RCB: ಇದಪ್ಪಾ ಕ್ರೇಜ್, ಮಹಾಕುಂಭ ಮೇಳದಲ್ಲಿ ಆರ್ಸಿಬಿ ಜೆರ್ಸಿಗೂ ಪವಿತ್ರ ಸ್ನಾನ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಅಂದ್ರೆ ಬರೀ ಹೆಸರಲ್ಲ, ಅದೊಂದು ಎಮೋಷನ್ ಅಂತಾರೆ ಕ್ರಿಕೆಟ್ ಅಭಿಮಾನಿಗಳು. ಇನ್ನು ಐಪಿಎಲ್ ಲೋಕದಲ್ಲಂತೂ ಆರ್ಸಿಬಿಗೆ ದೊಡ್ಡ ಹವಾನೇ ಇದೆ. ಬೇರೆ ಯಾವ ಟೀಂಗೂ ಇಲ್ಲದಷ್ಟು ಕ್ರೇಜ್ ಆರ್ಸಿಬಿಗೆ ಇದೆ. ಸದ್ಯ ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲೂ ಆರ್ಸಿಬಿ ಸದ್ದು ಮಾಡುತ್ತಿದೆ.
ಹೌದು ಭಕ್ತಸಾಗರಕ್ಕೆ ಸಾಕ್ಷಿಯಾಗಿರುವ ಮಹಾಕುಂಭ ಮೇಳದಲ್ಲೂ ಆರ್ಸಿಬಿ....ಆರ್ಸಿಬಿ...ಸದ್ದು ಮಾಡಿದೆ. ಇಲ್ಲಿನ ಗಂಗಾ, ಯಮುನಾ, ನದಿಗಳು ಸೇರುವ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರೆ ಎಲ್ಲ ಪಾಪಗಳು ಕೂಡ ಕಳೆದು ಹೋಗುತ್ತವೆ ಎನ್ನುವ ಧಾರ್ಮಿಕ ನಂಬಿಕೆ ಇದೆ. ಈ ಹಿನ್ನೆಲೆ ಮಹಾಕುಂಭ ಮೇಳಕ್ಕೆ ಹೋಗಿರುವವರು ಇಲ್ಲಿ ಪವಿತ್ರ ಸ್ನಾನ ಮಾಡಿಯೇ ವಾಪಸ್ ಆಗುತ್ತಾರೆ.

ಆರ್ ಸಿಬಿ ಅಭಿಮಾನಿಯೊಬ್ಬರು ಕೂಡ ಮಹಾಕುಂಭಮೇಳಕ್ಕಾಗಿ ಪ್ರಯಾಗ್ರಾಜ್ಗೆ ತೆರಳಿದ್ದಾರೆ. ಈ ಅವರು ಕೂಡ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಆದರೆ ಪ್ರಯಾಗ್ರಾಜ್ನಲ್ಲಿ ಆರ್ಸಿಬಿ ಜೆರ್ಸಿ ತೊಟ್ಟೇ ಹೋಗಿದ್ದ ಆತ, ಜೆರ್ಸಿಯನ್ನೂ ಕೂಡ ಮೂರು ಬಾರಿ ನೀರಿನಲ್ಲಿ ಮುಳುಗಿಸುವ ಮೂಲಕ ಪವಿತ್ರ ಸ್ನಾನ ಮಾಡಿಸಿದ್ದಾರೆ. ಅಲ್ಲಿನ ಸಾಧುವೊಬ್ಬರ ಕೈಯಲ್ಲಿ ಜೆರ್ಸಿಗೆ ಧಾರ್ಮಿಕವಾಗಿ ವಿಧಿವಿಧಾನದ ಮೂಲಕ ಪವಿತ್ರ ಸ್ನಾನ ಮಾಡಿಸಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆರ್ಸಿಬಿ ಅಭಿಮಾನಿಗಳು ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ನಮ್ಮ ತಂಡಕ್ಕೆ ಅಂಟಿದ್ದ ಕಳಂಕವೆಲ್ಲ ತೊಲಗಿದೆ, ಈ ಸಲ ಕಪ್ ನಮ್ದೇ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಆರ್ಸಿಬಿ ತಂಡಕ್ಕಿರುವ ಫ್ಯಾನ್ ಫಾಲೋಯಿಂಗ್ ಕಂಡು ಹಲವರು ಕೆಟ್ಟ ದೃಷ್ಟಿ ಬಿದ್ದಿತ್ತು. ಮಹಾಕುಂಭ ಮೇಳದ ವೇಳೆ ಈ ಪವಿತ್ರ ನೀರಿನಲ್ಲಿ ಮುಳುಗಿದರೆ ಎಲ್ಲ ಪಾಪ ಕರ್ಮಗಳು ದೂರವಾಗುತ್ತೆ ಅಂತಾರೆ. ಆರ್ಸಿಬಿ ಜೆರ್ಸಿ ಕೂಡ ಈ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದಿದೆ. ಹಾಗಾಗಿ ಈ ಸಲ ಕಪ್ ನಮ್ದೇ ಎನ್ನುತ್ತಿದ್ದಾರೆ.
ಕಳೆದ ಬಾರಿಯ ಐಪಿಎಲ್ ಸೀಸನ್ನಲ್ಲಿ ಕಿಂಗ್ ವಿರಾಟ್ ಕೊಹ್ಲಿ ಅವರು ಇದು ಹೊಸ ಅಧ್ಯಾಯ ಎನ್ನುವ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ಎನರ್ಜಿ ತುಂಬಿದ್ದರು. ಆದರೆ, ಎಂದಿನಂತೆ ಕಪ್ ಆರ್ಸಿಬಿ ಕೈಸೇರಲೇ ಇಲ್ಲ. ಆದರೂ ಕ್ರೇಜ್ ಎಂದಿಗೂ ತಗ್ಗಲ್ಲ ಅನ್ನುತ್ತಿದ್ದಾರೆ ಆರ್ಸಿಬಿ ಕಟ್ಟಾಭಿಮಾನಿಗಳು. ಕಪ್ ಗೆಲ್ಲುವುದಕ್ಕಿಂತ ನಮ್ಮ ತಂಡ ಎನ್ನುವುದೇ ಹೆಮ್ಮೆ ಎಂಬ ಭಾವನೆಯಲ್ಲೇ ಅಭಿಮಾನಿಗಳು ಪ್ರತಿ ವರ್ಷವೂ ಆರ್ಸಿಬಿಗೆ ಸಾಥ್ ನೀಡುತ್ತಿದ್ದಾರೆ.

ಮಹಾಕುಂಭ ಮೇಳದಲ್ಲಿ ಧಾರ್ಮಿಕ ಭಾವನೆಯೊಂದಿಗೆ ಭಕ್ತರ ದಂಡು ಸೇರಿದೆ. ಎಲ್ಲರೂ ತಮ್ಮ ಶ್ರೇಯಸ್ಸು ಹಾಗೂ ಒಳಿತಿಗಾಗಿ ಅಲ್ಲಿ ಪವಿತ್ರ ಸ್ನಾನ ಮಾಡಿಕೊಂಡು ಪ್ರಾರ್ಥಿಸುತ್ತಿದ್ದಾರೆ. ಆದರೆ ಆರ್ಸಿಬಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಸಂಗತಿ ನಡೆದಿರಲಿಲ್ಲ. ಇಂದು ಆರ್ಸಿಬಿ ಅಭಿಮಾನಿ ಮಾಡಿರುವ ಈ ಕೆಲಸಕ್ಕೆ ಆರ್ಸಿಬಿ ಬಳಗವೆಲ್ಲ ಫಿದಾ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ಐಪಿಲ್ ಸೀಸ್ನ್ ಹಿನ್ನೆಲೆ ಆರ್ಸಿಬಿ ಮೇಲೆ ಭರವಸೆಯನ್ನೂ ಹುಟ್ಟಿಸಿದೆ. ಈ ಸಲ ಕಪ್ ನಮ್ದೇ ಆಗುತ್ತಾ ನೋಡೋಣ..












Click it and Unblock the Notifications