ಹಿಂದೂಗಳು ಭಯೋತ್ಪಾದಕರು, ಫಾದರ್
ಮುಂಡಗೋಡ, ಮಾ. 15 : ಲೋಯೋಲಾ ವಿಕಾಸ ಕೇಂದ್ರದ ನಿರ್ದೇಶಕ ಫಾದರ್ ಫ್ರಾನ್ಸಿಸ್ ಡಿಸೋಜಾ ಶನಿವಾರ ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣ ವಿವಾದಕ್ಕೆ ಎಡೆ ಮಾಡಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಭಯೋತ್ಪಾದಕರು ಪಾಕಿಸ್ತಾನದಲ್ಲಿದ್ದಾರೆ ಎಂದು ನಾವು ಮುಖಮಾಡಿ ಹುಡುಕಬೇಕಿಲ್ಲ. ಆ ಭಯೋತ್ಪಾದಕರು ಭಾರತದಲ್ಲೇ ಇದ್ದಾರೆ. ಬಾಬ್ರಿ ಮಸೀದಿ ಕೆಡವಿದವರು, ಗುಜರಾತ್ ನಲ್ಲಿ ನೂರಾರು ಅಮಾಯಕರ ಸಾವಿಗೆ ಕಾರಣವಾದವರು, ಚರ್ಚ್ ಗಳನ್ನು ಕೆಡುವುತ್ತಿರುವವರು ಇಲ್ಲಿನ ಭಯೋತ್ಪಾದಕರು. ಅವರು ದೇಶವನ್ನು ಛಿದ್ರಛಿದ್ರ ಮಾಡಲು ಹೊರಟಿದ್ದಾರೆ ಎಂದರು.
ಭಾಷಣ ಕೇಳಿದ ಬಿಜೆಪಿ ಕಾರ್ಯಕರ್ತರು ತಮ್ಮ ನಾಯಕರು ಹಾಗೂ ಹಿಂದೂ ಜಾಗರಣ ವೇದಿಕೆಯವರಿಗೆ ಮೊಬೈಲ್ ಮೂಲಕ ವಿಷಯ ತಿಳಿಸಿದರು. ನಂತರ ಹಿಂದೂ ಸಂಘಟನೆಗಳ ಹಲವರು ವೇದಿಕೆ ಎದುರು ಜಮಾಯಿಸಿ ಫಾದರ್ ವಿರುದ್ಧ ಪ್ರತಿಭಟನೆಗೆ ಇಳಿದರು. ಇದರಿಂದ ಸ್ಥಳದಲ್ಲಿದ್ದ ಪೊಲೀಸರು ಸಹ ವಿಚಲಿತರಾದರು.
ಕಾರ್ಯಕ್ರಮ ಮುಗಿಯುತ್ತಿದ್ದಂತೆಯೇ ಸಿಪಿಐ ವೀರೇಂದ್ರ ಕುಮಾರ್ ವಿಡಿಯೋಗ್ರಾಫರ್ ನನ್ನು ಠಾಣೆಗೆ ಕರೆಸಿ ಪರಿಶೀಲನೆ ನಡೆಸಿದರು. ಆಗ ಫಾದರ್ ಪ್ರಚಾದನಾಕಾರಿ ರೀತಿಯಲ್ಲಿ ಮಾತನಾಡಿದ್ದು ಸಾಬೀತಾಯಿತು. ಠಾಣೆಯ ಸುತ್ತ ಬಿಜೆಪಿ, ಹಿಂದೂ ಸಂಘಟನೆಗಳ ಕಾರ್ಯಕರ್ತರು ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿದ ಪೊಲೀಸರು ಮುಂದಾಗುವ ಅನಾಹುತ ಮನಗಂಡು ಫಾಧರ್ ಫ್ರಾನ್ಸಿಸ್ ರನ್ನು ಠಾಣೆಗೆ ಕರೆ ತರಲಿಲ್ಲ.
ಇದರಿಂದ ಕೋಪೋದ್ರಿಕ್ತರಾದ ಹಿಂದೂ ಸಂಘಟನೆಗಳ ಕಾರ್ಯಕರ್ತರು ತಾವು ನೀಡಿದ ಗಡುವಿನೊಳಗೆ ಅವರನ್ನು ಠಾಣೆಗೆ ಕರೆತರದಿದ್ದರೆ ಅವರು ಪ್ರತಿನಿಧಿಸುವ ಸಂಸ್ಥೆಗೆ ನುಗ್ಗುವುದಾಗಿ ಎಚ್ಚರಿಸಿದರು. ಫಾದರ್ ಭಾವಾವೇಶದಲ್ಲಿ ಭಾಷಣ ಮಾಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ವೀರೇಂದ್ರಕುಮಾರ್ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications