Get Updates
Get notified of breaking news, exclusive insights, and must-see stories!

ಶಿರಸಿಯಲ್ಲಿ ಹೀಗೊಂದು ಅ'ಮರ' ಭಕ್ತಿ!

Banyan tree in Shirsi
ಹಳ್ಳಿಗಾಡಿನ ಜನರ ಮನದಲ್ಲಿ ಬೇರು ಬಿಟ್ಟಿರುವ ನಂಬಿಕೆ ಅಥವಾ ಮೂಢನಂಬಿಕೆಗಳನ್ನು ಸುಲಭವಾಗಿ ಕಿತ್ತುಹಾಕುವುದು ಅಷ್ಟು ಸುಲಭದ ಪ್ರಶ್ನೆಯಲ್ಲ. ಹಲವು ಬಾರಿ ಇಂಥ ಮೂಢನಂಬಿಕೆಗಳು ಹಾನಿ ಮಾಡದಿಲ್ಲರೂ ಉಪಕಾರವನ್ನೂ ಮಾಡುವುದಿಲ್ಲ. ಪ್ರಕೃತಿಯ ಭಾಗವಾಗಿರುವ ಮರಗಳ ದೈವಿಕತೆಯ ಬಗ್ಗೆ ಜನರಿಗೆ ವಿಶೇಷವಾದ ಪ್ರೀತಿ. ಆದರೆ, ಅದು ಧರೆಗುರುಳಿದ ಮೇಲೂ ಅದನ್ನು ಮುಟ್ಟಲು ಅಥವಾ ತೆರವುಗೊಳಿಸಲು ಹೆದರಿದರೆ ಹೇಗೆ?

* ನಾಗರಾಜ್ ವೈದ್ಯ, ಶಿರಸಿ

ಮರಗಳೊಂದಿಗಿನ ಮನುಷ್ಯ ಸಂಬಂಧ ಇಂದು ನಿನ್ನೆಯದಲ್ಲ. ಪುರಾತನ ಕಾಲದಿಂದಲೂ ಮರಗಳೆಂದರೆ ಪೂಜ್ಯ ಭಾವನೆ. ಅದರಲ್ಲೂ ಅರಳೀ ಮರ, ಅಶ್ವತ್ಥ ಮರ ಮುಂತಾದ ದೀರ್ಘಾಯಸ್ಸಿನ ಮರಗಳಲ್ಲಿ ದೇವರು ನೆಲೆಸಿರುತ್ತಾನೆ ಎಂಬ ಧಾರ್ಮಿಕ ನಂಬಿಕೆ ಜನಮಾನಸದಲ್ಲಿ ನೆಲೆಯೂರಿದೆ. ಮದುವೆಯಾಗದವರು, ಮದುವೆಯಾಗಿಯೂ ಮಕ್ಕಳಾಗದವರು, ಒಳ್ಳೆ ಹೆಂಡತಿ ಸಿಗಬೇಕೆಂದು ಬಯಸುವವರು ಅಶ್ವತ್ಥ ಮರ ಸುತ್ತುವುದನ್ನು ನೋಡಿರಬಹುದು. ಮರಗಳೊಂದಿಗಿನ ಧಾರ್ಮಿಕ ನಂಟು ಎಷ್ಟು ಪ್ರಭಾವಶಾಲಿಯಾಗಿರುತ್ತದೆಂಬುದಕ್ಕೆ ಇಲ್ಲಿದೆ ಒಂದು ತಾಜಾ ಉದಾಹರಣೆ...

ಶಿರಸಿಯ ಪ್ರಮುಖ ಭಾಗದಲ್ಲಿರುವ ದುಂಡಶಿನಗರದಲ್ಲಿ ಐತಿಹಾಸಿಕ ಅರಳಿ ಮರವೊಂದು ಇತ್ತು. ಕಳೆದ ಸೆ.12ರಂದು ಇದ್ದಕ್ಕಿದ್ದಂತೆ ಧರಾಶಾಹಿಯಾಗಿದೆ. ಆದರೆ ಇದುವರೆಗೆ ಅದನ್ನು ತೆರವುಗೊಳಿಸಲು ಯಾರೂ ಮುಂದಾಗಿಲ್ಲ. ನಗರಾಡಳಿತವನ್ನು ನೋಡಿಕೊಳ್ಳುತ್ತಿರುವ ನಗರಸಭೆ ಕೂಡ ಮರದ ಬಗೆಗಿರುವ ಧಾರ್ಮಿಕ ಭಾವನೆಗಳ ಹಿನ್ನೆಲೆಯಲ್ಲಿ ಮರವನ್ನು ತೆಗೆಯಲು ಹಿಂದೇಟು ಹಾಕುತ್ತಿದೆ ಎಂದು ಗೊತ್ತಾಗಿದೆ.

ಸ್ವಾದಿಯ ಅರಸಪ್ಪನ ನಂಟು : ಕಳೆದ ತಿಂಗಳು ಇದ್ದಕ್ಕಿದ್ದಂತೆ ನೆಲಕ್ಕುರುಳಿದ ಅರಳಿ ಮರಕ್ಕೆ ತುಂಬಾ ಹಿಂದಿನ ಇತಿಹಾಸವಿದೆ. ಸ್ವಾದಿಯನ್ನು ಅರಸಪ್ಪ ನಾಯಕ ಆಳುತ್ತಿರುವಾಗ ದುಂಡಶಿನಗರದ ಈ ಪ್ರದೇಶವನ್ನು ವಿಶ್ರಾಂತಿಗಾಗಿ ಬಳಸುತ್ತಿದ್ದ. ಸ್ವಾದಿಯಿಂದ ಇಲ್ಲಿಗೆ ಕುದುರೆಯ ಮೇಲೆ ಬಂದು ಈ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದನೆಂಬ ಬಗ್ಗೆ ಮಾಹಿತಿ ಇತಿಹಾಸದಲ್ಲಿ ದಾಖಲಾಗಿದೆ. ಹಾಗಾಗಿಯೇ ಈ ಮರವಿದ್ದ ಜಾಗವನ್ನು ಅರಸಪ್ಪನ ಕಟ್ಟೆ ಎಂದು ಕರೆಯಲಾಗುತ್ತದೆ ಎನ್ನುತ್ತಾರೆ ಸ್ಥಳೀಯರು. ಅಂದಿನಿಂದಲೂ ಈ ಮರವನ್ನು ಧಾರ್ಮಿಕ ಭಾವನೆಯಿಂದ ನೋಡುತ್ತಿದ್ದಾರೆ. ವರ್ಷಂಪ್ರತೀ ಪೂಜೆ ಪುನಸ್ಕಾರಗಳು ನಡೆಯುತ್ತ ಬಂದಿವೆ.

ಈ ಸ್ಥಳವನ್ನು ಪ್ರಮುಖ ಆಕರ್ಷಣೆಯ ಕೇಂದ್ರವಾಗಿ ಪರಿವರ್ತಿಸಲು ಮರದ ಸುತ್ತಲೂ ಕಟ್ಟೆಯನ್ನು ನಿರ್ಮಿಸಲು ಕೆಲ ವರ್ಷಗಳ ಹಿಂದೆಯೇ ನಿರ್ಧಾರ ಕೈಗೊಳ್ಳಲಾಗಿತ್ತು. ನಗರಾಡಳಿತ ಕೂಡ ಹಲವು ಲಕ್ಷಗಳನ್ನು ಈ ಕಾರ್ಯಕ್ಕೆ ಮಂಜೂರು ನೀಡಿ ಠರಾವುಪಾಸು ಮಾಡಿದೆ. ಆದರೆ ಸಮನ್ವಯದ ಕೊರತೆಯಿಂದಾಗಿ ಈ ಕೆಲಸ ಪ್ರಾರಂಭದಲ್ಲಿಯೇ ನ್ಯಾಯಾಲಯದ ಮೆಟ್ಟಿಲೇರಿತ್ತು. ನಂತರ ಯಾವುದೇ ಕಾಮಗಾರಿ ನಡೆದಿಲ್ಲ; ಈಗ ಕಟ್ಟೆ ಕಟ್ಟಿಸಲು ಮರವೇ ಉಳಿದಿಲ್ಲ!

ದೈವಿಕ ಭಕ್ತಿಯ ಹೊರತಾಗಿ ಇನ್ನೂ ಹಲವಾರು ಕಾರಣಗಳಿಂದಾಗಿ ಈ ಮರವನ್ನು ಯಾರೂ ಮುಟ್ಟುತ್ತಿಲ್ಲ. ಈ ಮರದಲ್ಲಿ ಬ್ರಹ್ಮರಾಕ್ಷಸ ನೆಲೆಸಿದ್ದಾನೆ ಹಾಗಾಗಿ ಇದನ್ನು ಕಡಿಯುತ್ತಿಲ್ಲ ಎಂಬುದು ಸ್ಥಳೀಯರು ನೀಡುವ ಕಾರಣಗಳಲ್ಲೊಂದು. ಈ ಮರದ ಒಂದು ಎಲೆಯನ್ನು ಮುಟ್ಟಿ ನೋಡೋಣ ಎಂದು ಕೆಲವರು ಛಾಲೆಂಜ್ ಮಾಡಿದ್ದಾರೆ. ಮರಕ್ಕೆ ನೋವು ಮಾಡಿದರೆ ಅದರಲ್ಲಿರುವ ದೇವರು ಕೊನೆತನಕ ಕಾಡುತ್ತಾನೆ ಎಂದು, ಬೇರು ಸಮೇತ ಮರ ಕಿತ್ತುಬಿದ್ದಿದ್ದರೂ ಮರದ ಬಗ್ಗೆ ವಿಚಿತ್ರ ನಂಬುಕೆ ಜನರಲ್ಲಿ ಬೇರೂರಿದೆ.

ಉರುಳಿ ಬಿದ್ದಿರುವ ಈ ಮರವನ್ನು ತೆರವುಗೊಳಿಸಲು ಸಾಕಷ್ಟು ಧಾರ್ಮಿಕ ವಿಧಿವಿಧಾನಗಳು ನಡೆಯಬೇಕಾಗಿದೆ. ಅದನ್ನು ನೆರವೇರಿಸಿದ ವಿನಃ ಮರವನ್ನು ಕಡಿದರೆ ಆಪತ್ತು ಸಂಭವಿಸಲಿದೆ ಎಂಬ ನಂಬಿಕೆ ಇಲ್ಲಿಯವರಿಗಿದೆ. ಇದರಿಂದಾಗಿ ಒಂದು ತಿಂಗಳು ಕಳೆದರೂ ಈ ಬಹತ್ ಅರಳಿ ಮರ ರಸ್ತೆಯ ಮೇಲೆ ಮಲಗಿದೆ. ಇದರಿಂದ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಮರದ ಟೊಂಗೆಗಳು ಚರಂಡಿಯಲ್ಲಿ ಬಲವಾಗಿ ಊರಿರುವುದರಿಂದ ನೀರು ಹರಿಯುತ್ತಿಲ್ಲ. ಇನ್ನೂ ಮಳೆ ನಿಂತಿಲ್ಲದ ಕಾರಣದಿಂದ ಮಳೆ ನೀರು ರಸ್ತೆಯ ಮೇಲೆ ಹರಿಯುವ ಪರಿಸ್ಥಿತಿ ಉಂಟಾಗಿದೆ. ಇದನ್ನು ಆದಷ್ಟು ಬೇಗ ತೆರವುಗೊಳಿಸಿ ಅನುಕೂಲ ಮಾಡಿಕೊಡಿ ಅನ್ನುತ್ತಾರೆ ಕೆಲವು ಸ್ಥಳೀಯ ನಿವಾಸಿಗಳು.

ಒಟ್ಟಿನಲ್ಲಿ ಮರದ ಮೇಲೆ ಧಾರ್ಮಿಕ ಭಾವನೆಗಳನ್ನು ಇಟ್ಟುಕೊಂಡಿರುವುದರಿಂದ ತೆರವುಗೊಳಿಸಲು ಇಲಾಖೆಗಳು ಕೂಡ ಹಿಂದೇಟು ಹಾಕುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+