ಧಾರವಾಡ, ವಿಜಯನಗರ ಜಿಲ್ಲೆಯಲ್ಲಿ ಕೆಲಸ ಖಾಲಿ ಇದೆ
ಧಾರವಾಡ, ಫೆಬ್ರವರಿ 20; ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಕುಂದಗೋಳ, ಹುಬ್ಬಳ್ಳಿ, ನವಲಗುಂದ ಮತ್ತು ಕಲಘಟಗಿಗಳ ತಾಲ್ಲೂಕು ಕಾನೂನು ಸೇವಾ ಸಮಿತಿಗಳಲ್ಲಿ ಕಾರ್ಯನಿರ್ವಹಿಸಲು ಪ್ಯಾನಲ್ ವಕೀಲರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.
3 ವರ್ಷಗಳ ಅವಧಿಗೆ ಪ್ಯಾನಲ್ ವಕೀಲರನ್ನು ನೇಮಕ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಮಾರ್ಚ್ 10ರೊಳಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶವಿದೆ.
ಆಸಕ್ತ ನ್ಯಾಯವಾದಿಗಳು ಸಂಬಂಧಪಟ್ಟ ಕಛೇರಿಗಳಲ್ಲಿ ಅರ್ಜಿಗಳನ್ನು ಪಡೆದುಕೊಂಡು ಭರ್ತಿ ಮಾಡಿ, ಅವಶ್ಯಕ ದಾಖಲಾತಿಗಳೊಂದಿಗೆ ಮಾರ್ಚ್ 10 ಸಂಜೆ 5 ಗಂಟೆಯ ಒಳಗಾಗಿ ಸಲ್ಲಿಸಬೇಕೆಂದು ಪ್ರಕಟಣೆ ತಿಳಿಸಿದೆ.

ಸ್ಕಿಲ್ ಹಬ್ ಸೆಂಟರ್ನಲ್ಲಿ ತರಬೇತಿ; ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ ಅಡಿಯಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೊಪ್ಫಳ ಜಿಲ್ಲಾ ಕೌಶಲ್ಯ ಮಿಷನ್ ವತಿಯಿಂದ ಕೊಪ್ಪಳ ಹಾಗೂ ಯಲಬುರ್ಗಾ ತಾಲೂಕಿನಲ್ಲಿ ಶಾಲೆ ಬಿಟ್ಟ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಉಚಿತ ಕೌಶಲ್ಯ ತರಬೇತಿಗಳನ್ನು ನೀಡಲು ಸ್ಕಿಲ್ ಹಬ್ ಸೆಂಟರ್ ತೆರೆಯಲಾಗುತ್ತಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದು.
ಐಟಿ/ ಐಟಿಇಎಸ್ ಹಾಗೂ ಆಟೋಮೊಬೈಲ್ಸ್ ಸೆಕ್ಟರ್ಗಳಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಸರಕಾರಿ ಪದವಿ ಪೂರ್ವ ಕಾಲೇಜು, ಯಲಬುರ್ಗಾದಲ್ಲಿ ಹಾಗೂ ಬ್ಯೂಟಿ ಮತ್ತು ವೆಲ್ನೆಸ್ ಹಾಗೂ ಐಟಿ/ ಐಟಿಇಎಸ್ ಸೆಕ್ಟರ್ನಲ್ಲಿ ತರಬೇತಿ ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಕೊಪ್ಪಳದಲ್ಲಿ ನೋಂದಣಿ ಮಾಡಿಕೊಳ್ಳಬೇಕು.
ನೋಂದಣಿ ಮಾಡಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗಾಗಿ ಸರಕಾರಿ ಪದವಿ ಪೂರ್ವ ಕಾಲೇಜು, ಯಲಬುರ್ಗಾ ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9964221446. ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಕೊಪ್ಪಳವನ್ನು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 8548016504.
ಸಿಬ್ಬಂದಿ ನೇಮಕಾತಿಗೆ ಅರ್ಜಿ ಆಹ್ವಾನ; ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಲು ಸಿಬ್ಬಂದಿಗಳ ಅವಶ್ಯಕತೆಯಿದ್ದು, ಜಿಲ್ಲಾ ಖನಿಜ ಪ್ರತಿಷ್ಠಾನದ ಅಡಿಯಲ್ಲಿ ಹೊರಗುತ್ತಿಗೆ ಆಧಾರದ ಮೇರೆಗೆ ನೇಮಿಸಿಕೊಳ್ಳಲುವ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಕಾರ್ಯ ನಿರ್ವಾಹಕ ಇಂಜಿನಿಯರ್ (ಸಿವಿಲ್) 1 ಹುದ್ದೆ, ಮುಖ್ಯಲೆಕ್ಕ ವ್ಯವಸ್ಥಾಪಕರು (ಚೀಫ್ ಅಕೌಂಟೆಂಟ್ ಆಫೀಸರ್ 1, ಸಹಾಯಕ ಲೆಕ್ಕ ಅಧಿಕಾರಿ 2, ಇಂಟರ್ನ್ಶಿಫ್ 4, ಡಾಟಾ ಎಂಟ್ರಿ ಆಪರೇಟರ್ 3, ಕಚೇರಿ ಸಹಾಯಕರು 5 ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಆಸಕ್ತ, ಅರ್ಹ ಅಭ್ಯರ್ಥಿಗಳು ಫೆಬ್ರವರಿ 21ರಿಂದ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್ 3 ಆಗಿದೆ. ಅಭ್ಯರ್ಥಿಗಳು vijayanagara.nic.in ವೆಬ್ ಸೈಟ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವಾಗ ವಿದ್ಯಾರ್ಹತೆ, ಸೇವಾ ಅನುಭವ ಮತ್ತು ಹೆಚ್ಚಿನ ವಿದ್ಯಾರ್ಹತೆಯನ್ನು ಹೊಂದಿರುವ ದಾಖಲೆಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕು. ಅಸ್ಪಷ್ಟ ದಾಖಲೆಗಳು ಮತ್ತು ಅಪೂರ್ಣ ಮಾಹಿತಿ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ವಿದ್ಯಾರ್ಹತೆ, ಹುದ್ದೆಯ ಸ್ವರೂಪ, ಆಯ್ಕೆ ಮಾನದಂಡಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08392-295655.
ಜೇನು ಸಾಕಣೆ ತರಬೇತಿ; ಕೃಷಿ ವಿಜ್ಞಾನ ಕೇಂದ್ರ ಹಾಗೂ ರಾಷ್ಟ್ರೀಯ ಜೇನು ಮಂಡಳಿಯು ವಿಶೇಷ ತರಬೇತಿ ಅಡಿಯಲ್ಲಿ ಜಿಲ್ಲೆಯ ರೈತರಿಗೆ ಮತ್ತು ಆಸಕ್ತರಿಗೆ ಏಳು ದಿನಗಳ ವೈಜ್ಞಾನಿಕ ಜೇನು ಸಾಕಾಣಿಕೆ ಕುರಿತು ತರಬೇತಿ ಕಾರ್ಯಕ್ರಮಗಳನ್ನು ಮಾರ್ಚ್ ತಿಂಗಳ ಮೊದಲನೇ ವಾರದಿಂದ 4 ತರಬೇತಿಗಳನ್ನು ಆಯೋಜಿಸಲಾಗಿದೆ.
ರೈತರಿಗೆ ಜೇನು ಸಾಕಾಣಿಕೆಯಲ್ಲಿ ವೈಜ್ಞಾನಿಕ ಪದ್ದತಿಗಳ ಮಾಹಿತಿ ಹಾಗೂ ಪ್ರಾಯೋಗಿಕ ಅನುಭವಗಳನ್ನು ನೀಡಿ ಅವರ ಆದಾಯ ವೃದ್ಧಿಸುವುದು ತರಬೇತಿಯ ಉದ್ದೇಶವಾಗಿದ್ದು, ಪ್ರತಿ ತರಬೇತಿಗೆ 25 ಅಭ್ಯರ್ಥಿಗಳಿಗೆ ಮಾತ್ರ ಅವಕಾಶವಿದೆ. 7 ದಿನಗಳ ತರಬೇತಿ ನಡೆಯಲಿದೆ.
ಭಾಗವಹಿಸಲು ಇಚ್ಛಿಸುವ ಆಸಕ್ತ ರೈತರು ಖುದ್ದಾಗಿ ಧಾರವಾಡದ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರದ ಕಛೇರಿಗೆ ಬಂದು ಫೆಬ್ರವರಿ 28 ರೊಳಗೆ ತಮ್ಮ ಆಧಾರ್ ಕಾರ್ಡ್, 2 ಪಾಸ್ಪೋರ್ಟ್ ಅಳತೆ ಪೋಟೋಗಳು, ಹೊಲದ ಉತಾರದೊಂದಿಗೆ ಹೆಸರನ್ನು ನೋಂದಾಯಿಸಲು ತಿಳಿಸಲಾಗಿದೆ.
ಆದ್ಯತೆ ಮೇರೆಗೆ ಮೊದಲು ಬಂದ 25 ಅಭ್ಯರ್ಥಿಗಳನ್ನು ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಧಾರವಾಡದ ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications