ಶಿವರಾತ್ರಿಗೆ ಗಂಗಾ ನೀರು ಕುಡಿಸಲು ಸರ್ಕಾರ ಸಿದ್ಧತೆ
ಬೆಂಗಳೂರು, ಫೆ. 19 : ಮೊನ್ನೆ ವೈಕುಂಠ ಏಕಾದಶಿಯಂದು ರಾಜ್ಯದ ಮುಜರಾಯಿ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಿಗೆ ತಿರುಪತಿ ಲಡ್ಡು ವಿತರಿಸಿದ್ದ ಸರ್ಕಾರ ಬರುವ ಮಹಾಶಿವರಾತ್ರಿ (ಫೆ 23) ದಿನದಂದು ಎಲ್ಲಾ ಶಿವಭಕ್ತರಿಗೆ ಗಂಗಾಜಲ ತೀರ್ಥ ವಿತರಿಸಲಿದೆ.
ಗಂಗಾ ಸ್ನಾನ, ತುಂಗಾ ಪಾನ ಎನ್ನುವಂತೆ, ರಾಜ್ಯದ ಬಡ ಪ್ರಜೆಗಳೂ ಸುಲಭವಾಗಿ ಪುಣ್ಯ ಸಂಪಾದಿಸುವಂತಾಗಲಿ. ಜೀವನದಲ್ಲಿ ಒಮ್ಮೆಯಾದರೂ ಗಂಗಾನದಿ ನೀರು ಕುಡಿಯಬೇಕೆಂದು ಹಿಂದೂ ಧರ್ಮ ಹೇಳುತ್ತದೆ. ಶ್ರೀಮಂತರು ಗಂಗಾ ತೀರಕ್ಕೆ ಹೋಗಲು ಸಮರ್ಥರಿರುತ್ತಾರೆ, ಆದರೆ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಅದರ ಸಾಮರ್ಥ್ಯವಿರುವುದಿಲ್ಲ, ಆದ್ದರಿಂದ ಎಲ್ಲಾ ಶಿವಭಕ್ತರು ಈ ರೀತಿ ಇದರ ಉಪಯೋಗ ಪಡೆಯಲಿ ಅನ್ನುವುದು ಸರ್ಕಾರದ ಉದ್ದೇಶ ಎಂದು ಮುಜರಾಯಿ ಸಚಿವ ಎಸ್ ಎನ್ ಕೃಷ್ಠಯ್ಯ ಶೆಟ್ಟಿ ತಿಳಿಸಿದ್ದಾರೆ.
50,000 ಸಾವಿರ ಲೀಟರ್ ನೀರನ್ನು ಹೊತ್ತ ಟ್ಯಾಂಕರ್ ನಿನ್ನೆ ವಾರಣಾಸಿಯಿಂದ ಹೊರಟಿದ್ದು ಶನಿವಾರದೊತ್ತಿಗೆ ಬೆಂಗಳೂರು ತಲುಪಲಿದೆ. ಇಲ್ಲಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಕ್ಯಾನ್ ಗಳಲ್ಲಿ ಗಂಗಾಜಲ ತುಂಬಿಸಿ ರಾಜ್ಯದ ಎಲ್ಲಾ ದೇವಾಲಯಗಳಿಗೆ ಕಳುಹಿಸಲಾಗುವುದು ಎಂದು ಸಚಿವರು ತಿಳಿಸಿದರು. ಗಂಗಾಜಲದ ಜೊತೆ ಶಿವನ ಚಿತ್ರವಿರುವ ಕ್ಯಾಲ೦ಡರ್ ಗಳನ್ನೂ ವಿತರಿಸಲಾಗುವುದು. ಮುಜರಾಯಿ ಇಲಾಖೆಯ ಸಿಬ್ಬಂದಿಗಳು ಇದರ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಮುಜರಾಯಿ ಖಾತೆಯೇ ತೀರ್ಥ ವಿತರಣೆಯ ಉಸ್ತುವಾರಿ ನೋಡಿಕೊಂಡರೂ ಸರ್ಕಾರಕ್ಕೆ ಯಾವುದೇ ಖರ್ಚು ಬರುವುದಿಲ್ಲ. ಇದಕ್ಕೆ ತಗಲುವ ವೆಚ್ಚ ಸುಮಾರು 2.5 ಲಕ್ಷ ರೂಪಾಯಿಗಳನ್ನು ತನ್ನ ಸ್ವಂತ ಜೇಬಿನಿಂದ ವೆಚ್ಚ ಮಾಡುತ್ತಿದ್ದೇನೆ ಎಂದು ಸಚಿವರು ಸ್ಪಸ್ಟಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications