಗಣ್ಯರನ್ನು ಭವ್ಯ ಮೆರವಣಿಗೆಯಲ್ಲಿ ವೇದಿಕೆಗೆ ಕರೆತರಲಾಯಿತು. ಈ ಸಂದರ್ಭ ವಿವಿಧ ಕಲಾ ತಂಡಗಳು ಪ್ರದರ್ಶನ ನೆರೆದವರ ಮನರಂಜಿಸಿತು.ಅಧಿವೇಶನದಲ್ಲಿ ವೀರಶೈವ ಸಮಾಜದ ಇತಿಹಾಸ, ಸಂಪ್ರದಾಯ ಅಲ್ಲದೆ ಸಮಾಜ ಬಾಂಧವರು ರಾಷ್ಟ್ರದ ಪ್ರಗತಿಗಾಗಿ ಕೈಗೊಂಡ ಸಮಾಜಸೇವೆ, ಜ್ಞಾನದಾಸೋಹ, ಅನ್ನದಾಸೋಹ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧನೆ ಕುರಿತಂತೆ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಮೂರು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಚರ್ಚೆ, ವಿವಿಧ ಗೋಷ್ಠಿಗಳು ನಡೆಯಲಿವೆ.