ಕಥೆ ಹೇಳುವ ಸೊಗಸಾದ ಕಲೆ ಸಿದ್ಧಿಸಿಕೊಂಡಿರುವ ರಾಜಾರಾಂ ಮುಂಡಿಗೇಸರ
ಕೆಲ ಸಮಯದ ಹಿಂದೆ ಪತ್ರಿಕೆಯೊಂದರಲ್ಲಿ ವಿಮರ್ಶಕ ಡಾ. ಬಿ. ಹರೀಶ್ ರವರು ಒಂದು ಅಂಕಣವನ್ನು ಬರೆದಿದ್ದು ನೆನಪಿದೆ. 'ಅಗೆದಷ್ಟು ವ್ಯಾಸ - ಮೊಗೆದಷ್ಟೂ ವಾಲ್ಮೀಕಿ' ಎನ್ನುವುದು ಅದರ ಶೀರ್ಷಿಕೆಯಾಗಿತ್ತು. ರಾಮಾಯಣ - ಮಹಾಭಾರತ ಕಥನಗಳ ಪ್ರಸ್ತುತತೆ ಮತ್ತು ಭಾರತೀಯ ಜನಮಾನಸದಲ್ಲಿ ಅದರ ವ್ಯಾಪಕ ಪ್ರಭಾವವನ್ನು ಕುರಿತು ಬರೆದ ಲೇಖನ ಅದು.
ಡಾ. ಯು ಆರ್ ಅನಂತಮೂರ್ತಿಯವರು ಶೈಕ್ಷಣಿಕ ಸಲಹಾ ಸಮಿತಿಯ ಸದಸ್ಯರಾಗಿದ್ದಾಗ ಸರ್ಕಾರಕ್ಕೆ ಒಂದು ಶಿಫಾರಸ್ಸು ಮಾಡಿದ್ದರಂತೆ. ಹಿಂದೆಲ್ಲಾ ಊರು ಊರುಗಳಲ್ಲಿ ಕಥೆ ಹೇಳುವವರು ಇರುತ್ತಿದ್ದರು. ಇಂದು ಹಾಗಿಲ್ಲವಾಗಿದೆ. ಆದ್ದರಿಂದ ಒಳ್ಳೆಯ ಕಥೆ ಹೇಳುವವರನ್ನು ಶಾಲೆಗಳಲ್ಲಿ ನೇಮಿಸಿಕೊಳ್ಳಬೇಕು ಎಂಬುದು. ಕೆಲವು ಸರ್ಕಾರಗಳು ಅದನ್ನು ಒಪ್ಪಿಕೊಂಡೂ ಇದ್ದವು. ಆಮೇಲೆ ಅದು ಎಷ್ಟು ಕಾರ್ಯಗತವಾಯಿತೋ ತಿಳಿಯದು.
ನಿಜಕ್ಕೂ ಕಥಾ ನಿರೂಪಣೆ ಒಂದು ಸಾಂಸ್ಕೃತಿಕ ಸೊಗಸನ್ನು ಬಿಂಬಿಸುವ ಕಲೆ (ವಿಧಾನ). ಕಥೆಗಳಲ್ಲಿ ಹಲವು ರೀತಿ. ಅದರಲ್ಲಿಯೂ ರಾಮಾಯಣ, ಮಹಾಭಾರತ ಕಥೆಗಳ ವಿಷಯಕ್ಕೆ ಬಂದರೆ ಬೇರೆ ಬೇರೆ ರೀತಿಯಲ್ಲಿ ಇದರ ಆಖ್ಯಾನವನ್ನು ನಾವು ಕೇಳಬಹುದು. ಹರಿಕಥೆ, ಯಕ್ಷಗಾನದ ಪ್ರಸಂಗ, ಗಮಕ ವಾಚನ ಹೀಗೆ. ಅದಕ್ಕೆಲ್ಲಾ ಬೇರೆ ಬೇರೆ ಪರಿಕರಗಳು ಬೇಕು. ಒಂದೆಡೆ ಕುಳಿತು ಕಥೆ ಹೇಳುವ ಬಗೆ ಮತ್ತೊಂದು ವಿಧಾನ.
