ಮೂರು ದಿನಗಳ ಹಂಪಿ ಉತ್ಸವ ನವೆಂಬರ್ 3ರಿಂದ ಆರಂಭ
ಹೊಸಪೇಟೆ: ಮೂರು ದಿನಗಳ ಕಾಲ ನಡೆಯುವ ಹಂಪಿ ಉತ್ಸವ ನವೆಂಬರ್ ಮೂರರಿಂದ ಪ್ರಾರಂಭವಾಗಲಿದೆ.
ಉತ್ಸವವನ್ನು ಮುಖ್ಯಮಂತ್ರಿ ಎಸ್. ಎಮ್. ಕೃಷ್ಣ ಉದ್ಘಾಟಿಸಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ. ಸಿ. ರಾಮಮೂರ್ತಿ ತಿಳಿಸಿದ್ದಾರೆ.
ಹಂಪಿಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಉತ್ಸವದಲ್ಲಿ ಸ್ಥಳೀಯ 400 ಕಲಾವಿದರು ಇರುವ 23 ತಂಡಗಳು, ಕೇಂದ್ರ ಸರಕಾರದ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮ, ನಟಿ ಶೋಭನಾ ಅವರ ಭರತ ನಾಟ್ಯ, ಮೋಹಿನಿ ಅಟ್ಟಂ, ರಂಗಾಯಣದ ನಾಟಕ ಮುಂತಾದ ಮನರಂಜನೆ ಕಾರ್ಯಕ್ರಮಗಳಿರುತ್ತವೆ ಎಂದು ತಿಳಿಸಿದ್ದಾರೆ.
ಉತ್ಸವದ ಸಿದ್ಧತೆ ರಾಜ್ ಅಪಹರಣದಿಂದ ತಡವಾಯಿತು. ರಾಜ್ ಪುತ್ರರು ದಸರೆಗೆ ನೆರವು ನೀಡಿದ್ದರಿಂದ ಹಂಪಿ ಉತ್ಸವಕ್ಕೆ ಮೆರುಗು ಬಂದಿದೆ ಎಂದು ರಾಜ್ಯ ಸಭಾ ಸದಸ್ಯ ಕೆ. ಸಿ. ಕೊಂಡಯ್ಯ ವಿವರಿಸಿದರು.
ಪುಸ್ತಕಗಳು ಅರ್ಧ ಬೆಲೆಗೆ : ಉತ್ಸವದ ಅಂಗವಾಗಿ ಕಳೆದ ಎರಡು ವರ್ಷ ಬೃಹದೇಶಿ ಮತ್ತು ಹರಿಹರನ ರಗಳೆಗಳು ಪ್ರಕಟಿಸಲಾಗಿದ್ದು , ಈ ಭಾರಿ ಸಾವಿರದ ಕೀರ್ತನೆಗಳು ಪ್ರಕಟಣೆಗೊಳ್ಳಲಿವೆ. ವಿವಿಯ ಪ್ರಕಟಣೆಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಹಂಪಿಯ ಕನ್ನಡ ವಿವಿ ಕುಲಪತಿ ಎಂ. ಎಂ. ಕಲಬುರ್ಗಿ ತಿಳಿಸಿದ್ದಾರೆ.
ಸಭೆಯಲ್ಲಿ ಬಳ್ಳಾರಿ ಸಂಸದ ಕೆ. ಬಸವೇಗೌಡ, ಪತ್ರಕರ್ತ ವಂಕಟೇಶ್ವರರಾವ್ ಮಾತನಾಡಿದರು. ಸ್ಥಳೀಯ ಶಾಸಕಿ ಗುಜ್ಜಲ ಜಯಲಕ್ಷ್ಮಿ, ಬಳ್ಳಾರಿ ಜಿಲ್ಲಾಧಿಕಾರಿ ಜಾವೆದ್ ಅಕ್ತರ್, ಎಸ್. ಪಿ. ಅಲೋಕ್ ಮೋಹನ್, ಕೊಪ್ಪಳ ಜಿಲ್ಲಾಧಿಕಾರಿ ನಾರಾಯಣ ಸ್ವಾಮಿ, ಪರಿಷತ್ ಅಧ್ಯಕ್ಷ ರಾಮಣ್ಣ ಭಜಂತ್ರಿ ಹಾಜರಿದ್ದರು.