ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಕಳ್ಳತನ
ಚಾಮರಾಜನಗರ, ಮಾ.6: ಚಾಮರಾಜನಗರದ ಇತಿಹಾಸ ಪ್ರಸಿದ್ಧ ಚಾಮರಾಜೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆದ ಕಳವು ಪ್ರಕರಣವನ್ನು ಬೇಧಿಸಲು ಪೊಲೀಸರು ಹೆಚ್ಚಿನ ಉತ್ಸಾಹ ತೋರುತ್ತಿಲ್ಲ ಎಂದು ಈ ಘಟನೆಯಿಂದ ತೀವ್ರ ಆಘಾತಗೊಂಡ ಸ್ಥಳೀಯ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಾಮರಾಜೇಶ್ವರ ದೇವಸ್ಥಾನದಲ್ಲಿ ಈ ರೀತಿ ಆಗುತ್ತಿರುವುದು ಇದು ನಾಲ್ಕನೆಯ ಬಾರಿ. ದೇವಸ್ಥಾನಕ್ಕೆ ಸೂಕ್ತ ಭದ್ರತೆ ಇಲ್ಲದ ಕಾರಣ ಈ ರೀತಿ ಜರುಗಿದೆ. ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾಡಳಿತವನ್ನು ಕೋರಲಾಗಿದೆ ಹಾಗೂ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಭಕ್ತ ಸಮೂಹ ಹೇಳಿಕೆ ನೀಡಿದೆ.
ಚಾಮರಾಜೇಶ್ವರ ದೇವಸ್ಥಾನದಲ್ಲಿ ಸುಮಾರು 50,000 ರೂ. ಬೆಲೆ ಬಾಳುವ ಚಿನ್ನ ಹಾಗೂ ಬೆಳ್ಳಿ ಲೇಪಿತ ಆಭರಣಗಳನ್ನು ಸೋಮವಾರ ಕಳುವು ಮಾಡಲಾಗಿತ್ತು. ಮರುದಿನ ದೇವಸ್ಥಾನದ ಬಾಗಿಲು ತೆರೆದಾಗ ದೇವಸ್ಥಾನದ ಆಭರಣಗಳು ಕಳುವಾಗಿರುವ ಬಗ್ಗೆ ತಿಳಿದಿದೆ. ದೇವಸ್ಥಾನದ ಕಾವಲುಗಾರ ಮದ್ಯಪಾನ ಮಾಡಿ ನಿದ್ದೆಗೆ ಜಾರಿದಾಗ ಕನ್ನಗಳ್ಳರು ದೇವಸ್ಥಾನದ ಆಭರಣಗಳನ್ನು ಕದ್ದಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಉಪ ಪೊಲೀಸ್ ಸೂಪರಿಂಟೆಂಡೆಂಟ್ ಉಪೇಂದ್ರ, ತಹಸೀಲ್ದಾರ್ ಸಿದ್ಧು ಉಲ್ಲಾಳ್, ಕೊಳ್ಳೆಗಾಲ ವಿಭಾಗದ ಸಹಾಯಕ ಆಯುಕ್ತರಾದ ಸತ್ಯಭಾಮ ಹಾಗೂ ದೇವಸ್ಥಾನದ ಅಧಿಕಾರಿಗಳು ಆಗಮಿಸಿ ಪರೀಕ್ಷಿಸಲಾಗಿ ಬೆಳ್ಳಿಯ ಕಿರೀಟ, ಬೆಳ್ಳಿಯ ಚಾಮರ ಮತ್ತು ಕೆಂಪನಂಜಮ್ಮ ದೇವತೆಯ ಚಿನ್ನದ ಸರ, ಪೂಜಾ ಸಾಮಗ್ರಿಗಳು ಕಳುವಾಗಿರುವ ಬಗ್ಗೆ ತಿಳಿದುಬಂದಿತ್ತು.
(ದಟ್ಸ್ಕನ್ನಡ ವಾರ್ತೆ)