ಬಜೆಟ್ 2021: ಲಾಭ ಸಿಕ್ಕಿದ್ದು ಯಾರಿಗೆ? ಕಳೆದುಕೊಂಡವರು ಯಾರು?
ಕೋವಿಡ್-19 ಪಿಡುಗಿನಿಂದ ಮತ್ತಷ್ಟು ಹದಗೆಟ್ಟಿರುವ ಆರ್ಥಿಕತೆಯ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ರ ಕೇಂದ್ರ ಬಜೆಟ್ಅನ್ನು ಸೋಮವಾರ ಮಂಡಿಸಿದ್ದಾರೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರ ಹಾಗೂ ಮೂಲಸೌಕರ್ಯಕ್ಕೆ ಆದ್ಯತೆ ನೀಡಲಾಗಿದ್ದು, ನೇರ ತೆರಿಗೆಗಳಲ್ಲಿ ಅಷ್ಟಾಗಿ ಬದಲಾವಣೆ ಮಾಡಿಲ್ಲ.
ಕೃಷಿ ಮೂಲಸೌಕರ್ಯ ಅಭಿವೃದ್ಧಿ ಹಾಗೂ ನಿರ್ದಿಷ್ಟ ಆಮದು ಸರಕುಗಳ ಮೇಲೆ ಹೊಸ ಸೆಸ್ಗಳನ್ನು ವಿಧಿಸಲಾಗಿದೆ. ಹತ್ತಿ ಮತ್ತು ವಿದ್ಯುದುಪಕರಣಗಳಂತಹ ವಸ್ತುಗಳ ಮೇಲೆ ಸುಂಕ ಹೆಚ್ಚಳ ಮಾಡಲಾಗಿದ್ದು, ಆರ್ಥಿಕತೆಯ ಸುಧಾರಣೆಗೆ ಬಂಡವಾಳ ಹಿಂತೆಗೆದ ಕ್ರಮಕ್ಕೆ ಮುಂದಾಗಿದೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೆಲವು ವಲಯಗಳಲ್ಲಿನ ಅನುದಾನ ಹಂಚಿಕೆಯನ್ನು ಹೆಚ್ಚಿಸಿದ್ದಾರೆ. ಇನ್ನು ಕೆಲವು ವಲಯಗಳಿಗೆ ಬಜೆಟ್ನಲ್ಲಿ ಸಣ್ಣಪುಟ್ಟ ಗಮನವಷ್ಟೇ ಸಿಕ್ಕಿದೆ. ಈ ಬಾರಿ ಬಜೆಟ್ನಲ್ಲಿ ಹೆಚ್ಚು ಲಾಭ ಪಡೆದವರು ಮತ್ತು ಕಳೆದುಕೊಂಡ ವಲಯಗಳು ಯಾವುವು? ಇಲ್ಲಿದೆ ಪಟ್ಟಿ.

ಆರೋಗ್ಯ ಕ್ಷೇತ್ರಕ್ಕೆ ಹಣದ ಹೊಳೆ
'ಆತ್ಮನಿರ್ಭರ ಭಾರತ'ದ ಆರು ಮಹತ್ವದ ಸ್ತಂಬಗಳಲ್ಲಿ ಒಂದು ಎಂದು ಆರೋಗ್ಯ ಕ್ಷೇತ್ರವನ್ನು ನಿರ್ಮಲಾ ಸೀತಾರಾಮನ್ ಗುರುತಿಸಿದ್ದಾರೆ. ಕಳೆದ ವರ್ಷ 94,452 ಕೋಟಿ ರೂ ಅನುದಾನವನ್ನು ಈ ಬಾರಿ ಶೇ 137ರಷ್ಟು ಹೆಚ್ಚಿಸಲಾಗಿದ್ದು, 2,23,846 ಕೋಟಿ ರೂ ಘೋಷಿಸಲಾಗಿದೆ. ಜತೆಗೆ ಮುಂದಿನ ಹಣಕಾಸು ವರ್ಷದಲ್ಲಿ ಕೋವಿಡ್ ಲಸಿಕೆಗಳಿಗಾಗಿ 35,000 ಕೋಟಿ ರೂ ಹಂಚಿಕೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆಯನ್ನು ಘೋಷಿಸಲಾಗಿದೆ. ಇದಕ್ಕಾಗಿ ಆರು ವರ್ಷಗಳಲ್ಲಿ 64,180 ಕೋಟಿ ಮೀಸಲಿಡಲಾಗಿದೆ.

ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ಸಾಹ
ಮೂಲಸೌಕರ್ಯ ಯೋಜನೆಗಳಿಗೆ ಪರಿಣಾಮಕಾರಿ ನಿಧಿ ಕ್ರೋಡೀಕರಣಕ್ಕಾಗಿ 20,000 ಕೋಟಿ ರೂ ಬಂಡವಾಳ ವೆಚ್ಚದಲ್ಲಿ ನೂತನ ಅಭಿವೃದ್ಧಿ ಹಣಕಾಸು ಸಂಸ್ಥೆಯನ್ನು (ಡಿಎಫ್ಐ) ಸ್ಥಾಪಿಸಲಾಗುತ್ತಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ (ಎನ್ಐಪಿ) ಅಡಿಯಲ್ಲಿ ಹಣಕಾಸು ಯೋಜನೆಗಳು ಹಾಗೂ ಮೂರು ವರ್ಷಗಳಲ್ಲಿ ಐದು ಲಕ್ಷ ಕೋಟಿ ಬಳಕೆಯ ಗುರಿ ಹೊಂದಲಾಗಿದೆ.

ಲೋಹ/ಅಲ್ಯುಮಿನಿಯಂ ಕಂಪೆನಿಗಳಿಗೆ ಪ್ರಯೋಜನ
ದೀರ್ಘಕಾಲದಿಂದ ನಿರೀಕ್ಷೆ ಮೂಡಿಸಿದ್ದ ಹಳೆಯ ವಾಹನಗಳ ಸ್ಕ್ರಾಪೇಜ್ ನೀತಿಯು ಲೋಹ ಕಂಪೆನಿಗಳಿಗೆ ಸಾಕಷ್ಟು ಲಾಭ ತರಲಿದೆ. ಇದರ ಜತೆಗೆ 11,000 ಕಿಮೀ ಉದ್ದದ ಹೆದ್ದಾರಿಗಳು ಮತ್ತು ಮೆಟ್ರೋ ರೈಲು ಮಾರ್ಗಗಳ ಘೋಷಣೆ, 27 ನಗರಗಳಲ್ಲಿ ತ್ವರಿತ ಸಾರಿಗೆ ಯೋಜನೆಗಳು ಉಕ್ಕು ಮತ್ತು ಅಲ್ಯುಮಿನಿಯಂಗೆ ಬೇಡಿಕೆ ಹೆಚ್ಚಿಸಲಿದೆ.

ಮೂಲಸೌಕರ್ಯ ಮತ್ತು ನಿರ್ಮಾಣಕ್ಕೆ ಉತ್ತೇಜನ
ಹೆದ್ದಾರಿ ಕಾರಿಡಾರ್ಗಳ ನಿರ್ಮಾಣವನ್ನು ಚುರುಕುಗೊಳಿಸಲು ಒತ್ತು ನೀಡಿರುವ ನಿರ್ಮಲಾ ಸೀತಾರಾಮನ್, 2021-22ನೇ ಸಾಲಿನಲ್ಲಿ ಹೆದ್ದಾರಿ ವಲಯಕ್ಕೆ 1.18 ಲಕ್ಷ ಕೋಟಿ ರೂ ಹಂಚಿಕೆ ಮಾಡಿದ್ದಾರೆ. 5.35 ಲಕ್ಷ ಕೋಟಿ ವೆಚ್ಚದ ಭಾರತ ಮಾಲಾ ಯೋಜನೆಯಡಿ ಈಗಾಗಲೇ 13,000 ಕಿಮೀ ಉದ್ದದ ರಸ್ತೆಗೆ 3.3 ಲಕ್ಷ ಕೋಟಿ ರೂ ಮಂಜೂರು ಮಾಡಲಾಗಿದೆ. 2022ರ ಮಾರ್ಚ್ ವೇಳೆಗೆ ಮತ್ತೆ 11,000 ರಾಷ್ಟ್ರೀಯ ಹೆದ್ದಾರಿ ಕಾರಿಡಾರ್ಗೆ ಹೆಚ್ಚುವರಿಯಾಗಿ 8,500 ಕಿಮೀ ಮಾರ್ಗವನ್ನು ಸೇರ್ಪಡೆ ಮಾಡಲಾಗುವುದು ಎಂದು ನಿರ್ಮಲಾ ತಿಳಿಸಿದ್ದಾರೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್, ವಿಮಾ ಕಂಪೆನಿಗಳಿಗೆ ಲಾಭ
ಬ್ಯಾಂಕ್ಗಳು ಮತ್ತು ಎನ್ಬಿಎಫ್ಸಿಗಳು ಸೇರಿದಂತೆ ಹಣಕಾಸು ಸಂಸ್ಥೆಗಳ ಷೇರು ಮೌಲ್ಯ ಏರಿಕೆಯಾಗಿದೆ. ಇದಕ್ಕೆ ಕಾರಣ ವಿಮಾ ವಲಯದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿಯನ್ನು ಶೇ 49ರಿಂದ ಶೇ 74ರವರೆಗೆ ಏರಿಸಿರುವುದು. ಬ್ಯಾಂಕಿಂಗ್ ವಲಯದಲ್ಲಿ ಬಳಕೆಯಾದ ಆಸ್ತಿಯನ್ನು ತೆರವುಗೊಳಿಸಲು ಆಸ್ತಿ ನಿರ್ವಹಣಾ ಕಂಪೆನಿ ಮತ್ತು ಆಸ್ತಿ ಮರು ನಿರ್ಮಾಣ ಕಂಪೆನಿಯನ್ನು ಸರ್ಕಾರ ಸ್ಥಾಪಿಸಲಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ 20,000 ಕೋಟಿ ರೂ ತೊಡಗಿಸಲು ಸರ್ಕಾರ ಮುಂದಾಗಿದೆ.

