ಪ್ರಾದೇಶಿಕ ಪಕ್ಷಗಳಿಗೆ ಕುಟುಂಬ ರಾಜಕಾರಣ ಅನಿವಾರ್ಯ: ಸಂದರ್ಶನದಲ್ಲಿ ವೈಎಸ್ ವಿ ದತ್ತ
ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗಿಂತ ಜೆಡಿಎಸ್ ಸುದ್ದಿಯಲ್ಲಿದೆ. ಜೆಡಿಎಸ್ ಪಾಲಿಗೆ ಎಂಟು ಸ್ಥಾನಗಳನ್ನು ಬಿಟ್ಟುಕೊಟ್ಟು, ಕಾಂಗ್ರೆಸ್ ಇಪ್ಪತ್ತು ಸ್ಥಾನಗಳಲ್ಲಿ ಸ್ಪರ್ಧೆ ಮಾಡುತ್ತಿದೆ. ಒಂದು ಕಡೆ ತುಮಕೂರು ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವುದು ದೊಡ್ಡ ಮಟ್ಟದ ಅಸಮಾಧಾನಕ್ಕೆ ಕಾರಣವಾಗಿದ್ದರೆ, ಉತ್ತರ ಕನ್ನಡ ಕ್ಷೇತ್ರವನ್ನು ಬಿಟ್ಟುಕೊಟ್ಟಿರುವುದಕ್ಕೆ ಸಚಿವ ಆರ್.ವಿ.ದೇಶಪಾಂಡೆ ಸಿಟ್ಟಾಗಿದ್ದಾರೆ.
ಇನ್ನು ಮಂಡ್ಯದಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ ನಿಖಿಲ್ ಕಣಕ್ಕೆ ಇಳಿದಿರುವುದರ ಬಗ್ಗೆ ಕಾಂಗ್ರೆಸ್ ನ ಸ್ಥಳೀಯ ಕಾರ್ಯಕರ್ತರ ಸಿಟ್ಟಿಗೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಿಖಿಲ್ ವಿರುದ್ಧ ಪ್ರಚಾರ ನಡೆಯುತ್ತಿದೆ. ಇನ್ನು ಸುಮಲತಾ ಅಂಬರೀಶ್ ಅವರು ಪಕ್ಷೇತರವಾಗಿ ಸ್ಪರ್ಧೆಗೆ ಇಳಿಯುವುದಾಗಿ ಘೋಷಣೆ ಮಾಡಿರುವುದರಿಂದ ಇದೀಗ ಅಖಾಡ ರಂಗೇರಿದೆ.
ಹಾಗಂತ ಸುಮಲತಾ ಅವರ ಪಾಲಿಗೇನೂ ಅನುಕೂಲಕರ ಪರಿಸ್ಥಿತಿ ಇಲ್ಲ. ಇಂಥ ಸನ್ನಿವೇಶದಲ್ಲಿ ಜೆಡಿಎಸ್ ನ ಪರವಾಗಿ ವೈಎಸ್ ವಿ ದತ್ತ ಅವರನ್ನು ಒನ್ ಇಂಡಿಯಾ ಕನ್ನಡದಿಂದ ಮಾತನಾಡಿಸಿ, ಕೆಲವು ಪ್ರಶ್ನೆಗಳನ್ನು ಕೇಳಲಾಗಿದೆ. ಅದಕ್ಕೆ ಅವರು ನೀಡಿದ ಉತ್ತರ ಏನು ಎಂಬುದರ ವಿವರ ಇಲ್ಲಿದೆ.

ಮಂಡ್ಯ, ಹಾಸನದಲ್ಲಿ ಪ್ರಜ್ವಲ್ ಹಾಗೂ ನಿಖಿಲ್ ರನ್ನು ಸ್ಪರ್ಧೆಗೆ ಇಳಿಸಿದ್ದರ ಹಿಂದಿನ ಕಾರಣ ಏನು?
ವೈಎಸ್ ವಿ ದತ್ತ: ಕುಟುಂಬ ರಾಜಕಾರಣವನ್ನು ನಾವು ಕೂಡ ನೈತಿಕವಾಗಿ-ತಾತ್ವಿಕವಾಗಿ ವಿರೋಧಿ ಮಾಡ್ತೀವಿ. ಆದರೆ ನಮ್ಮ ಪಕ್ಷವು ವಿಚಿತ್ರ ಸ್ಥಿತಿಯಲ್ಲಿ ಇದೆ. ಇದು ಪ್ರಾದೇಶಿಕ ಪಕ್ಷ. ವಂಶ ಪಾರಂಪರ್ಯ ರಾಜಕಾರಣ ನಮ್ಮದು ಎಂದು ಗೇಲಿ ಮಾಡುವ ಬೇರೆ ರಾಷ್ಟ್ರೀಯ ಪಕ್ಷಗಳಿಗೆ ವಿನಮ್ರವಾಗಿ ನಾನು ತಿಳಿಸುವುದೇನೆಂದರೆ, ಪ್ರಾದೇಶಿಕ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಹಾಸುಹೊಕ್ಕಾಗಿ ಬಂದಿರುತ್ತದೆ. ನಮಗೆ ವೈಯಕ್ತಿಕ ವರ್ಚಸ್ಸು ಬೇಕಾಗುತ್ತದೆ. ಜೆಡಿಎಸ್ ಗೆ ಆ ವ್ಯಕ್ತಿಗತ ವರ್ಚಸ್ಸು ದೇವೇಗೌಡರಿಂದ ಬಂದಿದೆ. ದೇವೇಗೌಡರ ನಂತರ ಪಕ್ಷದ ಅಸ್ತಿತ್ವ ಇಲ್ಲ ಅಂತ ಈಗಲೇ ಮಾತನಾಡುವ ಹಾಗೆ ಆಗಿದೆ. ನಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲೇ ಬೇಕು. ಇನ್ನು ದೇಶದಲ್ಲಿ ಕೋಮುವಾದಿ ಶಕ್ತಿಗಳನ್ನು ಮಣಿಸುವ ನಿಟ್ಟಿನಲ್ಲಿ ಈ ಚುನಾವಣೆ ನಮಗೆ ಬಹಳ ಮುಖ್ಯವಾಗಿದೆ. ನಾವು (ಜೆಡಿಎಸ್)- ಕಾಂಗ್ರೆಸ್ ಇಬ್ಬರೂ ಗೆಲ್ಲಬೇಕು. ಆದ್ದರಿಂದ ಆಯಾ ಕ್ಷೇತ್ರದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು, ಈ ನಿರ್ಧಾರ ಮಾಡಿದ್ದೇವೆ. ಹೆಚ್ಚು ಸ್ಥಾನ ಗೆಲ್ಲಲು, ಯುವಕರನ್ನು ಸೆಳೆಯಲು ಈ ನಿರ್ಧಾರ ಅನಿವಾರ್ಯವಾಗಿದೆ.

ಇವರಿಬ್ಬರ ಆಯ್ಕೆ ಘೋಷಣೆ ಮಾಡಿದಾಗಿನಿಂದ ಕುಟುಂಬ ರಾಜಕಾರಣ ಎಂಬ ಆಕ್ರೋಶ ಹೆಚ್ಚಾಗಿದೆಯಲ್ಲಾ?
ವೈಎಸ್ ವಿ ದತ್ತ: ಅವರ ಟೀಕೆಯಲ್ಲಿ ನಿಜವಿಲ್ಲ ಅಂತ ಹೇಳುವುದಿಲ್ಲ. ಆದರೆ ಇಲ್ಲಿ ಅದು ಅನಿವಾರ್ಯ ಆಗಿದೆ. ಪ್ರಾದೇಶಿಕ ಪಕ್ಷವು ವ್ಯಕ್ತಿಗತ ರಾಜಕಾರಣದಿಂದ ಹೊರಹೊಮ್ಮ ಬೇಕಾಗಿದೆ. ಕುಟುಂಬ ರಾಜಕಾರಣ ಬೇಡ ಎಂದು ಈ ಹಿಂದೆ ಸಾಮಾನ್ಯ ಕಾರ್ಯಕರ್ತರಿಗೆ ದೇವೇಗೌಡರು ಟಿಕೆಟ್ ನೀಡಿದರು. ಆದರೆ ಗೆಲ್ಲಿಸಲು ಸಾಧ್ಯವಾಗಲಿಲ್ಲ. ಆದರೆ ಈ ಬಾರಿ ನಾವು ಪ್ರಯೋಗ ಮಾಡುವ ಸ್ಥಿತಿಯಲ್ಲಿ ಇಲ್ಲ. ಸಮಾಜವಾದಿ ಪಕ್ಷ, ಡಿಎಂಕೆ, ಟಿಡಿಪಿ, ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ.. ಹೀಗೆ ನಮ್ಮ ದೇಶದ ಯಾವುದೇ ಪ್ರಮುಖ ಪ್ರಾದೇಶಿಕ ಪಕ್ಷಗಳನ್ನು ಗಮನಿಸಿ ಅಲ್ಲೆಲ್ಲ ಕುಟುಂಬ ರಾಜಕಾರಣ ಹಾಸುಹೊಕ್ಕಾಗಿದೆ. ಹಾಗಂತ ಇದು ಸಮರ್ಥನೆ ಅಂದುಕೊಳ್ಳಬೇಡಿ. ಇಲ್ಲಿ ರಾಜಕೀಯ ಸನ್ನಿವೇಶದ ಅನಿವಾರ್ಯ.

ದೇವೇಗೌಡರು ಎಲ್ಲಿಂದ ಸ್ಪರ್ಧೆ ಮಾಡಬಹುದು?
ವೈಎಸ್ ವಿ ದತ್ತ: ತುಮಕೂರಿನಿಂದ ಸ್ಪರ್ಧೆ ಮಾಡುತ್ತಾರೆ. ತುಮಕೂರಿನಲ್ಲಿ ರೇವಣ್ಣ ಸೇರಿದಂತೆ ದೇವೇಗೌಡರ ಕುಟುಂಬದಿಂದ ಹೇಮಾವತಿ ನೀರು ಬಂದಿಲ್ಲ ಎಂಬ ತಪ್ಪು ಭಾವನೆ ಇದೆ. ಆದರೆ ತುಮಕೂರಿಗೆ ಹೇಮಾವತಿ ನೀರು ಬರಲು ದೇವೇಗೌಡರ ಶ್ರಮ ಇದೆ. ಅದನ್ನು ಚುನಾವಣೆ ವೇಳೆ ನಾವು ಮನವರಿಕೆ ಮಾಡಿಕೊಡುತ್ತೇವೆ.

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿಗೆ ಲಾಭ ಆಗಬಹುದು ಎಂಬ ಮಾತಿದೆಯಲ್ಲಾ?
ವೈಎಸ್ ವಿ ದತ್ತ: ಈ ಹಿಂದೆ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದ್ದೆವು. ಇದೇ ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಚುನಾವಣೆ ಪೂರ್ವಭಾವಿಯಾಗಿ ಮೈತ್ರಿ ಮಾಡಿಕೊಂಡಿದ್ದೇವೆ. ನಮ್ಮ (ಜೆಡಿಎಸ್ ಹಾಗೂ ಕಾಂಗ್ರೆಸ್) ಸಾಮಾನ್ಯ ಶತ್ರು ಬಿಜೆಪಿ ಅಂತ ಸ್ಪಷ್ಟ ಆದ ಮೇಲೆ ಎಲ್ಲವೂ ಸರಿ ಹೋಗುತ್ತದೆ. ತಳ ಮಟ್ಟದಲ್ಲಿ ಕಾರ್ಯಕರ್ತರ ಮಧ್ಯೆ ಅಸಮಾಧಾನ ಆಗುವುದಕ್ಕೆ ಇದು ಸ್ಥಳೀಯ ಸಂಸ್ಥೆ ಚುನಾವಣೆ ಅಲ್ಲ. ಇದು ದೆಹಲಿ ಮಟ್ಟದ ಹೋರಾಟ. ಆದ್ದರಿಂದ ತಳ ಮಟ್ಟದಲ್ಲಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ಮಧ್ಯೆ ಒಡಕುಂಟಾಗುತ್ತದೆ ಎಂಬ ನಿರೀಕ್ಷೆ ನಿಜವಾಗುವುದಿಲ್ಲ. ಅವರಿಗೆ ಲಾಭ ಆಗುವ ಪ್ರಶ್ನೆಯೂ ಇಲ್ಲ.

ಈಗಲೇ ಜೆಡಿಎಸ್- ಕಾಂಗ್ರೆಸ್ ಮಧ್ಯೆ ಇಷ್ಟೊಂದು ಪ್ರಮಾಣದಲ್ಲಿ ಅಸಮಾಧಾನ ಕಾಣಿಸಿದೆಯಲ್ಲಾ, ಎಲೆಕ್ಷನ್ ನಂತರ ಏನು?
ವೈಎಸ್ ವಿ ದತ್ತ: ನಾವು ಮೈತ್ರಿ ಮಾಡಿಕೊಳ್ಳಬೇಕು ಅಂದುಕೊಂಡಿದ್ದು ಕಳೆದ ಬಾರಿ ಬಿಜೆಪಿ ಗೆದ್ದ ಹದಿನಾರು ಲೋಕಸಭೆ ಕ್ಷೇತ್ರದಲ್ಲಿ. ಆದರೆ ನಿಜವಾಗಲೂ ಮೈಸೂರಿನಿಂದ ಸಮಸ್ಯೆ ಶುರುವಾಯಿತು. ಮೈಸೂರನ್ನು ಕಾಂಗ್ರೆಸ್ ಗೆ ಉಳಿಸಿಕೊಳ್ಳಲೇ ಬೇಕು ಎಂಬ ಪಟ್ಟು ಕಾಂಗ್ರೆಸ್ ನವರದಾಯಿತು. ನಾವು ಮೈಸೂರು ಬೇಕು ಎಂದು ಕೇಳಿದ್ದೆವು. ಕೊನೆಗೆ ಮೈಸೂರು ಬದಲಾಗಿ ನಮಗೆ ತುಮಕೂರು ಕೊಟ್ಟರು. ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಸಹ ಕೊಟ್ಟರು. ಹಾಗೆ ನೋಡಿದರೆ ನಮಗೆ ಆರು ಸ್ಥಾನ ಕೊಟ್ಟಿದ್ದರೂ ಆಗಿತ್ತು. ಆದರೆ ಅವರು ಎಂಟು ಸ್ಥಾನಗಳನ್ನು ಕೊಟ್ಟ ಮೇಲೆ ಬೇಡ ಅಂತ ಹೇಳುವುದು ಹೇಗೆ?

ಸುಮಲತಾ ಅವರ ಸ್ಪರ್ಧೆ ಘೋಷಣೆ ಮಾಡಿದಾಗ ರೇವಣ್ಣ, ಕುಮಾರಸ್ವಾಮಿ ನೀಡಿದ ಹೇಳಿಕೆಗಳು ಜೆಡಿಎಸ್ ಗೆ ಡ್ಯಾಮೇಜ್ ಮಾಡಬಹುದಾ?
ವೈಎಸ್ ವಿ ದತ್ತ: ಚುನಾವಣೆಯಲ್ಲಿ ಇಂಥ ಮಾತು ತೊಂದರೆ ಮಾಡುತ್ತದೆ ನಿಜ. ಆದರೆ ಬರುಬರುತ್ತಾ, ದಿನದಿನಕ್ಕೆ ವಿಷಯಗಳು ಬೇರೆ ಆಗುತ್ತಾ ಹೋಗುತ್ತದೆ. ರೇವಣ್ಣ ಹೇಳಿದ್ದನ್ನೇ ಕೊನೆಯವರೆಗೆ ಎಳೆದುಕೊಂಡು ಮತದಾರರು ಹೋಗಲ್ಲ. ಆ ಕ್ಷಣದಲ್ಲಿ ಭಾವೋದ್ವೇಗ ಇರುತ್ತದೆ. ಆದರೆ ಮತದಾರರು ತನ್ನ ಕುಟುಂಬದವರ ಜತೆ ಊಟ ಮಾಡುತ್ತಾ, ಎಲಡಿಕೆ ಹಾಕಿ ಸಮಾಧಾನವಾಗಿ ಕೂತು, ತನಗೆ ಯಾರು ಒಳಿತು ಮಾಡಬಲ್ಲರು ಎಂದು ಯೋಚಿಸಿ ತೀರ್ಮಾನಿಸುತ್ತಾರೆ.

ಹಾಸನದಲ್ಲಿ ಈಗ ಎ ಮಂಜು ಬಿಜೆಪಿಯಿಂದ ಕಣದಲ್ಲಿದ್ದಾರೆ. ಪ್ರಜ್ವಲ್ ಗೆ ಸ್ಪರ್ಧೆ ಹೆಚ್ಚಾಯಿತು ಅನಿಸಲ್ವಾ?
ವೈಎಸ್ ವಿ ದತ್ತ: ಇದು ನಿರೀಕ್ಷಿತ ನಡೆಯೇ ಆಗಿತ್ತು. ಅವರು ಮೊದಲು ಬಿಜೆಪಿಯಲ್ಲೇ ಇದ್ದರು. ಇದರಿಂದ ನಮಗೆ ಯಾವುದೇ ರೀತಿಯಲ್ಲಿ ಆಘಾತ ಆಗಿಲ್ಲ. ಬಿಜೆಪಿಗೆ ಕೂಡ ಹಾಸನದಲ್ಲಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲು ಯಾರೂ ಇರಲಿಲ್ಲ. ಪೂರ್ವಾಶ್ರಮದಲ್ಲಿ ಮಂಜು ಬಿಜೆಪಿಯಲ್ಲಿದ್ದರು. ಮತ್ತೆ ಅವರನ್ನು ಕರೆದುಕೊಂಡು ಬಂದಿದ್ದಾರೆ ಅಷ್ಟೇ. ಹಾಸನ ರಾಜಕಾರಣ ನೋಡಿಕೊಂಡು ಬಂದಿರುವುದರಿಂದ ಏನು ಹೇಳಬಹುದು ಅಂದರೆ, ಅಲ್ಲಿ ಈ ವರೆಗೆ ಬಿಜೆಪಿಯನ್ನು ಅಪ್ಪಿಕೊಂಡಿಲ್ಲ. ಹಾಸನ ಲೋಕಸಭಾ ಕ್ಷೇತ್ರದಾದ್ಯಂತ ಬಿಜೆಪಿ ಪ್ರಬಲ ಆಗಲು ಸಾಧ್ಯವೂ ಇಲ್ಲ. ಹೋದ ಬಾರಿ ಒಂದು ವಿಧಾನಸಭೆ ಕ್ಷೇತ್ರದಲ್ಲೇನೋ ಬಿಜೆಪಿ ಗೆದ್ದಿತ್ತು. ಈ ಹಿಂದೊಮ್ಮೆ ಮಂಜು ಅವರೇ ಬಿಜೆಪಿಯಿಂದ ಶಾಸಕರಾಗಿದ್ದರು. ಒಂದೋ ಎರಡೋ ಕ್ಷೇತ್ರದಲ್ಲಿ ಬಿಜೆಪಿಗೆ ಮತ ಬರಬಹುದೇನೋ! ಆದರೆ ಬಿಜೆಪಿ ಗೆಲ್ಲಲಾರದು.

ಕಾಂಗ್ರೆಸ್ ನಿಂದ ಯಾವ ಪ್ರಮುಖ ನಾಯಕರೂ ಜೆಡಿಎಸ್ ಪರ ಪ್ರಚಾರಕ್ಕೆ ಬಂದಿಲ್ಲ ಏಕೆ?
ವೈಎಸ್ ವಿ ದತ್ತ: ಇದು ತುಂಬ ಬೇಗ ಕೇಳುತ್ತಿದ್ದೀರಿ. ಏಕೆಂದರೆ ಇನ್ನೂ ಬಹಳ ಸಮಯ ಇದೆ. ಹಾಸನದ ವಿಚಾರಕ್ಕೆ ಬರುವುದಾದರೆ ರೇವಣ್ಣ ಅವರು ಖುದ್ದಾಗಿ ಸಿದ್ದರಾಮಯ್ಯರನ್ನು ಆಹ್ವಾನ ಮಾಡಲಿದ್ದಾರೆ. ಹಾಸನ ಕ್ಷೇತ್ರ ವ್ಯಾಪ್ತಿಗೆ ಬರುವ ಕಡೂರಿನಲ್ಲಿ ಕಾಂಗ್ರೆಸ್ ಸಭೆ ಕರೆದು, ಸದ್ಯದಲ್ಲೇ ಚರ್ಚೆ ನಡೆಸಲಿದ್ದೇವೆ. ನಮ್ಮ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರನ್ನು ಕರೆದುಕೊಂಡು ಹೋಗಿ ಮನವಿ ಮಾಡುತ್ತೇವೆ. ಅದೇ ರೀತಿ ಜೆಡಿಎಸ್ ಕೂಡ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತದೆ. ಒಟ್ಟಾರೆ ಎರಡೂ ಪಕ್ಷಗಳ ಮುಖಂಡರು, ನಾಯಕರು ಮತ ಕೇಳಲಿದ್ದೇವೆ. ಎರಡೂ ಪಕ್ಷಗಳ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಚುನಾವಣೆ ಮಾಡುತ್ತೇವೆ.
-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications