ಹೊಗೆಯಾವರಿಸಿದ ಮುಗಿಲಲ್ಲಿ ಮಳೆಯಿಲ್ಲ
ಬೆಂಗಳೂರು : ಬೆಂಗಳೂರಿನಲ್ಲಿ ಬಿಸಿಲು ಚುರ್ ಎನ್ನುತ್ತಿದೆ. ಆದರೂ, ಹಿತವಾಗಿದೆ. ಮಳೆಯಿಲ್ಲ. ಮೋಡವಿಲ್ಲ. ಮುಗಿಲನ್ನೆಲ್ಲಾ ಪಟಾಕಿಯ ಹೊಗೆಯೇ ಆವರಿಸಿದೆ. ನಕ್ಷತ್ರಗಳನ್ನು ನಾಚಿಸುವಂತೆ ರ್ಯಾಕೆಟ್ಗಳು ಮೇಲೇರಿ ಮಿನುಗಿ, ಸಿಡಿಯುತ್ತಿವೆ. ಹೇಳಿ ಕೇಳಿ ಅಮಾವಾಸ್ಯೆ ಆದ್ದರಿಂದ ಹೊಸ ಬಟ್ಟೆ ತೊಟ್ಟು ಬಿರುಸಿನ ಕುಡಿಕೆಗಳ ಹಚ್ಚುತ್ತಾ ಆನಂದಿಸುತ್ತಿರುವ ಮಕ್ಕಳ ಮುದ್ದು ಮುಖದೆದುರು ಚಂದ್ರ ಮರೆಯಾಗಿದ್ದಾನೆ.
ರಾಜ್ಯದೆಲ್ಲೆಡೆ ಬಹುತೇಕ ಒಣಹವೆ ಇದೆ. ಕರಾವಳಿ ಹಾಗೂ ಒಳನಾಡಿನಲ್ಲಿ ಒಣಹವೆ ಕಂಡುಬಂದಿದೆ. ಉತ್ತರ ಒಳನಾಡಿನಲ್ಲಿ ದಿನದ ಗರಿಷ್ಠ ಉಷ್ಣಾಂಶದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದೆ. ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅನೇಕ ಕಡೆಗಳಲ್ಲಿ ತಾಪಮಾನ ಸಾಮಾನ್ಯಕ್ಕಿಂತಲೂ ಹೆಚ್ಚಾಗಿತ್ತು. ಬೀದರ್ ಹಾಗೂ ಗುಲ್ಬರ್ಗಾದಲ್ಲಿ ದಿನದ ಗರಿಷ್ಠ ತಾಪಮಾನ 34ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕನಿಷ್ಠ ಉಷ್ಣಾಂಶ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 16.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಮುನ್ಸೂಚನೆಯಂತೆ ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಅವಧಿಯಲ್ಲಿ ಒಣಹವೆ ಮುಂದುವರಿಯಲಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ನಿರ್ಮಲ ಆಕಾಶವಿದ್ದು, ತಾಪಮಾನ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆ ಇದೆ.
ಮೊನ್ನೆಯಷ್ಟೇ ಬೆಳ್ಳಂದೂರು ಕೆರೆಯಲ್ಲಿ ಹಿಮವತ್ಪರ್ವತದಂತೆ ಬುಗಿಲೆದ್ದಿದ್ದ ಬೆಳ್ನೊರೆ ಪರಿಸರ ಮಾಲಿನ್ಯಕ್ಕೆ ತನ್ನ ಕೊಡುಗೆಯನ್ನೂ ನೀಡದಂತೆ, ಪಟಾಕಿಯ ಹೊಗೆ ಕೂಡ ತನ್ನ ಕೈಲಾದಷ್ಟು ಮಟ್ಟಿಗೆ ವಾಯುಮಾಲಿನ್ಯ ಉಂಟುಮಾಡಿದೆ. ಪಟಾಕಿಯ ಹೊಗೆಯಿಂದ ಅಸ್ತಮಾ ರೋಗಿಗಳು, ಕೆಮ್ಮಿ ಕೆಮ್ಮಿ ಸುಸ್ತಾಗಿದ್ದಾರೆ. ಔಷಧಾಲಯಗಳ ಮುಂದೆ, ವೈದ್ಯರೆದುರು ಈಗಲೂ ಕೆಮ್ಮುತ್ತಾ ನಿಂತಿದ್ದಾರೆ.