Get Updates
Get notified of breaking news, exclusive insights, and must-see stories!

ಶಾಸ್ತ್ರಬದ್ಧವಾಗಿ ವರಮಹಾಲಕ್ಷ್ಮಿ ವ್ರತ ಆಚರಿಸುವುದು ಹೀಗೆ...

ಬಡತನ-ಸಿರಿತನ ಅನ್ನೋದರ ವ್ಯತ್ಯಾಸವಿಲ್ಲದೆ ಬದುಕಿನಲ್ಲಿ ಹಬ್ಬವನ್ನು ಬರ ಮಾಡಿಕೊಳ್ಳುವ ಮಾಸ ಶ್ರಾವಣ. ಕುಟುಂಬ ಸಮೇತವಾಗಿ ಹಬ್ಬ ಆಚರಿಸಿ, ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಹೆಚ್ಚು ಚೆನ್ನಾಗಿರಲಿ, ಸಂಭ್ರಮವಿರಲಿ ಎಂದು ಆ ದೇವರನ್ನು ಬೇಡಿಕೊಳ್ಳುತ್ತೇವೆ.

ಶ್ರಾವಣ ಮಾಸದಲ್ಲಿ ನಾಗರಪಂಚಮಿ ನಂತರ ಬರುವ ಮುಖ್ಯವಾದ ಹಬ್ಬ ವರಮಹಾಲಕ್ಷ್ಮೀ ವ್ರತ. ಲಕ್ಶ್ಮೀ ಎಂದಾಕ್ಷಣ ಹಣ ಅಥವಾ ಐಶ್ವರ್ಯವಷ್ಟೇ ಅನುಗ್ರಹಿಸುವ ದೇವತೆ ಎಂಬುದು ಹಲವರ ನಂಬಿಕೆ. ಆದರೆ ಲಕ್ಷ್ಮಿ ಅಂದರೆ ವಿದ್ಯೆ ನೀಡುವ, ಮನೆಯಲ್ಲಿ ಧಾನ್ಯದ ಸಮೃದ್ಧಿ ಕೊಡುವ, ಒಟ್ಟಾರೆ ಅಷ್ಟ ಲಕ್ಷ್ಮಿ ಸ್ವರೂಪದಲ್ಲಿ ಬದುಕಿನ ಏಳ್ಗೆಗೆ, ಸಮೃದ್ಧಿಗೆ ಏನೇನು ಬೇಕೋ ಎಲ್ಲವನ್ನೂ ದಯ ಪಾಲಿಸುವ ಮಹಾ ತಾಯಿ ಆಕೆ.

ಈ ರೀತಿ ಸಕಲ ಶುಭವನ್ನು ನೀಡುವ ಮಹಾಲಕ್ಷ್ಮಿಯನ್ನು ಶ್ರಾವಣದ ಪೌರ್ಣಮಿಗೂ ಮುನ್ನ ಬರುವ ಶುಕ್ರವಾರದಂದು ವ್ರತದ ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ಅಂದಹಾಗೆ ಈ ವ್ರತಾಚರಣೆ ಬಗ್ಗೆ ಭವಿಷ್ಯೋತ್ತರ ಪುರಾಣದಲ್ಲಿ ಸ್ವತಃ ಪರಶಿವನೇ ತಿಳಿಸಿಕೊಟ್ಟಿದ್ದಾನೆ. ವರಮಹಾಲಕ್ಷ್ಮೀ ವ್ರತಾಚರಣೆಯ ಬಗ್ಗೆ ನಿಮಗೆ ಗೊತ್ತಿಲ್ಲದ್ದೇನಲ್ಲ. ಅದನ್ನು ಮತ್ತೆ ಸ್ಮರಿಸುವ, ನೆನೆಸುವ ಪ್ರಯತ್ನ ಇಲ್ಲಿದೆ.

