ಶಾಂತ ನಿದ್ರೆಗೆ ಶಾಂತಕ್ಕ ಶರಣು
ಬೆಂಗಳೂರು : ಹಿರಿಯ ಲೇಖಕಿ ಮತ್ತು ಬಾಗಲಕೋಟೆಯಲ್ಲಿ ನಡೆದ 68ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆವಹಿಸಿದ್ದ ಶಾಂತಾದೇವಿ ಮಾಳವಾಡ(83) ಇನ್ನಿಲ್ಲ.
ಧಾರವಾಡದಲ್ಲಿ ಭಾನುವಾರ ಬೆಳಗ್ಗೆ ಅವರು ಅನಾರೋಗ್ಯದಿಂದ ನಿಧನರಾದರು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪೀಠವನ್ನು ಅಲಂಕರಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು, ಕಳೆದ ಐದು ದಶಕಗಳಿಂದ ಸಾಹಿತ್ಯ ಲೋಕದಲ್ಲಿ ಸದ್ದುಗದ್ದಲವಿಲ್ಲದೇ ಕ್ರಿಯಾಶೀಲತೆಯಿಂದ ಗುರ್ತಿಸಿಕೊಂಡಿದ್ದರು.
1922ರ ಡಿಸೆಂಬರ್ 10ರಂದು ಬಾದಾಮಿ ತಾಲೂಕಿನ ಗೋವಲ ಕೊಪ್ಪದಲ್ಲಿ ಜನಿಸಿದ ಶಾಂತಾದೇವಿ, ತಮ್ಮ ಹದಿನೈದನೇ ವಯಸ್ಸಿನಲ್ಲಿಯೇ ಸ.ಶ. ಮಾಳವಾಡ ಅವರನ್ನು ವಿವಾಹವಾಗಿದ್ದರು. ಉತ್ತರ ಕರ್ನಾಟಕ ಭಾಗದಿಂದ ಹೊರಹೊಮ್ಮಿದ ಮಹಿಳಾ ಸಾಹಿತಿಗಳ ಮೊದಲ ಪಂಕ್ತಿಯಲ್ಲಿ ಅವರು ನಿಂತಿದ್ದರು. ಮೊಗ್ಗೆಯ ಮಾಲೆ ಎಂಬ ಕೃತಿಯಿಂದ ಸಾಹಿತ್ಯ ಕೃಷಿ ಆರಂಭಿಸಿದ ಅವರು, ಕುಂಕುಮಬಲ, ಹರಿಹರನ ಪ್ರಾರ್ಥನೆ , ಕನ್ನಡತಾಯಿ, ನಂದಾದೀಪ ಹಾಗೂ ಶ್ರೀಗಿರಿಯಿಂದ ಹಿಮಗಿರಿಗೆ ಕೃತಿಗಳು ಶಾಂತಾದೇವಿ ಅವರ 40ಕ್ಕೂ ಹೆಚ್ಚು ಕೃತಿಗಳಲ್ಲಿ ಅತ್ಯಂತ ಜನಪ್ರಿಯವಾದವು.
ಅವರ ಇತ್ತೀಚಿನ ಕೃತಿ 1998ರಲ್ಲಿ ಪ್ರಕಟವಾದ ಶೂರರಾಣಿ ಕೆಳದಿ ಚೆನ್ನಮ್ಮಾಜಿ. ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ಗೌರವ ಸದಸ್ಯತ್ವ ಅವರಿಗೆ ಸಂದಿದ್ದ ಕೆಲವು ಸಮ್ಮಾನಗಳು. ಅವರ ಅಭಿಮಾನಿಗಳು ಅವರಿಗೆ ಆದರದಿಂದ ' ಪ್ರಶಾಂತ’ ಎನ್ನುವ ಅಭಿನಂದನಾ ಗ್ರಂಥವನ್ನು ಅರ್ಪಿಸಿದ್ದರು. ಸಾಹಿತ್ಯ ಲೋಕದಲ್ಲಿ ಶಾಂತಕ್ಕ ಎಂದೇ ಕರೆಸಿಕೊಂಡಿದ್ದ ಅವರು, ಧಾರವಾಡವನ್ನು ಕನ್ನಡ ಸಂಸ್ಕೃತಿಯ ರಾಜಧಾನಿಯನ್ನಾಗಿ ಪರಿವರ್ತಿಸಿದ ಕೀರ್ತಿಗೆ ಪಾತ್ರರಾಗಿದ್ದರು.
(ಇನ್ಫೋ ವಾರ್ತೆ)