ನಾ ಭ್ರಷ್ಟನಲ್ಲ - ಎಚ್ಡಿಕೆ : ಸಾಕ್ಷಿ ಇಲ್ಲಿದೆ ನೋಡಿ - ಡಿಕೆಶಿ
ನಾ ಭ್ರಷ್ಟನಲ್ಲ - ಎಚ್ಡಿಕೆ : ಸಾಕ್ಷಿ ಇಲ್ಲಿದೆ ನೋಡಿ - ಡಿಕೆಶಿ
ಕುಲದೇವರ ಸನ್ನಿಧಿಯಲ್ಲಿ ಮುಖ್ಯಮಂತ್ರಿಯಿಂದ ಆಣೆ ಪ್ರಮಾಣ
ಚನ್ನಪಟ್ಟಣ ತಾಲೂಕಿನ ತಮ್ಮ ಕುಲದೇವತೆಯಾದ ದೇವೀರಮ್ಮ ಮತ್ತು ಆನೆಕೆರೆಯ ಆನೆಕೆರೆಮ್ಮ, ವೀರಭದ್ರೇಶ್ವರ, ಚನ್ನಕೇಶವಸ್ವಾಮಿಗೆ ಪೂಜೆ ಸಲ್ಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಮಾನಸಿಕ ಕಿರಿಕಿರಿಯಿಂದ ಬೇಸತ್ತು, ದೇವರ ಸನ್ನಿಧಿಗೆ ಬಂದಿದ್ದೇನೆ. ಪೂಜೆ ಸಲ್ಲಿಸಿದ ಮೇಲೆ ಹೊಸ ಬಲ ಬಂದಂತಾಗಿದೆ. ಅಕ್ರಮ ಗಣಿ ಅಥವಾ ಇನ್ಯಾವುದೇ ತಪ್ಪನ್ನು ನಾನು ಮಾಡಿಲ್ಲ. ಈ ಸನ್ನಿಧಿಯಲ್ಲಿ ಮನೆದೇವರ ಮೇಲೆ ಆಣೆ ಮಾಡ್ತೇನೆ. ಕೆಲವು ರಾಜಕೀಯ ವಿರೋಧಿಗಳು ನಮ್ಮ ವಿರುದ್ಧ ಸಂಚು ನಡೆಸಿದ್ದಾರೆ. ಎಲ್ಲದಕ್ಕೂ ತಕ್ಕ ಉತ್ತರ ನೀಡಲಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತೆ ಡಿಕೆಶಿ ದಾಳಿ : ಸುದ್ದಿಗಾರರೊಂದಿಗೆ ನಗರದಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್, ಕುಮಾರಸ್ವಾಮಿ ವಿರುದ್ಧ ತಮ್ಮ ವಾಗ್ದಾಳಿಯನ್ನು ಮುಂದುವರೆಸಿದ್ದಾರೆ.
ಮುಖ್ಯಮಂತ್ರಿಯಾದ ಕೇವಲ 50 ದಿನಗಳಲ್ಲಿ ಕುಮಾರಸ್ವಾಮಿ, ನಗರದ ವೈಟ್ಫೀಲ್ಡ್ ಬಳಿ 85 ಕೋಟಿ ರೂ. ಆಸ್ತಿಯನ್ನು ಖರೀದಿಸಿದ್ದಾರೆ. ಬಹುಶಃ ಬಳ್ಳಾರಿ ಗಣಿಗಾರಿಕೆಯ ಕಪ್ಪವನ್ನು ಇಲ್ಲವರು ಹೂಡಿಕೆ ಮಾಡಿರಬೇಕು. ಇಲ್ಲದಿದ್ದರೆ ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಬಡ ರೈತರ ಮಗ, ನಮ್ಮ ಕುಟುಂಬ ಪ್ರಾಮಾಣಿಕತೆಗೆ ಇನ್ನೊಂದು ಹೆಸರು ಎಂದೆಲ್ಲಾ ದೇವೇಗೌಡರು ಹೇಳುತ್ತಾರೆ. ಮತ್ತೆ ಈ ಆಸ್ತಿ ಖರೀದಿಸಲು ಅವರ ಮಗನಿಗೆ ಹೇಗೆ ಸಾಧ್ಯವಾಯಿತು. ಶುಂಠಿ, ಆಲೂಗಡ್ಡೆ, ಕಡ್ಲೆಕಾಯಿ ಬೆಳೆದು ಆಸ್ತಿ ಖರೀದಿಸಿದರೆ ಎಂದು ಡಿ.ಕೆ.ಶಿವಕುಮಾರ್ ಗೇಲಿ ಮಾಡಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ












Click it and Unblock the Notifications