ಸರ್ಕಾರಿ ಜಾಹೀರಾತುಗಳ ವಿರುದ್ಧ ಹೋರಾಟ: ದತ್ತ
ಬೆಂಗಳೂರು, ಮೇ.30: ಸರಕಾರ ಬಿಡುಗಡೆ ಮಾಡುವ ವಿವಿಧ ಇಲಾಖೆಯ ಜಾಹೀರಾತುಗಳು ಆಡಳಿತ ಪಕ್ಷಕ್ಕೆ ರಾಜಕೀಯ ಲಾಭ ತಂದುಕೊಡುವಂತಹ ರೀತಿಯಲ್ಲಿದ್ದರೆ ಕಾನೂನು ಹೋರಾಟ ನಡೆಸಲಾಗುತ್ತದೆ ಎಂದು ಜನತಾದಳ ನಾಯಕ ವೈ ಎಸ್ ವಿ ದತ್ತ ಸರಕಾರದ ವಿರುದ್ಧ ಗುಡುಗಿದ್ದಾರೆ.
ಸರಕಾರಕ್ಕೆ ಒಂದು ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಹಾಗೂ ಯಾವುದೇ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ನೀಡುತ್ತಿರುವ ಜಾಹೀರಾತುಗಳನ್ನು ನೋಡಿದಾಗ ಯೋಜನೆಗಳೆಲ್ಲವೂ ಯಡಿಯೂರಪ್ಪ ಸರಕಾರದ ಕನುಸುಗಳು ಎಂಬಂತೆ ಬಿಂಬಿಸುವ ಪ್ರಯತ್ನ ನಡೆದಿದೆ. ಈ ರೀತಿ ಆಗದಂತೆ ನೋಡಿಕೊಳ್ಳಬೇಕು, ಸರಕಾರಿ ಅಧಿಕಾರಿಗಳು ವಾಸ್ತವತೆಯನ್ನು ಜನತೆಗೆ ತಿಳಿಸದಿದ್ದರೆ ಬಿಜೆಪಿ ಸರಕಾರದ ಹಣದಲ್ಲಿ ರಾಜಕೀಯ ಲಾಭ ಪಡೆಯುವ ಅಪಾಯವಿದೆ ಎಂದು ಹೇಳಿದ್ದಾರೆ.
ಇತ್ತೀಚಿಗೆ ಕರ್ನಾಟಕ ವಿದ್ಯುತ್ ನಿಗಮ ಗುಂಡ್ಯ ಮತ್ತು ಯರಮರಸ್ ಯೋಜನೆಗಳಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿದ್ದ ಜಾಹೀರಾತುಗಳು ಮುಖ್ಯಮಂತ್ರಿ ಯಡಿಯೂರಪ್ಪ ಸರಕಾರವೇ ರೂಪಿಸಿದ ಯೋಜನೆ ಎಂಬಂತೆ ಬಿಂಬಿಸಿದೆ. ಆದರೆ ವಾಸ್ತವವಾಗಿ ಈ ಯೋಜನೆಗಳಿಗೆ ಎಲ್ಲಾ ಅನುಮತಿ ಸಿಕ್ಕಿರುವುದು ಹಿಂದಿನ ಸರಕಾರದ ಅವಧಿಯಲ್ಲಿ, ಜಾಹೀರಾತು ನೀಡುವಾಗ ಅನುಮತಿ ಸಿಕ್ಕ ದಿನಾಂಕವನ್ನು ನಮೂದಿಸಿದರೆ ಸತ್ಯಾಂಶ ತಿಳಿಯುತ್ತದೆ ಎಂದು ಸರಕಾರವನ್ನು ಲೇವಡಿ ಮಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)