'ಟಿಎಂಸಿ ಪಕ್ಷದವರನ್ನು ಬಿಜೆಪಿಗೆ ಸೇರ್ಪಡೆ ಮಾಡಿ ಪಕ್ಷ ತಪ್ಪು ಮಾಡಿದೆ' ಎಂದ ಶಾಸಕ
ಕೋಲ್ಕತ್ತಾ, ಸೆಪ್ಟೆಂಬರ್ 07: ನಾಲ್ಕು ತಿಂಗಳಿನಲ್ಲೇ ನಾಲ್ವರು ಬಿಜೆಪಿ ಶಾಸಕರು ತೃಣಮೂಲ ಕಾಂಗ್ರೆಸ್ಗೆ ಮತ್ತೆ ಸೇರ್ಪಡೆಯಾಗಿದ್ದಾರೆ. ಈ ವಿಚಾರದಲ್ಲಿ ಬಿಜೆಪಿಯ ಉನ್ನತ ನಾಯಕರುಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿರುವ ವಿರೋಧ ಪಕ್ಷದ ಕೂಚ್ ಬೆಹಾರ್ ದಕ್ಷಿಣ ಶಾಸಕ ನಿಖಿಲ್ ರಂಜನ್ ದೇ, "ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೂ ಮುನ್ನ ತೃಣಮೂಲ ಕಾಂಗ್ರೆಸ್ನ ನಾಯಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಬಿಜೆಪಿಯ ಉನ್ನತ ನಾಯಕತ್ವವು ತಪ್ಪು ಮಾಡಿದೆ," ಎಂದು ಹೇಳಿದ್ದಾರೆ.
''ತೃಣಮೂಲ ಕಾಂಗ್ರೆಸ್ನ ಆ ನಾಯಕರುಗಳನ್ನು ಬಿಜೆಪಿ ಪಕ್ಷಕ್ಕೆ ಸೇರಿಸುವ ಮುನ್ನ ಅವರ ಬಗ್ಗೆ ಸರಿಯಾದ ಪರಿಶೀಲನೆಯನ್ನು ನಮ್ಮ ನಾಯಕತ್ವ ನಡೆಸಬೇಕಿತ್ತು. ಪಕ್ಷವು ಸರಿಯಾದ ಯೋಚಿಸಿ ಆ ತೃಣಮೂಲ ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಸೇರ್ಪಡೆ ಮಾಡಬೇಕಾಗಿತ್ತು," ಎಂದು ಅಭಿಪ್ರಾಯಿಸಿದ್ದಾರೆ.
"ಈ ತೃಣಮೂಲ ಕಾಂಗ್ರೆಸ್ನ ನಾಯಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಮೂಲಕ ಪಕ್ಷದ ಉನ್ನತ ನಾಯಕರು ತಪ್ಪನ್ನು ಮಾಡಿದ್ದಾರೆ. ಬಿಜೆಪಿಯ ಸಿದ್ದಾಂತದೊಂದಿಗೆ ಆ ತೃಣಮೂಲ ಕಾಂಗ್ರೆಸ್ನಿಂದ ಬಿಜೆಪಿಗೆ ಬಂದ ನಾಯಕರು ಎಂದಿಗೂ ಕೂಡಾ ಹೊಂದಿಕೊಂಡಿಲ್ಲ," ಎಂದು ತಿಳಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿಗೆ ಸೇರಿದ್ದ ಟಿಎಂಸಿ ನಾಯಕರು
"ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರಲಿದೆ, ಇದರಿಂದಾಗಿ ನಾವು ಅಧಿಕಾರ ಹೊಂದಿರುವ ಪಕ್ಷದಲ್ಲಿ ಇರುತ್ತೇವೆ ಎಂಬ ಯೋಜನೆಯನ್ನು ಹಾಕಿಕೊಂಡು ಬಿಜೆಪಿಗೆ ಬಂದಿದ್ದಾರೆ. ಹಾಗೆಯೇ ನಮ್ಮ ಪಕ್ಷವು ಕೂಡಾ ಆ ತೃಣಮೂಲ ಕಾಂಗ್ರೆಸ್ ನಾಯಕರಿಗೆ ಅಧಿಕ ಪ್ರಾತಿನಿಧ್ಯತೆಯನ್ನು ನೀಡಿತು. ಈಗ ಆ ನಾಯಕರು ಬಿಜೆಪಿಯನ್ನು ತೊರೆದು ಮತ್ತೆ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ," ಎಂದಿದ್ದಾರೆ.

