ಕೆಎಸ್ಸಾರ್ ಟಿಸಿ, ಬಿಎಂಟಿಸಿ ಬಸ್ ದರ ಏರಿಕೆ ಸಂಭವ
ಬೆಂಗಳೂರು, ಜೂ.5 : ತೈಲ ಬೆಲೆ ಹೆಚ್ಚಳದ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳು ಪ್ರಯಾಣ ದರವನ್ನು ಹೆಚ್ಚಿಸಲು ನಿರ್ಧರಿಸಿವೆ. ಡೀಸೆಲ್ ಬೆಲೆ ಹೆಚ್ಚಳವಾಗಿರುವ ಕಾರಣ ಸಂಸ್ಥೆಗಳು ತೀವ್ರ ನಷ್ಟ ಎದುರಿಸಲಿವೆ. ಆದ್ದರಿಂದ ಪ್ರಯಾಣ ದರವನ್ನು ಪರಿಷ್ಕರಿಸುವಂತೆ ಒತ್ತಾಯಿಸಿ ಎರಡೂ ಸಂಸ್ಥೆಗಳು ರಾಜ್ಯ ಸರ್ಕಾರಕ್ಕೆ ಶೀಘ್ರದಲ್ಲಿಯೇ ಪ್ರಸ್ತಾವನೆ ಸಲ್ಲಿಸಲಿವೆ.
ತೈಲ ಬೆಲೆ ಏರಿಕೆ ಹೊರೆಯನ್ನು ತಗ್ಗಿಸಲು ಪ್ರಯಾಣ ದರವನ್ನು ಹೆಚ್ಚಿಸಬೇಕಿದೆ.ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎ.ಪಿ.ಜೋಶಿ ತಿಳಿಸಿದ್ದಾರೆ. ಶೇಕಡವಾರು ಎಷ್ಟು ಹೆಚ್ಚಿಸಿದರೆ ಒಳಿತು ಎಂದು ಪರಿಶೀಲನೆ ಮಾಡಲಾಗುತ್ತಿದೆ. ಕಡಿಮೆ ಎಂದರೂ ಶೇ. 10 ರಷ್ಟು ಪ್ರಯಾಣ ದರವನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ಪ್ರತಿ ದಿನ ಕೆಎಸ್ಆರ್ ಟಿಸಿ ಬಸ್ಸುಗಳು ಒಟ್ಟು 20 ಲಕ್ಷ ಕಿ.ಮೀ ಸಂಚರಿಸುತ್ತವೆ. ಹೀಗಾಗಿ ಪ್ರತಿ ದಿನ 4 ಲಕ್ಷ ಲೀಟರ್ ಡೀಸೆಲ್ ಖರ್ಚಾಗುತ್ತದೆ ಪ್ರತಿ ಲೀಟರ್ ಮೇಲೆ 3 ರುಪಾಯಿ ದರ ಹೆಚ್ಚಳವಾದರೆ ಅಂದಾಜು ವಾರ್ಷಿಕ 85 ಕೋಟಿ ರು.ಗಳ ನಷ್ಟ ಅನುಭವಿಸಬೇಕಾಗುತ್ತದೆ.ಆದ್ದರಿಂದ ದರ ಏರಿಕೆ ಅನಿವಾರ್ಯವಾಗಿದೆ ಎಂದು ಜೋಶಿ ತಿಳಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)