ಪಾರ್ವತಿಗೆ ಈಶ್ವರನು ತಿಳಿಸಿದ ವ್ರತ

ಪಾರ್ವತಿಗೆ ಈಶ್ವರನು ತಿಳಿಸಿದ ವ್ರತ

ಜಗತ್ತಿನ ಉದ್ಧಾರಕ್ಕಾಗಿ ಯಾವ ವ್ರತ ಶ್ರೇಷ್ಠ ಎಂದು ಜಗಜ್ಜನನಿಯಾದ ಪಾರ್ವತಿಯು ಕೇಳಿದಾಗ, ಸ್ವತಃ ಈಶ್ವರನು ತಿಳಿಸಿದ್ದು ವರಮಹಾಲಕ್ಷ್ಮೀ ವ್ರತ. ಈ ವ್ರತದ ಮಹಾತ್ಮೆಯನ್ನು ಕಥೆಯ ರೂಪದಲ್ಲಿ ಹೇಳುತ್ತಾನೆ

ಕನಸಲ್ಲಿ ಬರುವ ಮಹಾಲಕ್ಷ್ಮೀ

ಕನಸಲ್ಲಿ ಬರುವ ಮಹಾಲಕ್ಷ್ಮೀ

ಕುಂಡಿನ ಎಂಬಲ್ಲಿ ಚಾರುಮತಿ ಎಂಬ ಬ್ರಾಹ್ಮಣ ಸ್ತ್ರೀ ಇದ್ದಳು. ಒಂದು ದಿನ ಆಕೆಯ ಕನಸಿನಲ್ಲಿ ಸಾಕ್ಷಾತ್ ಮಹಾಲಕ್ಷ್ಮೀ ಬಂದು ಅತ್ತೆ- ಮಾವಂದಿರ ಶುಶ್ರೂಷೆಯಲ್ಲಿ ನಿರತಳಾದ ನಿನ್ನ ಸದಾಚಾರಕ್ಕೆ ಮೆಚ್ಚಿದ್ದೇನೆ. ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲು ಬರುವ ಶುಕ್ರವಾರ ನನ್ನನ್ನು ಪೂಜಿಸು. ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುತ್ತೇನೆ ಎಂದು ಅಭಯ ನೀಡುತ್ತಾಳೆ.

ಚಾರುಮತಿಗೆ ಲಕ್ಷ್ಮೀ ಅನುಗ್ರಹ

ಚಾರುಮತಿಗೆ ಲಕ್ಷ್ಮೀ ಅನುಗ್ರಹ

ಚಾರುಮತಿ ಸಂತೋಷಳಾಗಿ ತನ್ನ ಕನಸಿನ ಬಗ್ಗೆ ಬಂಧು- ಮಿತ್ರರಿಗೆ ತಿಳಿಸಿ, ಶ್ರಾವಣ ಮಾಸದ ಆ ಶುಭ ದಿನಕ್ಕಾಗಿ ಕಾಯುತ್ತಾಳೆ. ಆ ದಿನ ವರ ಮಹಾಲಕ್ಷ್ಮಿಯನ್ನು ಆರಾಧನೆ ಮಾಡುವ ಚಾರುಮತಿ ದೇವಿಯ ಅನುಗ್ರಹ ಪಡೆಯುತ್ತಾಳೆ. ಆ ನಂತರ ಪ್ರತೀ ವರ್ಷ ವ್ರತಾಚರಣೆ ಮಾಡಿ ಇಹದಲ್ಲಿ ಸಕಲ ಸುಖ ಪಡೆದು, ಅಂತ್ಯದಲ್ಲಿ ಮಹಾಲಕ್ಷ್ಮಿಯ ಸಾನ್ನಿಧ್ಯ ಪಡೆಯುತ್ತಾಳೆ.

ಅತ್ತೆ- ಮಾವನ ಸೇವೆ ಮಾಡಿದ್ದಕ್ಕೆ ಲಕ್ಷ್ಮೀ ಅನುಗ್ರಹ

ಅತ್ತೆ- ಮಾವನ ಸೇವೆ ಮಾಡಿದ್ದಕ್ಕೆ ಲಕ್ಷ್ಮೀ ಅನುಗ್ರಹ

ಈ ಕಥೆಯ ಮೂಲಕ ಎಲ್ಲರಿಗೂ ಒಂದು ಸಂದೇಶವಿದೆ. ಚಾರುಮತಿಯು ತನ್ನ ಅತ್ತೆ- ಮಾವನ ಸೇವೆ ಮಾಡಿದ್ದು ನೋಡಿ ಮಹಾಲಕ್ಷ್ಮಿ ಪ್ರಸನ್ನಳಾಗಿ ಒಲಿದು ಬಂದದ್ದು. ಆದ್ದರಿಂದ ಯಾವ ಮುತ್ತೈದೆಯು ಅತ್ತೆ- ಮಾವನನ್ನು ತಂದೆ- ತಾಯಿಯಂತೆ ಗೌರವಿಸಿ ಶ್ರದ್ಧೆಯಿಂದ ಅವರ ಶುಶ್ರೂಷೆ ಮಾಡುತ್ತಾರೋ ಅಂಥವರಿಗೆ ಮಾತ್ರ ಈ ವ್ರತ ಮಾಡುವ ನೈತಿಕ ಹಕ್ಕು ಹಾಗೂ ಲಕ್ಷ್ಮಿ ದೇವಿಯ ಅನುಗ್ರಹ ಆಗುತ್ತದೆ.

ಅತ್ತೆ- ಮಾವನ ಸೇವೆ ಮಾಡದೇ ಚಿನ್ನದ ಕಲಶವೇ ಇಟ್ಟು ವ್ರತ ಮಾಡಿದರೂ ಅಂಥವರಿಗೆ ಲಕ್ಷ್ಮಿ ಒಲಿಯುವುದಿಲ್ಲ.

ಪೂಜಾ ವಿಧಾನ

ಪೂಜಾ ವಿಧಾನ

ಬೆಳಗ್ಗೆ ಸ್ನಾನಾನಂತರ ದೇವರ ಕೋಣೆ ಅಥವಾ ಮನೆಯಲ್ಲಿ ದೊಡ್ಡ ಜಾಗದಲ್ಲಿ ಗೋಮೂತ್ರದಿಂದ ಸ್ಥಳ ಶುದ್ಧಿ ಮಾಡಬೇಕು. ರಂಗೋಲಿ ಬಿಡಿಸಿ ಅಗ್ರ ಇರುವ ಎರಡು ಅಥವಾ ಐದು ಬಾಳೆ ಎಲೆ ಇಟ್ಟು, ಅದರಲ್ಲಿ ಅಕ್ಕಿ ಹಾಕಿ, ಕಲಶ ಇಟ್ಟು, ಕಲಶದಲ್ಲಿ ಒಣ ದ್ರಾಕ್ಷಿ, ಖರ್ಜೂರ, ಬಾದಾಮಿ, ಗೋಡಂಬಿ ಸ್ವಲ್ಪ ಹಾಕಿ.

ಅನುಕೂಲ ಇದ್ದಲ್ಲಿ ಬೆಳ್ಳಿ ಅಥವಾ ಬಂಗಾರದ ನಾಣ್ಯ ಹಾಕಿ. ಶುದ್ಧವಾದ ಅರಿಶಿನ ಚಿಟಿಕೆ ಹಾಕಿ. ಶುದ್ಧವಾದ ನೀರು ತುಂಬಬೇಕು. ಮಾವಿನ ಸೊಪ್ಪು ಹಾಕಿ, ತೆಂಗಿನ ಕಾಯಿ ಇಡಬೇಕು. ಇನ್ನು ಕಲಶಕ್ಕೆ ಸೀರೆ, ಆಭರಣ ಬೇರೆ ಅಲಂಕಾರ ಮಾಡಬಹುದು. ಕಲಶದ ಕೆಳಗೆ ಒಂದು ಲಕ್ಷ್ಮಿಯ ಚಿಕ್ಕ ವಿಗ್ರಹ ಇಟ್ಟರೆ ಉತ್ತಮ.

ಸಂಪ್ರದಾಯದ ಪ್ರಕಾರ ಮೊದಲ ಪೂಜೆ

ಸಂಪ್ರದಾಯದ ಪ್ರಕಾರ ಮೊದಲ ಪೂಜೆ

ಮೊದಲು ನಿಮ್ಮ ಸಂಪ್ರದಾಯದಂತೆ ಯಾವ ದೇವರಿಗೆ ಪೂಜೆ ಮಾಡಬೇಕೋ ಆ ದೇವರನ್ನು ಪ್ರಾರ್ಥನೆ ಮಾಡಿ. ಆ ನಂತರ

ಪದ್ಮಾಸನೇ ಪದ್ಮಕರೇ ಸರ್ವ ಲೋಕೈಕ ಪೂಜಿತೇ |

ನಾರಾಯಣಪ್ರಿಯೇ ದೇವಿ ಸುಪ್ರೀತಾ ಭವ ಸರ್ವದಾ ||

ಎಂಬ ಮಂತ್ರಗಳಿಂದ ಮಹಾಲಕ್ಷ್ಮಿಯನ್ನು ಧ್ಯಾನಿಸಿ, ಅವಾಹನೆ ಮಾಡಿ. ಆನಂತರ ಅರ್ಘ್ಯ- ಪಾದ್ಯ ಕೊಡ ಬೇಕು. ಲಕ್ಷ್ಮಿ ದೇವಿಯ ಚಿಕ್ಕ ವಿಗ್ರಹಕ್ಕೆ ಹಾಲು, ಮೊಸರು, ತುಪ್ಪ, ಜೇನುತುಪ್ಪ ಸಕ್ಕರೆ ಹೀಗೆ ಪಂಚಾಮೃತ ಅಭಿಷೇಕ ಮಾಡಬೇಕು. ಅರಿಶಿನ- ಕುಂಕುಮ, ಗಂಧ ಇತ್ಯಾದಿಗಳಿಂದಲೂ ಹಾಗೂ ಮಲ್ಲಿಗೆ ಇತ್ಯಾದಿ ಪುಷ್ಪಗಳಿಂದಲೂ ದೇವಿಗೆ ಅಲಂಕಾರ ಮಾಡಿ, ಅಂಗ ಪೂಜೆ ಹಾಗೂ ಬಿಲ್ವ, ದವನ, ಮರಗ ಇತ್ಯಾದಿ ಪತ್ರೆಗಳಿಂದ ಅರ್ಚನೆ ಮಾಡಬೇಕು.

ನೈವೇದ್ಯ ಹೇಗಿರಬೇಕು

ನೈವೇದ್ಯ ಹೇಗಿರಬೇಕು

ಲಕ್ಷ್ಮಿ ವಿಗ್ರಹಕ್ಕೆ ಕುಂಕುಮದಿಂದ ಅಷ್ಟೋತ್ತರ ಅರ್ಚನೆ ಮಾಡಿ, ಧೂಪ- ದೀಪ ಮಾಡಬೇಕು. ಬೆಲ್ಲ ಹಾಗೂ ತುಪ್ಪದಲ್ಲಿ ಸಿಹಿ ತಿನಿಸು ತಯಾರಿಸಿ, ನೈವೇದ್ಯ ಮಾಡಬೇಕು. ಹನ್ನೆರಡು ವಿಧದ ನೈವೇದ್ಯ ಮಾಡುವ ಪದ್ಧತಿ ಇದೆ. ಆದರೆ ಎಲ್ಲವೂ ಸಿಹಿ ಭಕ್ಷ್ಯಗಳೇ ಆಗಬೇಕು ಎಂದಿಲ್ಲ.

ಅರಿಶಿನದ ನೀರಿನಲ್ಲಿ ನೆನೆಸಿ, ಪೂಜೆ

ಅರಿಶಿನದ ನೀರಿನಲ್ಲಿ ನೆನೆಸಿ, ಪೂಜೆ

ನೈವೇದ್ಯದ ನಂತರ ತುಪ್ಪದ ಬತ್ತಿಯಲ್ಲಿ ಮಹಾ ಮಂಗಳಾರತಿ ಮಾಡಿ, ಮಂತ್ರಪುಷ್ಪಾದಿಗಳನ್ನು ಸಮರ್ಪಿಸಬೇಕು. ಆ ನಂತರ ಒಂಬತ್ತು ಎಳೆ ಇರುವ ದಾರವನ್ನು ಅರಿಶಿನದ ನೀರಿನಲ್ಲಿ ನೆನೆಸಿ, ಹಿಂಡಿ ಅದಕ್ಕೆ ಒಂಬತ್ತು ಗಂಟು ಹಾಕಿ.

ಅದನ್ನು ಒಂದು ವೀಳ್ಯದ ಎಲೆಯ ಮೇಲೆ ಇಟ್ಟು ಕಮಲಾಯೈ ನಮಃ, ರಮಾಯೈ ನಮಃ, ಲೋಕಮಾತ್ರೇ ನಮಃ, ವಿಶ್ವ ಜನನ್ಯೈ ನಮಃ, ಮಹಾಲಕ್ಷ್ಮೈ ನಮಃ, ಕ್ಷೀರಾಬ್ಧಿತನಯಾಯೈ ನಮಃ, ವಿಶ್ವ ಸಾಕ್ಷಿಣ್ಯೈ ನಮಃ, ಚಂದ್ರ ಸಹೋದರ್ಯೈ ನಮಃ, ಹರಿವಲ್ಲಭಾಯೈ ನಮಃ ಹೀಗೆ ಒಂಬತ್ತು ಹೆಸರು ಹೇಳುತ್ತಾ ಅರಿಶಿನ, ಕುಂಕುಮ, ಅಕ್ಷತೆಗಳಿಂದ ಆ ದಾರವನ್ನು ಅರ್ಚನೆ ಮಾಡಬೇಕು.

ಹಿರಿಯ ಮುತ್ತೈದೆಯರಿಗೆ ಈ ದಾರ ಸಹಿತ ಹಸಿ ಮೊರದಲ್ಲಿ ಅಕ್ಕಿ, ತೆಂಗಿನಕಾಯಿ, ತಾಂಬೂಲ ಸಹಿತ ದಕ್ಷಿಣೆ, ಬಳೆ, ರವಿಕೆ ಕಣ ಅಥವಾ ಸೀರೆ ಇಟ್ಟು ವಾಯನದಾನ ಕೊಡಬೇಕು.

ಬ್ರಾಹ್ಮಣರಿಗೆ ದಕ್ಷಿಣೆ ಸಹಿತ ಸ್ವಯಂಪಾಕ ದಾನ

ಬ್ರಾಹ್ಮಣರಿಗೆ ದಕ್ಷಿಣೆ ಸಹಿತ ಸ್ವಯಂಪಾಕ ದಾನ

ಬಧ್ನಾಮಿ ದಕ್ಷಿಣೆ ಹಸ್ತೇ ನವ ಸೂತ್ರಂ ಶುಭಪ್ರದಂ

ಪುತ್ರಪೌತ್ರಾಭಿವೃದ್ಧಿಂ ಚ ಸೌಭಾಗ್ಯಂ ದೇಹಿ ಮೇ ರಮೇ

-ಈ ಮೇಲಿನ ಮಂತ್ರವನ್ನು ಹೇಳುತ್ತ ಬಲಗೈಗೆ ತಾವು ಸಹ ಒಂದು ದಾರವನ್ನು ಕಟ್ಟಿಸಿಕೊಳ್ಳಬೇಕು. ಬ್ರಾಹ್ಮಣರಿಗೆ ಸ್ವಯಂಪಾಕ, ದಕ್ಷಿಣೆ, ದಾನ ಕೊಟ್ಟು ವ್ರತ ಕಥೆಯನ್ನು ಕೇಳಬೇಕು. ಮುತ್ತೈದೆಯರಿಗೆ ಅರಿಶಿನ- ಕುಂಕುಮ, ಫಲ- ತಾಂಬೂಲ, ಬಳೆ, ರವಿಕೆ ಕಣ ಹೀಗೆ ನಿಮ್ಮ ಶಕ್ತ್ಯಾನುಸಾರ ಕೊಡಬೇಕು. ನಂತರ ಬ್ರಾಹ್ಮಣರಿಗೆ ದಕ್ಷಿಣೆ ಸಹಿತ ಸ್ವಯಂಪಾಕ ದಾನ ಮಾಡಬೇಕು.

ನಾರಾಯಣನ ಸ್ಮರಣೆ ಮಾಡಿ

ನಾರಾಯಣನ ಸ್ಮರಣೆ ಮಾಡಿ

ಇನ್ನು ಪುರಾಣಗಳ ಪ್ರಕಾರ ನಾರಾಯಣನ ಸ್ಮರಣೆ, ಆರಾಧನೆ ಮಾಡದೇ ಕೇವಲ ಲಕ್ಷ್ಮೀ ಆರಾಧನೆ ಮಾಡಬಾರದು. ಹಾಗೆ ಮಾಡಿದಲ್ಲಿ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಆದ್ದರಿಂದ ಈ ವ್ರತದ ಮಧ್ಯದಲ್ಲಿ ಮಹಾ ವಿಷ್ಣುವಿನ ಆವಾಹನೆ, ಅಷ್ಟೋತ್ತರ ಪಠಣ, ಅರ್ಚನೆ ಸೂಕ್ತ. ಇನ್ನು ವ್ರತದಲ್ಲಿ ಮಹಾ ಲಕ್ಷ್ಮಿ ಅಷ್ಟಕ ಪಠಿಸಬೇಕು ಹಾಗೂ ಕುಂಕುಮದ ನೀರು ಮಾಡಿ ಮಹಾ ಲಕ್ಷ್ಮಿಗೆ ಆರತಿ ಮಾಡುವುದನ್ನು ಮರೆಯದಿರಿ.

ಪೂಜೆಗೆ ಕೂರುವಾಗ ರೇಷ್ಮೆ ಸೀರೆ ಶ್ರೇಷ್ಠ

ಪೂಜೆಗೆ ಕೂರುವಾಗ ರೇಷ್ಮೆ ಸೀರೆ ಶ್ರೇಷ್ಠ

ಇದು ಮುತ್ತೈದೆಯರೇ ಆಚರಿಸುವ ವಿಶೇಷವಾದ ವ್ರತ. ಆದ್ದರಿಂದ ಅವರೇ ಪ್ರಧಾನ. ಮುತ್ತೈದೆ ಈ ಪೂಜೆಯಲ್ಲಿ ಕುಳಿತುಕೊಳ್ಳುವಾಗ ರೇಷ್ಮೆ ಸೀರೆ ಉಡುವುದು ಶ್ರೇಷ್ಠ. ಇನ್ನು ಅಶಕ್ತರಾದಲ್ಲಿ ಹೊಸ ಸೀರೆ ಉಡುವುದು ಉತ್ತಮ. ಇನ್ನು ಸೀರೆ ಕಡುಗಪ್ಪು ಅಥವಾ ಕಡು ನೀಲಿ ಬಣ್ಣ ಇರಬಾರದು.

ಇನ್ನು ಪೂಜೆಗೆ ಕುಳಿತುಕೊಳ್ಳುವಾಗ ಕೂದಲು ಬಿಚ್ಚಿ ಹರಡಿಕೊಳ್ಳಬಾರದು. ಜಡೆ ಹಾಕಿರಬೇಕು. ಕೂದಲು ಒದ್ದೆ ಇರಬಾರದು. ಜಡೆಯಲ್ಲಿ ಹೂವು ಇರಬೇಕು. ಹಣೆಯಲ್ಲಿ ಕುಂಕುಮ ಇರಬೇಕು. ಕರ್ಪೂರದ ಬದಲು ತುಪ್ಪದ ಬತ್ತಿ ಬಳಸಿ. ತೋರಣ, ಬಾಳೆಯೆಲೆ ಬಾಳೆಕಂಬಗಳು ಪ್ಲಾಸ್ಟಿಕ್ ಅಲ್ಲದೇ ನಿಜವಾದ ಮಾವಿನ ಸೊಪ್ಪು ಹಾಗೂ ಬಾಳೆ ಎಲೆ ಇಡಬೇಕು.

ಕುಂಕುಮಾರ್ಚನೆ ಹೀಗೆ ಮಾಡಿ

ಕುಂಕುಮಾರ್ಚನೆ ಹೀಗೆ ಮಾಡಿ

ದೀಪದ ಕಂಬಗಳಲ್ಲಿ ನೈಜವಾದ ದೀಪವನ್ನು ತುಪ್ಪ ಅಥವಾ ಶುದ್ಧವಾದ ಎಳ್ಳೆಣ್ಣೆಯಲ್ಲಿ ಹಚ್ಚಬೇಕು. ತುಪ್ಪದ ದೀಪ ಆದರೆ ದೇವರ ಬಲಗಡೆ ಹಾಗೂ ಎಣ್ಣೆಯ ದೀಪ ಆದರೆ ದೇವರ ಎಡಗಡೆ ಇರಿಸಬೇಕು. ಕುಂಕುಮಾರ್ಚನೆಗೆ, ಪೂಜೆಗೆ ಬಳಸುವ ಕುಂಕುಮ ಹಾಗೂ ಅರಿಶಿನ ಉತ್ತಮ ಗುಣಮಟ್ಟದ್ದಾಗಿ ಇರಬೇಕು.

ಕುಂಕುಮಾರ್ಚನೆ ಮಾಡುವಾಗ ಅಥವಾ ಮುತ್ತೈಯರಿಗೆ ಕುಂಕುಮ ಹಚ್ಚುವಾಗ ತೋರು ಬೆರಳನ್ನು ಬಳಸಬಾರದು. ಇನ್ನು ನಿಮ್ಮಿಂದ ಬಾಗಿನ ಹಾಗೂ ಕುಂಕುಮ ತೆಗೆದುಕೊಳ್ಳುವ ಮುತ್ತೈದೆ ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಿ ಕುಂತು ಸ್ವೀಕರಿಸಬೇಕು. ಪೂಜಾ ಸಮಯದಲ್ಲಿ ಅಥವಾ ಇಡೀ ದಿನ ಅಪಶಬ್ದ ಅಥವಾ ಅನವಶ್ಯಕ ದುರಾಲೋಚನೆಗಳು ಬರದಂತೆ ಎಚ್ಚರವಹಿಸಿ.

ಕನಿಷ್ಠ ಒಂದು ಹೊತ್ತಿಗೆ ಆಗುವಂತಿರಬೇಕು

ಕನಿಷ್ಠ ಒಂದು ಹೊತ್ತಿಗೆ ಆಗುವಂತಿರಬೇಕು

ಸ್ವಯಂಪಾಕದಲ್ಲಿ ನೀಡುವ ತರಕಾರಿ, ಅಕ್ಕಿ- ಬೇಳೆ ಇತ್ಯಾದಿ ಪದಾರ್ಥಗಳು ಉತ್ತಮ ಗುಣಮಟ್ಟ ಇರಬೇಕು. ಸ್ವಯಂಪಾಕ ಪಡೆದವರು ಕನಿಷ್ಠ ಒಂದು ದಿನ ಅಥವಾ ಒಂದು ಹೊತ್ತು ಅಡುಗೆ ಮಾಡಿ ಊಟ ಮಾಡುವಷ್ಟು ಇರಬೇಕು. ಇನ್ನು ಮುತ್ತೈದೆಯರಿಗೆ ಕೊಡುವ ವಾಯನದಾನದಲ್ಲಿ ರವಿಕೆ ಸೀರೆ ಅಥವಾ ಬ್ರಾಹ್ಮಣರಿಗೆ ನೀಡುವ ಪಂಚೆ- ಶಲ್ಯ ಇತ್ಯಾದಿ ವಸ್ತ್ರಗಳು ಉಡಲಿಕ್ಕೆ ಯೋಗ್ಯವಾಗಿ ಇರಬೇಕು.

ಅನುಕೂಲ ಇದ್ದವರು ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿಸಿ

ಅನುಕೂಲ ಇದ್ದವರು ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿಸಿ

ಶ್ರಾವಣ ಮಾಸದಲ್ಲಿ ಶಕ್ತರು ಅವರಿಗೆ ಅನುಕೂಲವಾದ ಮಂಗಳ ಅಥವಾ ಶುಕ್ರವಾರದಲ್ಲಿ ಲಕ್ಷ್ಮೀ ನಾರಾಯಣ ಹೃದಯ ಪಾರಾಯಣ ಮಾಡಿಸಿ, ಕಮಲ ಪುಷ್ಪ ಹಾಗೂ ಪಾಯಸ ದ್ರವ್ಯದಲ್ಲಿ ಲಕ್ಷ್ಮೀ ನಾರಾಯಣ ಹೃದಯ ಮಂತ್ರಗಳಿಂದ ಹವನ ಮಾಡಿಸುವುದರಿಂದ ಸಕಲ ಆರ್ಥಿಕ ಬಾಧೆಗಳು ನಿವಾರಣೆಯಾಗುತ್ತವೆ. ವ್ಯಾಪಾರ ಅಭಿವೃದ್ಧಿ ಆಗಿ, ಮನೆಯಲ್ಲಿ ಸಕಲ ಸೌಭಾಗ್ಯ- ಸಂಪತ್ತು ಅಭಿವೃದ್ಧಿ ಆಗುತ್ತದೆ ಎಂದು ಪುರಾಣಗಳು ಸಾರುತ್ತವೆ.

ಆಚಾರ್ಯ ವಿಠ್ಠಲ ಭಟ್ಟ ಕೆಕ್ಕಾರು ಮೊಬೈಲ್ ಫೋನ್ ಸಂಖ್ಯೆ 9845682380

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+