ಅಂಗವೈಕಲ್ಯ ಮೆಟ್ಟಿನಿಂತ ಕ್ರೀಡಾಪಟು ಮಾಲತಿ ಈಗ ಏನ್ಮಾಡ್ತಿದಾರೆ?
ಬೆಂಗಳೂರು : ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಾಲಿ ಕುರ್ಚಿಯ ಕ್ರೀಡಾಪಟು ಮಾಲತಿ ಹೊಳ್ಳ ಈಗೇನು ಮಾಡುತ್ತಿದ್ದಾರೆ ?
ಮಾಲತಿ ಈಗ ಸಮಾಜ ಸೇವಕಿ. ಅಪಘಾತಗಳಲ್ಲಿ ಬೆನ್ನು ಮೂಳೆ ಮುರಿದುಕೊಂಡು ಒದ್ದಾಡುತ್ತಿರುವವರಿಗಾಗಿ ಒಂದು ಪ್ರತ್ಯೇಕ ಮನೆ ಕಟ್ಟುತ್ತಿದ್ದಾರೆ. ವಿವಿಧ ನಮೂನೆಯ ಅಫಘಾತಗಳಲ್ಲಿ ಬೆನ್ನು ಮೂಳೆ ಮುರಿದುಕೊಂಡು ಓಡಾಡಲಾಗದೇ ಗಾಲಿ ಕುರ್ಚಿಯನ್ನು ಅವಲಂಬಿಸಿದವರಿಗಾಗಿ ಮಾಲತಿ ನಿರ್ಮಿಸುತ್ತಿರುವ ಮನೆ-ಬದುಕಿನ ಆಶಾಕಿರಣವಾಗಲಿದೆ.
ಬೆನ್ನು ಮೂಳೆ ಮುರಿದುಕೊಂಡು ಅನಿರೀಕ್ಷಿತವಾಗಿ ಅಂಗವಿಕಲರಾದವರು ಗಾಲಿ ಕುರ್ಚಿಯನ್ನು ಅವಲಂಬಿಸುವಾಗ ಮಾನಸಿಕ ಸ್ಥೈರ್ಯ ಕಡಿಮೆಯಾಗುತ್ತದೆ. ಬೆನ್ನು ಮೂಳೆ ಮುರಿದುಕೊಂಡವರಿಗೆ ಬದುಕಿನಲ್ಲಿ ಆತ್ಮವಿಶ್ವಾಸ ಮೂಡಿಸುವುದು ಹಾಗೂ ಇಂತಹ ಅಪಘಾತಗಳಿಂದಾಗಿ ಜೀವನದಲ್ಲಿ ಸಾಧನೆ ಮಾಡುವ ಧ್ಯೇಯ ಹೊಂದಿರುವವರು ಧೈರ್ಯ ಕುಂದದಂತೆ ನೋಡಿಕೊಳ್ಳುವುದು ಮಾಲತಿ ನಿರ್ಮಿಸುತ್ತಿರುವ ಮನೆಯ ಉದ್ದೇಶ. ಈ ಮನೆಯಲ್ಲಿ ಟಿವಿ, ಫೋನ್, ಹಾಸಿಗೆಗಳಲ್ಲಿ ಯಾರನ್ನೂ ಅವಲಂಬಿಸದೇ ಬದುಕುವುದು ಹೇಗೆ ಎಂಬ ಬಗ್ಗೆ ರೋಗಿಗಳಿಗೆ ಹೇಳಳಿಕೊಡಲಾಗುವುದು.
ಇದೇ ಮಾದರಿಯಲ್ಲಿ ರಜಾ ಕಾಲೀನ ವಸತಿ ಗೃಹಗಳನ್ನು ನಿರ್ಮಿಸುವ ಬಗ್ಗೆ ಹಾಗೂ ಹೆಚ್ಚಿನ ಶಿಕ್ಷಣ ಪಡೆಯಲು ಇಚ್ಚಿಸುವವರಿಗೆ ನೆರವಾಗುವ ಬಗ್ಗೆಯೂ ಮಾಲತಿ ಯೋಚಿಸುತ್ತಿದ್ದಾರೆ. ಈ ಹೊಸ ಯೋಜನೆಗೆ ಮೊತ್ತ ಮೊದಲನೆಯದಾಗಿ ನಿಧಿ ಸಂಗ್ರಹ ನಡೆಯಬೇಕು. ನಿಧಿ ಸಂಗ್ರಹವಾದ ನಂತರ ಬೆನ್ನು ಮೂಳೆ ಮುರಿದುಕೊಂಡ ಅಂಗವಿಕಲರಿಗೆ ನಿರ್ಮಿಸುವ ಮನೆಯ ರೂಪು ರೇಷೆಗಳು ಸ್ಪಷ್ಟವಾಗಲಿದೆ.












Click it and Unblock the Notifications