Love: ವಂಚಕ ಪ್ರೇಮಿಗಳಿದ್ದಾರೆ..ಪ್ರೀತಿಯಲ್ಲಿ ಬೀಳುವ ಮುನ್ನ ಹುಷಾರ್!
ಪ್ರೀತಿ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ, ಅತ್ಯಾಚಾರ, ಕೊಲೆ, ಆತ್ಮಹತ್ಯೆ ಮುಂತಾದ ಪ್ರಕರಣಗಳನ್ನು ಗಮನಿಸಿದರೆ ನೈಜ ಪ್ರೀತಿ ಯಾವುದು ಎಂಬ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ಕೆಲವರು ಪ್ರೀತಿ, ಪ್ರೇಮ ಎನ್ನುತ್ತಾ ಸುತ್ತಾಡಿ ಕೊನೆಯಲ್ಲಿ ಮದುವೆ ವಿಚಾರಗಳು ಬಂದಾಗ ಕೊಲೆಯಲ್ಲಿ ಅಂತ್ಯಗೊಳ್ಳುತ್ತಿರುವುದು ನಿಜಕ್ಕೂ ದುರಂತವೇ... ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಪರಿಚಯ ಪ್ರೀತಿ, ಪ್ರೇಮಗಳಿಗೆ ತಿರುಗಿ ಕೆಲವರು ಮದುವೆಯಾಗಿ ಬದುಕು ಕಟ್ಟಿಕೊಂಡರೆ ಮತ್ತೆ ಕೆಲವರದು ದುರಂತದಲ್ಲಿ ಕೊನೆಯಾಗುತ್ತದೆ.
ಇಲ್ಲಿ ಪ್ರೀತಿ ಎಂಬುದು ಆಕರ್ಷಣೆ ಅದರಾಚೆಗೆ ಮದುವೆ ಎಂಬುದು ಜವಾಬ್ದಾರಿ. ಇದರೆಡರ ನಡುವಿನ ಬದುಕು ಅಷ್ಟು ಸುಲಭವಲ್ಲ. ಮದುವೆ ಎಂಬ ವೇದಿಕೆಗೆ ಪ್ರೀತಿಯೇ ಮೆಟ್ಟಿಲು. ಈ ಮೆಟ್ಟಿಲನ್ನೇರುವುದು ಕೂಡ ಒಂದು ರೀತಿಯ ಸವಾಲ್. ಭಾರತದಂತಹ ಸಂಪ್ರದಾಯದ ರಾಷ್ಟ್ರದಲ್ಲಿ ಪ್ರೀತಿಸುವುದೇ ಮದುವೆಯಾಗಲು ಎಂಬುದು ಲಿಖಿತ ನಿಯಮ. ಆದರೆ ಬಹಳಷ್ಟು ಜನರ ಬದುಕಿನಲ್ಲಿ ಪ್ರೀತಿ ಮದುವೆ ತನಕ ಹೋಗುವುದೇ ಇಲ್ಲ. ಅವರ ನಡುವಿನ ಹತ್ತಾರು ಸಮಸ್ಯೆಗಳಿಗೆ ಪ್ರೀತಿ ಬಲಿಯಾಗಿ ಬಿಡುತ್ತದೆ. ಅಥವಾ ಪ್ರೀತಿ ಹೆಸರಿನಲ್ಲಿ ಬಲಿ ಪಡೆಯುತ್ತಾರೆ.

ಇವತ್ತಿನ ಆಧುನಿಕ ಬದುಕಿನಲ್ಲಿ ಮತ್ತು ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವಗಳು ಪ್ರೀತಿ ಮತ್ತು ಪ್ರೇಮದ ಮಹತ್ವವನ್ನು ಗಾಳಿಗೆ ತೂರಿ ಅದೊಂದು ಎಂಜಾಯ್ ಎಂಬ ಮಟ್ಟಿಗೆ ತಂದು ನಿಲ್ಲಿಸಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಹರೆಯದಲ್ಲಿ ಪ್ರೀತಿ ಪ್ರೇಮದ ಬಗ್ಗೆ ತಲೆ ಕೆಡಿಸಿಕೊಳ್ಳುವ ಯುವ ಮನಸ್ಸು ದಾರಿ ತಪ್ಪುತ್ತಿವೆ. ಒಂದೊಳ್ಳೆಯ ಗೆಳೆತನವನ್ನೇ ಪ್ರೀತಿ ಎಂದು ತಪ್ಪಾಗಿ ಅರ್ಥೈಸಿಕೊಳ್ಳುವುದು, ದೈಹಿಕ ಆಕರ್ಷಣೆಯನ್ನೇ ಪ್ರೀತಿ ಎಂದು ನಂಬುವುದು. ಜತೆಗೆ ಸದ್ಯಕ್ಕೆ ನನಗೊಬ್ಬ ಗೆಳೆಯ, ಗೆಳತಿ ಇರಲಿ ಆಮೇಲೆ ನೋಡಿದರಾಯಿತೆಂಬ ಮನಸ್ಥಿತಿಗಳು ಬಹಳಷ್ಟು ಸಲ ತೊಂದರೆಗಳಿಗೆ ಎಡೆ ಮಾಡಿಕೊಡುತ್ತವೆ.
ವಂಚಕ ಪ್ರೇಮಿಗಳಿದ್ದಾರೆ ಹುಷಾರ್
ಕೆಲವು ವಂಚಕ ಮನಸ್ಸುಗಳು ಬೇರೆ, ಬೇರೆ ರೀತಿಯಲ್ಲಿ ಆಕರ್ಷಿಸಿ ಪ್ರೀತಿಸುವ ನಾಟಕವಾಡಿ ತಾನು ಬಯಸಿದ್ದನ್ನು ಪಡೆದು ದೂರಸರಿಯುವವರು ಇಲ್ಲದಿಲ್ಲ. ಇಂಥವರಿಂದ ಪ್ರಾಮಾಣಿಕ ಪ್ರೀತಿಗೆ ಅವಮಾನವಾಗುತ್ತದೆ. ಪ್ರೀತಿ ಮೇಲೆ ಅನುಮಾನ ಮೂಡುತ್ತದೆ. ಇತ್ತೀಚೆಗಿನ ದಿನ ಗಳಲ್ಲಿ ಹರೆಯದ ಹುಡುಗ ಹುಡ್ಗೀರು ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಪ್ರೀತಿ ಪ್ರೇಮ ಎನ್ನುತ್ತಾ ಓಡಾಡುತ್ತಿರುವುದು ಮಾಮೂಲಿಯಾಗಿದೆ.

ಜವಬ್ದಾರಿಯುತ ಬದುಕು ಕಟ್ಟಿಕೊಳ್ಳುವ ಮುನ್ನ ಪ್ರೀತಿಯನ್ನು ಹೋರಾಡಿ ಗೆದ್ದರೂ ಅದರ ಗೆಲುವನ್ನು ಜೀವನುದ್ದಕ್ಕೂ ಅನುಭವಿಸಲು ಸಾಧ್ಯವಾಗದ ಬದುಕಿನ ಮಧ್ಯದಲ್ಲಿಯೇ ಕೈಚೆಲ್ಲಿ ಕುಳಿತವರಿಗೇನು ಕೊರತೆಯಿಲ್ಲ. ಪ್ರೀತಿ ಎಂಬುದೊಂದು ಕನಸು ಅದನ್ನು ನಾವು ಮದುವೆಯೊಂದಿಗೆ ನನಸು ಮಾಡಿಕೊಳ್ಳಬೇಕು. ಹಾಗೆ ಆಗಬೇಕಾದರೆ ನಮ್ಮದು ಸೌಂದರ್ಯ, ಹಣ, ಅಂತಸ್ತು ಎಲ್ಲವನ್ನೂ ಮೀರಿದ ಪ್ರಾಮಾಣಿಕ ಪ್ರೀತಿಯಾಗಿರಬೇಕು. ಆಗ ಮಾತ್ರ ಒಂದೊಳ್ಳೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
ಮದುವೆ ಅಂದ್ರೆ ಅದೊಂದು ಜವಾಬ್ದಾರಿ
ಇವತ್ತು ಬಹಳಷ್ಟು ಜನರ ಬದುಕಿನಲ್ಲಿ ಅಂದುಕೊಂಡಂತೆ ಆಗುವುದೇ ಇಲ್ಲ. ಪ್ರೇಮಿಗಳಾಗಿದ್ದಾಗಿನ ಪ್ರೀತಿ, ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆಗೆ ಮದುವೆಯಾಗಿ ಮಕ್ಕಳಾಗಿ ಬದುಕು ಕಟ್ಟಿಕೊಳ್ಳುವಾಗ ತುಕ್ಕು ಹಿಡಿಯಲಾರಂಭಿಸುತ್ತದೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಪ್ರೇಮಿಗಳಾಗಿರುವಾಗ ಜವಬ್ದಾರಿ ಕಡಿಮೆಯಿರುತ್ತದೆ. ಆಕರ್ಷಣೆ ಹೆಚ್ಚಿರುತ್ತದೆ. ಜೊತೆಯಾಗಬೇಕೆಂಬುದಷ್ಟೆ ಮುಖ್ಯವಾಗುತ್ತದೆ. ಅಪರೂಪಕ್ಕೆ ಭೇಟಿಯಾಗಿ ಹರಟೆ ಹೊಡೆಯುವುದು, ಐಸ್ ಕ್ರೀಮ್ ಮೆಲ್ಲುವುದು, ಊಟ ಮಾಡುವುದು, ಸಿನಿಮಾ ನೋಡುವುದು ಎಲ್ಲವೂ ಖುಷಿ ಕೊಡುತ್ತಿರುತ್ತದೆ.
ಏಕೆಂದರೆ ಪ್ರೇಮ ಅಂದ್ರೆ ಅದೊಂದು ಸೂಕ್ಷ್ಮ ಸಂವೇದಿ. ಅದಕ್ಕೆ ಆಳ, ಗಾತ್ರ ಯಾವುದೂ ಇಲ್ಲ. ಒಮ್ಮೆ ಹೃದಯಾಂತರಾಳದಲ್ಲಿ ಅಂಕುರಿಸಿತೆಂದರೆ ಸಾಕು ಅದು ಜಾತಿಯ ಹಂಗು, ಬಡತನ, ವಯಸ್ಸು, ಸ್ಥಾನಮಾನ ಎಲ್ಲವನ್ನೂ ಧಿಕ್ಕರಿಸಿ ಜತೆಯಾಗಿ ಬದುಕುವುದನ್ನಷ್ಟೆ ಬಯಸುತ್ತದೆ. ಪ್ರೇಮ ಗಟ್ಟಿಯಾಗಬೇಕಾದರೆ ಪ್ರೇಮಿಗಳಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಮುಖ್ಯವಾಗುತ್ತದೆ ಅದೆರಡು ಇಲ್ಲದೆ ಹೋದರೆ ಪ್ರೀತಿಸಲು ಸಾಧ್ಯವಿಲ್ಲ. ಒಂದು ವೇಳೆ ಪ್ರೀತಿಸಿದರೂ ಹೆಚ್ಚು ದಿನ ಬಾಳುವುದಿಲ್ಲ.
ಪ್ರೀತಿಸಿ ಬಳಿಕ ಮದುವೆಯಾಗಿ ಸದಾ ಜತೆಯಲ್ಲಿದ್ದು ಜವಬ್ದಾರಿಗಳನ್ನು ನಿಭಾಯಿಸುತ್ತಾ ಮುನ್ನಡೆಯುವಾಗ ಎಲ್ಲವೂ ಕಷ್ಟವಾಗಿ ಕಾಣಲಾರಂಭಿಸುತ್ತದೆ. ಆದರೆ ಅವೆಲ್ಲವನ್ನು ಮೀರಿ ಖುಷಿ ಖುಷಿಯಾಗಿ ಬದುಕಿ ತೋರಿಸುವುದೇ ನಿಜವಾದ ಜೀವನ ಮತ್ತು ನಾವು ಪ್ರೀತಿಗೆ ಕೊಡುವ ಗೌರವವಾಗುತ್ತದೆ. ಪ್ರಾಮಾಣಿಕ ಪ್ರೀತಿ ಆಸ್ತಿ, ಅಂತಸ್ತು ಬಯಸುವುದಿಲ್ಲ. ಹೀಗಿರುವಾಗ ಪ್ರೀತಿಗೆ ಬೀಳುವ ಮುನ್ನ ಆಲೋಚಿಸಿ, ಪ್ರಾಮಾಣಿಕ ಪ್ರೀತಿನಾ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಪ್ರೇಮದ ಮುಖವಾಡ ಧರಿಸಿದ ವಂಚಕರು ಇದ್ದಾರೆ ಎಂಬುದನ್ನು ಮರೆಯದಿರಿ.












Click it and Unblock the Notifications