ಬಿಜೆಪಿಯಿಂದ ಹಲವು ನಾಯಕರು ಟಿಎಂಸಿಗೆ ಸೇರ್ಪಡೆ
ಮೇ ತಿಂಗಳಿನಲ್ಲಿ ಬಿಜೆಪಿಯ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತೆ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದಾರೆ. ಬಿಜೆಪಿಯ ಟಿಕೆಟ್ನಿಂದ ಶಾಸಕರಾಗಿ ಆಯ್ಕೆಯಾದ ಕೆಲ ದಿನಗಳ ನಂತರವೇ ಮುಕುಲ್ ರಾಯ್ ಮತ್ತೆ ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು. ಹಾಗೆಯೇ ಈ ಬೆನ್ನಲ್ಲೇ ಮೂವರು ಬಿಜೆಪಿ ಶಾಸಕರು ಕೂಡಾ ತೃಣಮೂಲ ಕಾಂಗ್ರೆಸ್ಗೆ ಮತ್ತೆ ಸೇರ್ಪಡೆಯಾಗಿದ್ದರು.

ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಟಿಎಂಸಿ
ಇನ್ನು ಕೂಚ್ ಬೆಹಾರ್ ದಕ್ಷಿಣ ಶಾಸಕ ನಿಖಿಲ್ ರಂಜನ್ ದೇ ಯನ್ನು ತರಾಟೆಗೆ ತೆಗೆದುಕೊಂಡ ತೃಣಮೂಲ ಕಾಂಗ್ರೆಸ್ನ ಕೂಚ್ ಬೆಹಾರ್ ಜಿಲ್ಲೆಯ ಅಧ್ಯಕ್ಷ ಪಾರ್ಥ ಪ್ರತೀಮ್ ರಾಯ್, "ಹಾಗೆ ನೋಡಬೇಕಾದರೆ ಬಿಜೆಪಿಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಕೂಡಾ ಬಿಜೆಪಿಯ ಸಿದ್ದಾಂತಕ್ಕೆ ಬದ್ಧವಾಗಿಲ್ಲ. ತೃಣಮೂಲ ಕಾಂಗ್ರೆಸ್ನ ಸಿದ್ದಾಂತಕ್ಕೆ ಸುವೇಂದು ಅಧಿಕಾರಿ ಒಂದು ವರ್ಷದ ಹಿಂದೆ ಬದ್ದವಾಗಿದ್ದಷ್ಟು ಈಗ ಬಿಜೆಪಿಯೊಂದಿಗೆ ಇಲ್ಲ. ಆದರೆ ಸುವೇಂದು ಅಧಿಕಾರಿಯ ವಿರುದ್ದ ಅವರು ಬೆರಳು ಮಾಡಿ ತೋರಿಸುತ್ತಾರೆಯೇ," ಎಂದು ಪ್ರಶ್ನಿಸಿದ್ದಾರೆ.

ಮತ್ತಷ್ಟು ಬಿಜೆಪಿ ನಾಯಕರು ಟಿಎಂಸಿಗೆ ಸೇರುತ್ತಾರಾ?
ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿಯನ್ನು ಸೇರ್ಪಡೆಯಾಗಿದ್ದರು. ಇನ್ನು ಈ ನಡುವೆ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ತೃಣಮೂಲಕ್ಕೆ ಘರ್ ವಾಪಾಸಿಯಾದ ಮುಕುಲ್ ರಾಯ್, "ತೃಣಮೂಲ ಕಾಂಗ್ರೆಸ್ಗೆ ಸೇರ್ಪಡೆಯಾಗಲು ಹಲವಾರು ಬಿಜೆಪಿ ಶಾಸಕರು ಕಾಯುತ್ತಿದ್ದಾರೆ," ಎಂದು ಹೇಳಿದ್ದಾರೆ. ಈ ನಡುವೆ ರಾಯ್ಗಂಜ್ನ ಬಿಜೆಪಿ ಶಾಸಕ ಕೃಷ್ಣ ಕಲ್ಯಾಣಿ ಭಾನುವಾರ ತಾನು ಪಕ್ಷದ ಯಾವುದೇ ಕಾರ್ಯಕ್ರಮಕ್ಕೆ ಭಾಗಿಯಾಗುವುದಿಲ್ಲ ಎಂದಿದ್ದಾರೆ. ಈ ಮೂಲಕ ಮುಂದಿನ ನಿರ್ಧಾರದ ಬಗ್ಗೆ ಕುತೂಹಲವನ್ನು ಹುಟ್ಟು ಹಾಕಿದ್ದಾರೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications