ಕೆಪಿಎಸ್ಸಿ ನೇಮಕಾತಿ; ಮಹತ್ವದ ಬದಲಾವಣೆ
ಬೆಂಗಳೂರು, ಜನವರಿ 25 : ಕರ್ನಾಟಕ ಸರ್ಕಾರ ಕೆಪಿಎಸ್ಸಿ ಮೂಲಕ ಭರ್ತಿ ಮಾಡುವ ವಿವಿಧ ಕೆಎಎಸ್ ಹುದ್ದೆಗಳಿಗೆ ಸಂದರ್ಶನ ನಡೆಸುವುದಿಲ್ಲ. ಈ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದ್ದು, ಆಕ್ಷೇಪಣೆಯನ್ನು ಆಹ್ವಾನಿಸಲಾಗಿದೆ.
ಕರ್ನಾಟಕ ಸಿವಿಲ್ ಸೇವಾ (ಸ್ಮರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ ಮತ್ತು ಆಯ್ಕೆ) ನಿಯಮದಡಿ ನಡೆಸುವ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಹುದ್ದೆಗಳ ನೇಮಕ ಸಂದರ್ಭದಲ್ಲಿ ಸಂದರ್ಶನದಿಂದ ವಿನಾಯಿತಿ ನೀಡಲಾಗುತ್ತದೆ.
ಕರ್ನಾಟಕ ಸರ್ಕಾರ ಈ ಕುರಿತು ಜನವರಿ 22ರಂದು ರಾಜ್ಯಪತ್ರ ಹೊರಡಿಸಿದೆ. 15 ದಿನಗಳಲ್ಲಿ ಜನರು ಆಕ್ಷೇಪಣೆಗಳನ್ನು ಸಲ್ಲಿಸಬಹುದು ಎಂದು ಹೇಳಿದೆ. ಈ ಆದೇಶದ ಅನ್ವಯ ವಿವಿಧ ಇಲಾಖೆಗಳಿಗೆ ಸ್ಮರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಆದರೆ, ಸಂದರ್ಶನ ನಡೆಯುವುದಿಲ್ಲ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಹುದ್ದೆಗಳಿಗೆ ಸಂದರ್ಶನ ನಡೆಸದಿರುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಇದರಿಂದಾಗಿ ವಿವಿಧ ಇಲಾಖೆಯಲ್ಲಿನ ನೇಮಕಾತಿಯಲ್ಲಿ ಮಹತ್ವದ ಬದಲಾವಣೆಯಾಗಲಿದೆ.

ಆಕ್ಷೇಪಣೆ ಸಲ್ಲಿಸುವುದು ಹೇಗೆ?
ಕೆಪಿಎಸ್ಸಿ ಮೂಲಕ ಭರ್ತಿ ಮಾಡುವ ವಿವಿಧ ಕೆಎಎಸ್ ಹುದ್ದೆಗಳಿಗೆ ಸಂದರ್ಶನ ನಡೆಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿದೆ. ಜನರು ಈ ಕುರಿತು ಅಧಿಸೂಚನೆಗಳನ್ನು ಹೊರಡಿಸಬಹುದಾಗಿದೆ. ಆಕ್ಷೇಪಣೆಗಳನ್ನು ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, ವಿಧಾನಸೌಧ, ಬೆಂಗಳೂರು 560001 ಇವರಿಗೆ ಸಲ್ಲಿಕೆ ಮಾಡಬೇಕು.

ವಿಳಂಬ, ಭ್ರಷ್ಟಾಚಾರ
ವಿವಿಧ ಹುದ್ದೆಗಳ ನೇಮಕಾತಿಗೆ ಸ್ಮರ್ಧಾತ್ಮಕ ಪರೀಕ್ಷೆ ನಡೆಸಿದ ಬಳಿಕ ಸಂದರ್ಶನ ನಡೆಸಲು ವಿಳಂಬ ಆಗುತ್ತಿತ್ತು. ಭ್ರಷ್ಟಾಚಾರ ನಡೆಯುತ್ತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಆದ್ದರಿಂದ, ಸರ್ಕಾರ ಸಂದರ್ಶನ ನಡೆಸುವುದಿಲ್ಲ ಎಂದು ತೀರ್ಮಾನ ಕೈಗೊಂಡಿತ್ತು. ಈಗ ಈ ಕುರಿತು ಕರಡು ಆದೇಶ ಹೊರಡಿಸಿದೆ.

ಲಿಖಿತ ಪರೀಕ್ಷೆಗೆ ಅಂಕ
ವಿವಿಧ ಇಲಾಖೆಗಳ ಗ್ರೂಪ್ 'ಎ' ಮತ್ತು ಗ್ರೂಪ್ 'ಬಿ' ಹುದ್ದೆಗಳ ನೇಮಕ ಸಂದರ್ಭದಲ್ಲಿ ಸಂದರ್ಶನದಿಂದ ವಿನಾಯಿತಿ ನೀಡಲಾಗುತ್ತದೆ. ಆದ್ದರಿಂದ, ಸಂದರ್ಶನಕ್ಕೆ ಮೀಸಲಾದ ಅಂಕಗಳನ್ನು ಲಿಖಿತ ಪರೀಕ್ಷೆಗೆ ಸೇರಿಸಲಾಗುತ್ತದೆ.

ಯಾವ-ಯಾವ ಹುದ್ದೆಗಳು
ಕರ್ನಾಟಕ ಸರ್ಕಾರ ವೈದ್ಯರು, ಇಂಜಿನಿಯರ್ ಸೇರಿದಂತೆ ಸೇವಾ ವರ್ಗದ ಹುದ್ದೆಗಳ ಭರ್ತಿಯ ಸಂದರ್ಭದಲ್ಲಿ ಮೌಖಿಕ ಸಂದರ್ಶನ ಅಗತ್ಯವಿಲ್ಲ ಎಂದು ತೀರ್ಮಾನಿಸಿದೆ. ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನೇಮಕಾತಿ ಪಟ್ಟಿಯನ್ನು ತಯಾರು ಮಾಡಲಾಗುತ್ತದೆ.












Click it and Unblock the Notifications