ರಫ್ತುದಾರರಿಗೆ ಆರ್ಥಿಕ ಹೊರೆ
ಆತ್ಮನಿರ್ಭರ ಪರಿಕಲ್ಪನೆಯಂತೆ ಸ್ಥಳೀಯ ಉತ್ಪಾದನೆಗೆ ಒತ್ತು ನೀಡುವ ಉದ್ದೇಶದಿಂದ ಸೋಲಾರ್, ಮೊಬೈಲ್ ಫೋನ್ ಸಾಧನಗಳು, ಆಟೊ ಭಾಗಗಳು ಮುಂತಾದವುಗಳ ಆಮದು ಟಾರಿಫ್ ಹೆಚ್ಚಿಸಲಾಗಿದೆ. ಮದರ್ ಬೋರ್ಡ್, ಕ್ಯಾಮೆರಾ ಮಾಡ್ಯುಲ್, ಕನೆಕ್ಟರ್ಸ್, ಲೀಥಿಯಂ ಅಯಾನ್ ಬ್ಯಾಟರಿಗಳ ಬಿಡಿಭಾಗಗಳು ಮತ್ತು ಉಪ ಭಾಗಗಳು ಮತ್ತು ಬ್ಯಾಟಿ ಪ್ಯಾಕ್ಗಳ ಮೇಲೆ ಏಪ್ರಿಲ್ 1ರಿಂದ ಶೇ 2.5ರಷ್ಟು ಆಮದು ಸುಂಕ ಅನ್ವಯವಾಗಲಿದೆ. ಇದರಿಂದ ರಫ್ತುದಾರರ ಮೇಲೆ ಆರ್ಥಿಕ ಹೊರೆಯಾಗಲಿದೆ.

ಗ್ರಾಮೀಣ ಆರ್ಥಿಕತೆಗೆ ಲಾಭವಿಲ್ಲ
ಕೃಷಿ ಕಾಯ್ದೆಗಳ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ವಿವಾದವನ್ನು ಪರಿಹರಿಸುವ ಯಾವುದೇ ಪ್ರಸ್ತಾಪವನ್ನು ಬಜೆಟ್ ಮಾಡಿಲ್ಲ. 2021-22ನೇ ಹಣಕಾಸು ವರ್ಷದಲ್ಲಿ 16.5 ಲಕ್ಷ ಕೋಟಿ ಕೃಷಿ ಸಾಲದ ಗುರಿಯನ್ನು ಹೆಚ್ಚಿಸಲಾಗಿದೆ. ಜತೆಗೆ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಖರೀದಿ ಖಾತರಿ ಮುಂದುವರಿಯಲಿದೆ ಎಂಬ ಭರವಸೆ ನೀಡಲಾಗಿದೆ.

ಬಾಂಡ್ಗಳಿಗೆ ಸಂಕಷ್ಟ
ನೂತನ ಹಣಕಾಸು ವರ್ಷದಲ್ಲಿ 164 ಬಿಲಿಯನ್ ಡಾಲರ್ಗಳಿಗೂ ಅಧಿಕ ಸಾಲ ಯೋಜನೆಯು ಭಾರತದ ಸವರಿನ್ ಬಾಂಡ್ಗಳಿಗೆ ಹೊಡೆತ ನೀಡಿದ್ದು, ಪ್ರಕಟಣೆಯ ಬೆನ್ನಲ್ಲೇ ಕುಸಿತ ಕಂಡಿದೆ. ಹೀಗಾಗಿ ಬಜೆಟ್ ಮಂಡನೆ ಬಳಿಕ ಸಾಕಷ್ಟು ಹೊಡೆತ ಅನುಭವಿಸಿದ ಕ್ಷೇತ್ರಗಳಲ್ಲಿ ಬಾಂಡ್ಗಳು ಸೇರಿಕೊಂಡಿವೆ.












Click it and Unblock the Notifications