ರಾಮಾಯಣ ಮತ್ತು ಮಹಾಭಾರತದ ಕಥೆಗಳನ್ನು ಸೊಗಸಾಗಿ ಸಿದ್ದಿಸಿಕೊಂಡವರು ರಾಜಾರಾಂ ಮುಂಡಿಗೇಸರ. ನನಗೆ ಅವರು ಮಾಡುವ ಆಖ್ಯಾನವನ್ನು ಕೇಳುವ ಒಂದು ಸಂದರ್ಭ ಸಿಕ್ಕಿತು. ಆಗ ನಾನು ಅದನ್ನು ಮೆಚ್ಚಿಕೊಂಡು "ನೀವೇಕೆ ಇದನ್ನು ಒಂದು ಆಡಿಯೋ ಮಾಡಬಾರದು" ಎಂದು ಕೇಳಿದ್ದೆ. ಕಳೆದ ಕೆಲ ವರ್ಷಗಳಿಂದ ಇವರು ತಮ್ಮ ಊರಿನ 'ನೀನಾಸಂ'ನಲ್ಲಿ ವಿದ್ಯಾರ್ಥಿಗಳಿಗೆ ಕಥೆಗಳನ್ನು ಹೇಳುತ್ತಾ ಬಂದಿದ್ದಾರೆ. ಅಲ್ಲದೇ ಕಿನ್ನರ ಮೇಳ, ರಂಗಾಯಣ ಶಿವಮೊಗ್ಗ, ಮಕ್ಕಳ ಬೇಸಿಗೆ ಶಿಬಿರದಲ್ಲೆಲ್ಲಾ ಹೇಳುತ್ತಾ ಬಂದಿದ್ದಾರೆ.

ರಾಮಾಯಣ ಮಹಾಭಾರತದ ಕಥೆಗಳನ್ನು ಅಚ್ಚುಕಟ್ಟಾಗಿ, ಚೆಂದವಾಗಿ, ಸರಳವಾಗಿ, ಸ್ವಲ್ಪವೂ ಗೊಂದಲಕ್ಕೆ ಎಡೆಮಾಡದೇ, ಸ್ಪಷ್ಟವಾಗಿ ಮತ್ತು ಸ್ಪುಟವಾಗಿ ಹೇಳುವ ಇವರು ಶೈಲಿ ವಿಶಿಷ್ಟವಾದುದು. "ಇದು ನಿಮಗೆ ಹೇಗೆ ಸಾಧ್ಯವಾಯಿತು?" ಎಂದು ನಾನು ಅವರನ್ನು ಕೇಳಿದಾಗ, "ನನಗೆ ಚಿಕ್ಕಂದಿನಿಂದಲೂ ಯಕ್ಷಗಾನವನ್ನು ನೋಡುವ ಅಭ್ಯಾಸ ಇತ್ತು. ಹಾಗೆಯೇ ನನ್ನ ಅಪ್ಪ, ಚಿಕ್ಕಪ್ಪಂದಿರು ಓದುತ್ತಿದ್ದ ಆಗಿನ ಕಾಲದ ಐದನೇ ತರಗತಿಯ ಪಠ್ಯ ಪುಸ್ತಕ "ನೀತೀ ಚಿಂತಾಮಣಿ"ಯಲ್ಲಿ ಈ ಎಲ್ಲಾ ಕಥೆಗಳು ಬಿಡಿ ಬಿಡಿಯಾಗಿ ಇರುತ್ತಿದ್ದವು. ಅವು ನನ್ನ ಮನಸ್ಸಿನ ಮೇಲೆ ಆ ವಯಸ್ಸಿನಲ್ಲೇ ಅಚ್ಚೊತ್ತಿದ್ದವು. ಕಥಾಲೋಕಕ್ಕೆ ನನ್ನನ್ನು ಪರಿಚಯಿಸಿದವರು ನೀನಾಸಂ ಸಂಸ್ಥೆ ಮತ್ತು ಅದರ ಪ್ರಾಂಶುಪಾಲರಾದ ವೆಂಕಟರಮಣ ಐತಾಳರು ಮತ್ತು ಈಗ ರಂಗಾಯಣ ಶಿವಮೊಗ್ಗದ ನಿರ್ದೇಶಕರಾದ ಡಾ. ಎಂ ಗಣೇಶ ರವರು" ಎಂದು ವಿವರಿಸಿದರು.
ಬಾಲ್ಯದಲ್ಲಿ ಓದಿದ ಕಥೆಗಳಲ್ಲದೇ ನೀನಾಸಂ ಸಂಸ್ಥೆಯ ಲೈಬ್ರರಿಯಲ್ಲಿ ಓದಿದ ಗ್ರಂಥಗಳ ಸಂಪುಟಗಳಿಂದ ಕಥೆಗಳ ಅರಿವು ವಿಸ್ತಾರವಾಯಿತು. ಈ ನಿಟ್ಟಿನಲ್ಲಿ ನೀನಾಸಂ ಸಂಸ್ಥೆಯ ಲೈಬ್ರರಿಯವರು ನೀಡಿದ ಸಹಕಾರ ಮತ್ತು ಸ್ವಾತಂತ್ರ ಸ್ಮರಣೀಯ. ಜಾನಪದ ಕಲಾವಿದ ಹುಣಸೇ ಕೊಪ್ಪ ಪ್ರಸನ್ನ ತಮ್ಮನ್ನು ನೀನಾಸಂಗೆ ಪರಿಚಯಿಸಿದ್ದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ರಾಜಾರಾಂ ಮುಂಡಿಗೇಸರ ಅವರು. ಕಥೆಗಳ ಕೇಳಿದ ವಿದ್ಯಾರ್ಥಿಗಳ ಪ್ರತಿಕ್ರಿಯೆ, ಅಭಿಮಾನ, ಪ್ರೀತಿ ನೋಡಿ ಈ ರಾಮಾಯಣ ಮಹಾಭಾರತದ ಕಥೆಗಳಿಗೆ ಎಷ್ಟು ಶಕ್ತಿ ಇದೆ ಎಂದು ಅರಿವಾಯಿತು ಎಂದರು.

ಭಾರತೀಯ ಪರಂಪರೆಯಲ್ಲಿ ಕಥೆ ಹೇಳುವ ಸಂಪ್ರದಾಯ ಮೊದಲಿಂದಲೂ ಬೆಳೆದು ಬಂದಿದೆ. ಕಥೆ ಹೇಳುವುದೂ ಕೇಳುವುದೂ ಸೊಗಸಾದ ಪ್ರಕ್ರಿಯೆ. ನಮ್ಮ ಪುರಾಣ ಇತಿಹಾಸಗಳನ್ನು ನೋಡಿದರೆ ಬ್ರಹ್ಮ ನಾರದನಿಗೆ, ಪರಾಶರ ಮಹರ್ಷಿ ತಮ್ಮ ಶಿಷ್ಯರಿಗೆ, ನಾರದರು ಮುನಿ ವೃಂದಕ್ಕೆ, ಪುಲಸ್ತ್ಯನು ಭೀಷ್ಮನಿಗೆ ಕಥೆಗಳನ್ನು ಹೇಳಿದ ಪ್ರಸಂಗ ಸ್ವಾರಸ್ಯಕರವಾಗಿದೆ. ಹಾಗೆಯೇ ವ್ಯಾಸರು, ಸೂತಪುರಾಣಿಕರು ಇವರ ಆಖ್ಯಾನವೂ ಪ್ರಸಿದ್ಧವಾದದ್ದೇ.
ಕಥೆ ಎಂದರೆ ಪೂರ್ವೇತಿಹಾಸವನ್ನು ತಿಳಿಸುವ ವೃತ್ತಾಂತ. ಕಥೆಯನ್ನು ಒಂದೆಡೆ ಕುಳಿತು ಹೇಳುವುದೇ ಸಂಪ್ರದಾಯ. ಆ ಸ್ಥಾನಕ್ಕೆ "ವ್ಯಾಸಪೀಠ" ಅಂತಲೇ ಪ್ರಸಿದ್ಧಿ ಇದೆ. ಒಂದು ಸಂಸ್ಕೃತಿ ಬೆಳೆದು ಬರಬೇಕಾದರೆ ಪೂರ್ವ ಸ್ಮರಣೆ ಅವಶ್ಯಕ. ಇದು ರಾಮಾಯಣ ಮಹಾಭಾರತದಲ್ಲಿ ನಮಗೆ ವಿಪುಲವಾಗಿ ಸಿಗುತ್ತದೆ. ರಾಮ ಲಕ್ಷ್ಮಣರನ್ನು ತನ್ನ ಯಾಗ ಸಂರಕ್ಷಣೆಗೆಂದು ಕರೆದುಕೊಂಡು ಹೋದ ವಿಶ್ವಾಮಿತ್ರರು ದಾರಿಯಲ್ಲಿ ಆಯಾಸ ಗೊತ್ತಾಗದ ಹಾಗೇ ಅಲ್ಲಲ್ಲಿನ ಸ್ಥಳಗಳಿಗೆ ಸಂಬಂಧಪಟ್ಟ ಹಿಂದಿನ ಕಥೆಗಳನ್ನು ಹೇಳುತ್ತಾ ಹೋಗುತ್ತಾರೆ. ಆ ಬಾಲಕರಿಗೆ ಕಥೆ ಕೇಳುವ ಆಸಕ್ತಿ ಬೆಳದಿದ್ದೆ ವಿಶ್ವಾಮಿತ್ರರಿಂದ. ರಾಮನಿಗಂತೂ ದಾರಿಯಲ್ಲಿ ಸಿಕ್ಕ ಎಲ್ಲಾ ಸ್ಥಳಗಳಿಗೆ ಸಂಬಂಧಪಟ್ಟ ಕಥೆ ಕೇಳುವುದೆಂದರೆ ತುಂಬಾ ಇಷ್ಟ. ವಿಶ್ವಾಮಿತ್ರರು ರಾಮನಿಗೆ ಹೇಳಿದ ಕಥೆಗಳ ಸರಣಿಯಲ್ಲಿ ಭಗೀರಥ ಗಂಗಾದೇವಿಯನ್ನು ಭೂಮಿಗೆ ತಂದ "ಗಂಗಾವತರಣ"ವೂ ಒಂದು. ಆ ಕಥೆಯ ಗುಂಗಿನಲ್ಲಿದ್ದ ರಾಮನಿಗೆ ರಾತ್ರಿ ಕಳೆದುದೇ ಗೊತ್ತಾಗಲಿಲ್ವಂತೆ. ಶತಾನಂದ ಮುನಿ ರಾಮನಿಗೆ ವಿಶ್ವಾಮಿತ್ರರ ಪೂರ್ವಕಥೆಯನ್ನು ತಿಳಿಸುತ್ತಾನೆ. ಕಥೆ ಕೇಳಿ ರಾಮ ತನ್ನ ಗುರುವಿನ ಬಗ್ಗೆ ಬೆರಗಾದ. ಇನ್ನು ಮಹಾಭಾರತವಂತೂ ಇನ್ನೂ ವಿಭಿನ್ನ ಉಪಕಥೆಗಳಿಂದ ಕೂಡಿದ ಒಂದು ಕಥಾಸಾಗರವೇ ಆಗಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications