2012ವರೆಗೆ ಸಿಎಂ ಸುರಕ್ಷಿತ: ಜ್ಯೋತಿಷಿ ರವಿಶಂಕರ್
ರೆಡ್ಡಿಗಳು ತಪ್ಪು ಮಾಡಿದ್ದಾರೆ. ಯಡಿಯೂರಪ್ಪ ಅವರು ಏನೇ ತಪ್ಪುಗಳು ಮಾಡಿರಲಿ ಅವರು ಕುಟುಂಬದ ಯಜಮಾನರು. ರೆಡ್ಡಿಗಳು ಉಪ್ಪು ತಿಂದಿದ್ದಾರೆ ನೀರು ಕುಡಿದೇ ಕುಡಿಯುತ್ತಾರೆ. ರೆಡ್ಡಿಗಳ ಗ್ರಹಗತಿ ಸರಿಯಾಗಿಲ್ಲ. ಕರುಣಾಕರ ಮನೆಯಲ್ಲಿ ನಾಗರಹಾವು ಕಾಣಿಸಿಕೊಂಡಿದ್ದು, ಇವತ್ತು ಧ್ವಜ ಕಿತ್ತು ಬಿದ್ದಿದ್ದು ಇದಕ್ಕೆ ಸಾಕ್ಷಿ. ರೆಡ್ಡಿಗಳಿಗೆ ಟೈಮ್ ಸರಿ ಇಲ್ಲ. ಮುಂದಿನ ದಿನಗಳಲ್ಲಿ ತೀವ್ರ ತೊಂದರೆಗಳಿಗೆ ಸಿಲುಕುತ್ತಾರೆ. ರಾಜಕೀಯ ಜೇನುಗೂಡಿಗೆ ಕಲ್ಲು ಹೊಡೆದಿರುವುದು ಆತುರದ ನಿರ್ಧಾರ ಎಂದು ಖಾಸಗಿ ಕಾರ್ಯಕ್ರಮವೊಂದರಲ್ಲಿ ರವಿಶಂಕರ್ ನುಡಿದರು.
ರೆಡ್ಡಿಗಳಿಗೆ ಪಕ್ಷಕ್ಕಿಂತ ವಯಕ್ತಿಕ ಲಾಭವೇ ಮುಖ್ಯ. ಅವರು ಬಿಸಿನೆಸ್ ಮ್ಯಾನ್. ಪ್ರಜಾ ಆಡಳಿತವೇ ಬೇರೆ ಎಂದರು. ಯಡಿಯೂರಪ್ಪ 2011-12 ರವರೆಗೆ ಮುಖ್ಯಮಂತ್ರಿ ಆಗಿಯೇ ಮುಂದುವರೆಯುತ್ತಾರೆ. ಆದರೆ, ಈ ಅವಧಿಯಲ್ಲಿ ಸಾಕಷ್ಟು ಗೊಂದಲಗಳು ಉಂಟಾಗುತ್ತವೆ. ಕಾಲೆಳೆಯುವವರೂ ಹೆಚ್ಚುತ್ತಾರೆ. ಒಟ್ಟಿನಲ್ಲಿ ಈ ಎಲ್ಲಾ ಬೆಳವಣಿಗೆಗಳಿಂದ ರಾಜ್ಯದ ಜನತೆ ಸಾಕಷ್ಟು ತೊಂದರೆಗೆ ಸಿಲುಕುತ್ತಾರೆ. ಈ ಪರಿಸ್ಥಿತಿ ಕರ್ನಾಟಕದ್ದು ಮಾತ್ರವಲ್ಲ. ದೇಶದಲ್ಲೂ ಇಂತಹ ಬೆಳವಣಿಗೆ ಆಗುತ್ತವೆ. ಹಲವು ಹಗರಣಗಳು ಬೆಳಕಿಗೆ ಬರಲಿವೆ. ಕೆಲವು ರಾಜಕೀಯ ನಾಯಕರುಗಳು ಅವಮಾನಗಳಿಗೆ ಗುರಿಯಾಗಲಿದ್ದಾರೆ. ಪ್ರಧಾನಿ ಮನಮೋಹನ್ಸಿಂಗ್ ಅವರೂ ಒತ್ತಡಕ್ಕೆ ಸಿಲುಕಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)