ಸಾಲ ಕೇಳಿದ್ದಕ್ಕೆ ಕೆನ್ನೆಗೆ ಹೊಡೆದ ಕಾಂಬ್ಳಿ ಪತ್ನಿ
ದಾದರ್ ನ ಡೊಂಬಿವೆಲಿಯ ನಗರಿ ಸಹಕಾರಿ ಬ್ಯಾಂಕ್ನ ಮ್ಯಾನೇಜರ್ ದೀಪಾ ಎಂಬವರು ಕಾಂಬ್ಳಿ ಪತ್ನಿಯಿಂದ ಏಟು ತಿಂದ ಅಧಿಕಾರಿಯಾಗಿದ್ದಾರೆ. ಕಾಂಬ್ಳಿ ಪತ್ನಿ ಅಂದ್ರಿಯಾ ವಿರುದ್ಧ ದೂರು ದೀಪಾ ದೂರು ನೀಡಿದ್ದಾರೆ. ಆದರೆ, ಬ್ಯಾಂಕ್ ಮ್ಯಾನೇಜರ್ ದೂರನ್ನು ತಳ್ಳಿ ಹಾಕಿರುವ ಆಂದ್ರಿಯಾ ಬೇರೆಯೇ ಕತೆ ಹೇಳಿದ್ದಾರೆ.
ನಾನು ಮೊದಲು ಆಕೆಯ ವಿರುದ್ಧ ದೂರು ದಾಖಲಿಸಿದ್ದೇನೆ. ಬೃಹತ್ ಗಾತ್ರದ ದೇಹದ ವ್ಯಕ್ತಿಯೊಂದಿಗೆ ಆಗಮಿಸಿದ ಆಕೆ ನನ್ನ ಪತಿಯನ್ನು ಕರೆಯಲು ಮನೆ ಕೆಲಸದವಳ ಬಳಿ ತಿಳಿಸಿದರು. ಆತ ಮನೆಯಲ್ಲಿರಲಿಲ್ಲ, ಹೀಗಾಗಿ ನಾನು ಬಾಗಿಲ ಬಳಿಗೆ ಹೋದೆ. ನಾನು ಹೋದ ತಕ್ಷಣ, ಮ್ಯಾನೇಜರ್ ಅಸಭ್ಯವಾಗಿ ವರ್ತಿಸಲಾರಂಭಿಸಿದರು. ನಾನು ಬಾಗಿಲು ಮುಚ್ಚಲು ಯತ್ನಿಸಿದೆ. ಆಗ ಮ್ಯಾನೇಜರ್ ಬಾಗಿಲನ್ನು ತಳ್ಳಿ ಒಳ ನುಗ್ಗಲು ಯತ್ನಿಸಿದರು. ಆಗ ನನ್ನ ಕೈಗೆ ಏಟಾಯಿತು. ನಾನು ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದೇನೆ ಎಂದು ಆಂದ್ರಿಯಾ ಹೇಳಿದ್ದಾರೆ.
ಕಾಂಬ್ಳಿ ಕಳೆದ ವರ್ಷ ಮೇನಲ್ಲಿ ಕಾರು ಕೊಳ್ಳುವುದಕ್ಕಾಗಿ ರೂ. 20 ಲಕ್ಷ ಬ್ಯಾಂಕ್ ಸಾಲ ಪಡೆದಿದ್ದರು. ದೂರಿನ ಪ್ರಕಾರ, ಕಾಂಬ್ಳಿ ಕಳೆದ ಮೂರು ತಿಂಗಳಿನಿಂದ ಸಾಲದ ಕಂತನ್ನು ಸರಿಯಾಗಿ ಪಾವತಿಸದಿರುವ ಹಿನ್ನೆಲೆಯಲ್ಲಿ, ಬ್ಯಾಂಕ್ ಮ್ಯಾನೇಜರ್ ಅವರ ಮನೆಗೆ ತೆರಳಿದ್ದ ವೇಳೆ ದೀಪಾ ಮತ್ತು ಆಂದ್ರಿಯಾ ನಡುವೆ ಮಾತಿನ ಚಕಮಕಿ ನಡೆದು ಈ ಸಂಘರ್ಷ ನಡೆದಿರುವುದಾಗಿ ತಿಳಿದು ಬಂದಿದೆ.