ಎಚ್ಡಿಕೆಗೆ ಸಚಿವ ಸ್ಥಾನ ನೀಡದಂತೆ ದಿಲ್ಲಿಗೆ ನಿಯೋಗ

ಮೈಸೂರು ಲೋಕಸಭೆ ಸಂಸದರಾಗಿ ಆಯ್ಕೆಯಾಗಿರುವ ಎಚ್ ವಿಶ್ವನಾಥ್ ನವದೆಹಲಿಗೆ ತೆರಳಿದ್ದು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಸಂಪುಟ ಸೇರ್ಪಡೆಯನ್ನು ಬಹಿರಂಗವಾಗಿ ವಿರೋಧಿಸಿದ್ದಾರೆ. ದೇವೇಗೌಡ ಮತ್ತು ಅವರ ಮಕ್ಕಳಿಂದ ಕಾಂಗ್ರೆಸ್ ದ್ರೋಹವಾಗಿದೆ, ಅದನ್ನು ವರಿಷ್ಠರು ನೆನಪುಮಾಡಿಕೊಳ್ಳಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಜೆಡಿಎಸ್ ಬೆಂಬಲ ಯಾಚಿಸಿಲ್ಲ. ಈ ವಿಷಯದಲ್ಲಿ ಕುಮಾರಸ್ವಾಮಿ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯದ ಘಟಾನುಘಟಿ ನಾಯಕರು ಪಕ್ಷದ ಹಿರಿಯ ನಾಯಕ ಎ ಕೆ ಎಂಟನಿ ಅವರನ್ನು ಭೇಟಿ ಮಾಡಿ ಜೆಡಿಎಸ್ ಗೆ ಪ್ರಾತಿನಿಧ್ಯ ನೀಡಿದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗುವ ನಷ್ಟವನ್ನು ವಿವರಿಸಲಿದ್ದಾರೆ ಎನ್ನಲಾಗಿದೆ. ಮಾಜಿ ದೇವೇಗೌಡರ ರಾಜಕೀಯ ತಂತ್ರಗಾರಿಕೆ ಹಾಗೂ ಅವರ ಮಗ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ದ್ವಿಮುಖ ನೀತಿಗಳನ್ನು ಪಟ್ಟಿ ಮಾಡಿದ್ದು, ಅವುಗಳನ್ನು ವರಿಷ್ಠರ ಗಮನಕ್ಕೆ ತರುವ ಉದ್ದೇಶವನ್ನು ನಿಯೋಗ ಹೊಂದಿದೆ.
ಕೇಂದ್ರದಲ್ಲಿ ಪ್ರಭಾವಿ ನಾಯಕರಾಗಿದ್ದು, ಸಚಿವ ಸ್ಥಾನದ ಆಕಾಂಕ್ಷಿಯೊಬ್ಬರು ಈ ನಿಯೋಗವನ್ನು ಹಿರಿಯ ನಾಯಕರಿಗೆ ಭೇಟಿ ಮಾಡಿಸುವ ವ್ಯವಸ್ಥೆ ಮಾಡಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಗೌಡರು ಅನುಸರಿಸಿದ ರಾಜಕೀಯ ತಂತ್ರಗಾರಿಕೆಯಿಂದ ಕಾಂಗ್ರೆಸ್ ಕೆಲ ಕಡೆಗಳಲ್ಲಿ ಸೋಲು ಅನುಭವಿಸಿರುವುದನ್ನು ಈ ನಿಯೋಗ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಡಲಿದೆ. ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ, ಎಂ ಪಿ ಪ್ರಕಾಶ್, ಆರ್ ವಿ ದೇಶಪಾಂಡೆ, ರಮೇಶ್ ಕುಮಾರ್ ಸೇರಿದಂತೆ ಅನೇಕ ನಾಯಕರು ಗೌಡರ ರಾಜಕಾರಣದಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಹೀಗಿದ್ದಾಗ ಜೆಡಿಎಸ್ ನಾಯಕರಿಗೆ ಮಣೆ ಹಾಕಿದರೆ, ಪಕ್ಷಕ್ಕೆ ಲಾಭವಂತೂ ಖಂಡಿತಾ ಆಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಆಗುವ ನಷ್ಟವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ನಿಯೋಗದ ಆರೋಪವಾಗಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications