ಹೊರೋ ಎಂದು ಅಳಲು ಪ್ರಾರಂಭಿಸಿದ ಸುಬ್ಬಿ ಗಂಡ ಸುಬ್ಬು
ಸುಬ್ಬು ಮತ್ತು ಸುಬ್ಬಿಯ ಮದುವೆ ಧಾಂಧೂಂ ಅಂತ ನಡೆಯದೆ ಅತ್ಯಂತ ಸರಳವಾಗಿ ಹುಬ್ಬಳ್ಳಿಯ ಸತ್ಯಬೋಧ ಸ್ವಾಮಿಗಳ ಮಠದಲ್ಲಿ ಜರುಗಿತು. ಮದುವೆಗೆ ಬಂದು ಹರಸಿದವರ ಊಟವಾದ ಬಳಿಕ ಸುಬ್ಬಿಯನ್ನು ಶಾಸ್ತ್ರೋಕ್ತವಾಗಿ ಮನೆ ಸೇರಿಸಿಕೊಳ್ಳುವ ಸಮಯ ಬಂದಿತು.
ಸಹಜವಾಗಿ ತವರುಮನೆಯವರ ಕಣ್ಣುಗಳ ಒದ್ದೆಯಾಗಿದ್ದವು. ಕಣ್ಣೀರಿನ ಕಟ್ಟೆಯೇನು ಒಡೆದಿರಲಿಲ್ಲ. ಆದರೆ, ಸುಬ್ಬಿಯನ್ನು ವಿಪರೀತ ಹಚ್ಚಿಕೊಂಡಿದ್ದ ಆಕೆಯ ಅಪ್ಪನ ಗಂಟಲುಬ್ಬಿ ಬಂದಿತ್ತು, ವಿಪರೀತ ದುಃಖಿಸುತ್ತಿದ್ದರು. ಉಳಿದೆಲ್ಲವರ ಅಳು ಒಟ್ಟಿಗೆ ಸೇರಿಸಿದರೂ ಅವರ ಅಳುವಿನ ಪ್ರಮಾಣವನ್ನು ಮೀರಿಸುವಂತಿರಲಿಲ್ಲ.
ಸುಬ್ಬುವಿಗೆ ಆಶ್ಚರ್ಯವಾಯಿತು. "ಯಾಕೆ ಮಾವ ಈ ಪರಿ ಅಳುತ್ತಿದ್ದೀರಿ?" ಎಂದು ಅವರನ್ನು ಪಕ್ಕಕ್ಕೆ ಕರೆದು ಕೇಳಿದ.
"24 ವರ್ಷಗಳಿಂದ ಸಾಕಿದ ಸುಬ್ಬಿಯನ್ನು ಗಂಡನ ಮನೆಗೆ ಕಳಿಸಿಕೊಡುವಾಗ ಅಳು ಬಂತು" ಅಂತ ಉಮ್ಮಳಿಸಿ ಬಂದ ದುಃಖವನ್ನು ತಡೆದುಕೊಂಡು ಹೇಳಿದರು. ಆಗ ಸುಬ್ಬನು ಇದ್ದಕ್ಕಿದ್ದಂತೆ ಜೋರಾಗಿ ಅಳಲು ಪ್ರಾರಂಭಿಸಿದ. ಮಾವ ಗಕ್ಕನೆ ಅಳು ನಿಲ್ಲಿಸಿ "ನೀವ್ಯಾಕೆ ಅಳುತ್ತಿದ್ದೀರಿ ಅಳಿಯಂದಿರೆ?" ಎಂದು ಕೇಳಿದರು.
"ಅಯ್ಯೋ, 24 ವರ್ಷ ಸಾಕಿದ ನೀವು ಅಷ್ಟೊಂದು ಅತ್ತಿರಿ. ಇನ್ನು ಉಳಿದೆಲ್ಲ ಜೀವಮಾನ ನಾನು ಆಕೆಯನ್ನು ಸಾಕಬೇಕಲ್ಲ?" ಅಂತ ಹೇಳಿ ಗಂಟಲು ಹರಿದುಕೊಳ್ಳುವಂತೆ ಇನ್ನೂ ಜೋರಾಗಿ ಅಳಲು ಪ್ರಾರಂಭಿಸಿದ. [ಸುಬ್ಬು ಮದುವೆಯಲ್ಲಿ ನಡೆದ ಹಾಸ್ಯ ಪ್ರಸಂಗ]
***
ಗಣೇಶ ಚತುರ್ಥಿ ಹತ್ತಿರ ಬರುತ್ತಿತ್ತು. ಎಲ್ಲೆಡೆ ಮಣ್ಣಿನ ಗಣಪನ ತಯಾರಿಸುತ್ತಿರುವುದನ್ನು ಗಮನಿಸಿದ ಸುಬ್ಬುವಿನ ಮಗ ಮರಿಸುಬ್ಬು ತಾನೂ ಗಣಪನ ಮಾಡಬೇಕೆಂದು ವಿಚಾರಿಸಿದ. ಜೇಡಿ ಮಣ್ಣನ್ನು ಎಲ್ಲಿಂದಲೋ ತಂದ. ಕಡೆಗೆ, ತನಗೆ ಹೇಗೆ ಬರುತ್ತದೋ ಹಾಗೆ ಗಣಪನನ್ನೂ ತಯಾರಿಸಿದ.
ನೋಡಲು ಕೆಟ್ಟದಾಗೇನೂ ಇರಲಿಲ್ಲ. ದೊಡ್ಡ ಕಿವಿ, ಸೊಂಡಿಲು, ಪುಟಾಣಿ ಕಣ್ಣು, ಏಕದಂತ, ನಾಲ್ಕು ಕೈಗಳು, ಒಂದರಲ್ಲಿ ಮೋದಕ, ಇನ್ನೊಂದರಲ್ಲಿ ಕಡುಬು, ಮತ್ತೊಂದರಲ್ಲಿ ಆಯುಧ ಹಿಡಿದಿದ್ದ ಗಣಪ, ಮಗದೊಂದರಲ್ಲಿ ತಥಾಸ್ತು ಅನ್ನುತ್ತಿದ್ದ. ಎಲ್ಲ ಸರಿಯಿದ್ದರೂ ಹೊಟ್ಟೆ ಮಾತ್ರ ಡೊಳ್ಳಗಾಗಿರಲಿಲ್ಲ. ಸಣಕಲನ ಹೊಟ್ಟೆಯಂತಿತ್ತು. ಸುಬ್ಬು ವಿಚಾರಿಸಿದ,
"ಯಾಕೋ ಮರಿ, ಗಣಪನ ಹೊಟ್ಟೆ ಅಷ್ಟು ತೆಳ್ಳಗಿದೆ?"
"ಇನ್ನೇನಪ್ಪ, ಅಕ್ಕಿ, ಬೇಳೆ, ಎಣ್ಣೆ ರೇಟೆಲ್ಲ ದುಬಾರಿಯಾಗಿ, ನೈವೇದ್ಯ ಇಡುವುದೂ ಕಡಿಮೆಯಾಗಿದೆ. ಹಾಗಾಗಿ ಆತನಿಗೆ ಅಷ್ಟೇ ಹೊಟ್ಟೆ ಸಾಕು" ಅನ್ನಬೇಕೆ!












Click it and Unblock the Notifications