ಮೈಸೂರು ದಸರಾ ವಿಶೇಷ; ದಸರಾ ಗಜಪಡೆ ಸುಂದರವಾಗಿ ಕಾಣುವುದು ಹೇಗೆ?

ಐತಿಹಾಸಿಕ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಅಂಬಾರಿ ಹೊತ್ತು ಸಾಗುವ ಅಭಿಮನ್ಯು ಸೇರಿದಂತೆ 14 ಆನೆಗಳು ನಮಗೆ ಸರ್ವ ಅಲಂಕೃತವಾಗಿ ಕಾಣುತ್ತವೆ. ಅವು ಅಷ್ಟೊಂದು ಆಕರ್ಷಣೀಯವಾಗಿ ಕಾಣಲು ಅವುಗಳ ಮೇಲೆ ಹೊದಿಸುವ ಹೊದಿಕೆ, ತೊಡಿಸುವ ಆಭರಣಗಳು, ಮತ್ತು ಮುಖ, ಕೈಕಾಲು, ಸೊಂಡಿಲಿನ ಮೇಲೆ ಬಿಡಿಸುವ ಚಿತ್ತಾರಗಳು ಪ್ರಮುಖವಾಗಿವೆ.

ಹಾಗೆನೋಡಿದರೆ ಜಂಬೂಸವಾರಿ ಎನ್ನುವುದು ಬರೀ ಆನೆಗಳ ಮೆರವಣಿಗೆಯಲ್ಲ. ಇಲ್ಲಿ ಪ್ರತಿಯೊಂದು ಕೂಡಾ ವಿಶಿಷ್ಟ, ವಿಭಿನ್ನ, ವಿಶೇಷವಾದುದ್ದಾಗಿದೆ. ದಸರಾ ದಿನದಂದು ನಮಗೆ ಸರ್ವ ಅಲಂಕಾರಗಳಿಂದ ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕುವ ಗಜಪಡೆಗಳ ಜಂಬೂ ಸವಾರಿ ಕಣ್ಣಿಗೆ ಹಬ್ಬವನ್ನುಂಟು ಮಾಡಬೇಕಾದರೆ ಅದರ ಹಿಂದೆ ದೊಡ್ಡ ತಂಡ ಕೆಲಸ ಮಾಡುತ್ತದೆ.

ಗಜಪಡೆಗೆ ಅಲಂಕಾರ ಮಾಡುವವರು, ತಾಲೀಮು ನಡೆಸುವವರು, ಆಭರಣ ತೊಡಿಸುವವರು, ಸೇರಿದಂತೆ ಅದಕ್ಕೆ ಬೇಕಾದ ಅಗತ್ಯ ವಸ್ತುಗಳು ಮತ್ತು ಆಹಾರಗಳ ಸಿದ್ಧತೆ ಮಾಡುವವರ ಶ್ರಮ ಅಷ್ಟಿಷ್ಟಲ್ಲ. ಜತೆಗೆ ಗಜಪಡೆಯನ್ನು ಸುಂದರಗೊಳಿಸುವುದು ಕೂಡ ಸುಲಭದ ಕೆಲಸವಲ್ಲ. ಅದರ ಹಿಂದೆ ಶ್ರಮ ಜೀವಿಗಳ ದೊಡ್ಡದಂಡೇ ಸದ್ದಿಲ್ಲದೆ ಕೆಲಸ ಮಾಡುತ್ತಿರುತ್ತದೆ.

ಬೆನ್ನಮೇಲೆ ಹೊದಿಕೆ ತಯಾರಿಸುವ ಮಾವುತರಿಂದ ಆರಂಭವಾಗಿ ಚಿತ್ರ ಬಿಡಿಸುವ ಕಲಾವಿದರ ತನಕ ಪ್ರತಿಯೊಬ್ಬರ ಶ್ರಮವೂ ಶ್ಲಾಘನೀಯ. ಅವರೆಲ್ಲರ ಶ್ರಮದಿಂದಲೇ ಜಂಬೂಸವಾರಿ ಪ್ರತಿವರ್ಷವೂ ಯಶಸ್ವಿಯಾಗಿ ನಡೆದು ದೇಶ ವಿದೇಶಗಳ ಗಮನಸೆಳೆಯಲು ಸಾಧ‍್ಯವಾಗಿದೆ.

ದಸರಾ ಜಂಬೂ ಸವಾರಿಯಲ್ಲಿ 'ಅಭಿಮನ್ಯು' ಆನೆ ಚಿನ್ನದ ಅಂಬಾರಿ ಹೊತ್ತು ಸಾಗುವ ದೃಶ್ಯ ನಮ್ಮ ಕಣ್ಮನ ಸೆಳೆಯುತ್ತದೆ. ಅದನ್ನು ಹೊರಲು ಅನುಕೂಲವಾಗುವಂತೆ ಬೆನ್ನ ಮೇಲೆ ಹೊದಿಸಲಾಗುವ ಹೊದಿಕೆಯಾದ ಗಾದಿ, ನಮ್ದಾ, ಛಾಪು ಯಾವುದೂ ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ ಆದರೆ ಇವುಗಳೆಲ್ಲವನ್ನೂ ಹೊಲಿದು ತಯಾರು ಮಾಡುವುದು ಸುಲಭದ ಕೆಲಸವಲ್ಲ. ಇದನ್ನು ಎಲ್ಲರಿಂದಲೂ ತಯಾರು ಮಾಡಲು ಸಾಧ್ಯವಿಲ್ಲ. ಅದರಲ್ಲಿ ನಿಪುಣ ಹೊಂದಿದ ಕೆಲವರು ಮಾತ್ರ ಮಾಡುತ್ತಾರೆ.

ಗಾದಿ, ನಮ್ದಾ ತಯಾರಿ ಜಾಣ್ಮೆಯ ಕೆಲಸ

ಗಾದಿ, ನಮ್ದಾ ತಯಾರಿ ಜಾಣ್ಮೆಯ ಕೆಲಸ

ಆನೆ ಬೆನ್ನಿನ ಮೇಲೆ ಅದಕ್ಕೆ ಚುಚ್ಚದಂತೆ, ನೋವಾಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಗಾದಿ, ನಮ್ದಾ, ಛಾಪುನ್ನು ಬಳಸಲಾಗುತ್ತಿದ್ದು, ಇದನ್ನು ದಬ್ಬಳ ಸೂಜಿಯಿಂದ ಹೊಲಿದು ತಯಾರು ಮಾಡಲಾಗುತ್ತದೆ. ಆನೆಗೆ ನೋವಾಗದಂತೆ ಮೆತ್ತನೆ ಹೊದಿಕೆಯನ್ನು ಅದರ ಬೆನ್ನಿನ ಅಳತೆಗೆ ತಕ್ಕಂತೆ ಅಳೆದು ತಯಾರು ಮಾಡುವುದು ಒಂದು ಜಾಣ್ಮೆಯ ಕೆಲಸವಾಗಿದೆ. ಆನೆಗಳ ಬೆನ್ನ ಮೇಲೆ ಗಾದಿಯನ್ನಿಟ್ಟು ಕಟ್ಟಿ ಅದರ ಮೇಲೆ ಹೊದಿಕೆಯಾದ ನಮ್ದಾ ಹಾಕಲಾಗುತ್ತದೆ.

ಇದರಿಂದ ಆನೆಗಳು ಸುಂದರವಾಗಿ ಕಾಣುತ್ತವೆ. ಗಾದಿಯು ಸುಮಾರು 6 ಅಡಿ ಉದ್ದ ಮತ್ತು 5 ಅಡಿ ಅಗಲವಿದ್ದು ದಪ್ಪ ಸುಮಾರು ಒಂದೂವರೆ ಅಡಿಯಿರುತ್ತದೆ. ಗಾದಿಯನ್ನು ಬೆನ್ನು ಮೇಲೆ ಕಟ್ಟಿ ಅದರ ಮೇಲೆ ಅಂಬಾರಿಯನ್ನು ಇಡಲಾಗುತ್ತದೆ. ಗಾದಿಯು ಅಂಬಾರಿ ಬೆನ್ನಿಗೆ ಒತ್ತುವುದನ್ನು ತಡೆಯುವುದಲ್ಲದೆ, ಬೆನ್ನ ಮೇಲೆ ಸಮರ್ಪಕವಾಗಿ ನಿಲ್ಲಲು ಸಹಾಯ ಮಾಡುತ್ತದೆ.

ಒಡಕೆ, ಭತ್ತದ ಹುಲ್ಲಿನಿಂದ ತಯಾರಿ

ಒಡಕೆ, ಭತ್ತದ ಹುಲ್ಲಿನಿಂದ ತಯಾರಿ

ಗಾದಿಗೆ ಉಪಯೋಗಿಸುವ ಒಡಕೆ ಹುಲ್ಲನ್ನು ಕೆರೆಯ ಬದುಗಳಿಂದ ತರಲಾಗುತ್ತದೆ. ಕೆರೆಯ ಬದುಗಳಲ್ಲಿ ಒಡಕೆ ಹುಲ್ಲು ಕಬ್ಬಿನಂತೆ ದಷ್ಠಪುಷ್ಠವಾಗಿ ಬೆಳೆದಿರುತ್ತದೆ. ಈ ಹುಲ್ಲನ್ನು ತಂದು ಒಣಗಿಸಿ ಇದರೊಂದಿಗೆ ಭತ್ತದ ಹುಲ್ಲನ್ನು ಸೇರಿಸಿ ಗೋಣಿ ಚೀಲದಿಂದ ಹೊಲಿದು ಗಾದಿಯನ್ನು ತಯಾರಿಸಲಾಗುತ್ತದೆ. ದಸರಾದ ಜಂಬೂಸವಾರಿಗೆ ಗಜಪಡೆಗಳನ್ನು ತಯಾರಿ ಮಾಡುವ ಕೆಲಸ ಸುಲಭದಲ್ಲ. ಅದರ ಹಿಂದೆ ಶ್ರಮ ಮತ್ತು ಜಾಣ್ಮೆಯ ಕೆಲಸಗಳಿವೆ. ಅವುಗಳನ್ನು ಕಲಿತವರು ಮುಂದಿನ ತಲೆಮಾರಿಗೆ ಕಲಿಸಿಕೊಂಡು ಹೋಗುತ್ತಿದ್ದಾರೆ. ಇದರಿಂದ ಪ್ರತಿವರ್ಷವೂ ಜಂಬೂಸವಾರಿ ಯಾವುದೇ ತೊಂದರೆಯಿಲ್ಲದೆ ಸಾಂಗವಾಗಿ ಸಾಗಲು ಸಾಧ್ಯವಾಗಿದೆ.

ಆನೆಗೆ ಏಳು ಆಕರ್ಷಕ ಆಭರಣ

ಆನೆಗೆ ಏಳು ಆಕರ್ಷಕ ಆಭರಣ

ಇದೆಲ್ಲದರ ನಡುವೆ ಗಜಪಡೆ ಆಕರ್ಷಕವಾಗಿ ಕಾಣಬೇಕಾದರೆ ಅದಕ್ಕೆ ತೊಡಿಸುವ ಆಭರಣಗಳ ಬಗ್ಗೆ ಹೇಳಲೇ ಬೇಕಾಗುತ್ತದೆ. ಗಜಪಡೆಗೆ ಸುಂದರವಾಗಿ ಕಾಣುವ ದೃಷ್ಟಿಯಿಂದ ಮುಂದಲೆ ಪಟ್ಟಿ, ಕತ್ತಿನಗಂಟೆ, ಪಾದದ ಗಂಟೆ, ಕತ್ತಿನ ಸರ, ಸಿಂಗೋಟಿ, ಚಮರಿಬಾಲ, ಛತ್ರಿಗಳನ್ನು ಬಳಸಲಾಗುತ್ತದೆ. ಈ ಅಲಂಕಾರಿಕ ವಸ್ತುಗಳನ್ನು ಮಾವುತರು ಮತ್ತು ಕಾವಾಡಿಗಳು ತೊಡಿಸಿ ಸಿಂಗಾರಗೊಳಿಸುತ್ತಾರೆ. ಈಗ ಮಾಡಲಾಗುತ್ತಿರುವ ಈ ಅಲಂಕಾರದ ಆಭರಣವನ್ನು 2013ರ ದಸರಾ ಸಂದರ್ಭದಲ್ಲಿ ಕೇರಳದ ತ್ರಿಶೂರ್ ನಿಂದ ತರಿಸಲಾಗಿದ್ದು ಇವು ಸ್ವರ್ಣ ಲೇಪನವನ್ನು ಹೊಂದಿವೆ. ಈ ವಿಶೇಷ ಆಭರಣದ ಪ್ರಾಯೋಜಕತ್ವವನ್ನು ಸ್ಟೇಟ್ ಬ್ಯಾಂಕ್ ವಹಿಸಿಕೊಂಡಿತ್ತು.

ಗಜಪಡೆಗಳತ್ತ ಮಹಾರಾಜರ ಮುತುವರ್ಜಿ

ಗಜಪಡೆಗಳತ್ತ ಮಹಾರಾಜರ ಮುತುವರ್ಜಿ

ಇವತ್ತು ದಸರಾ ಜಂಬೂಸವಾರಿಯ ರೂವಾರಿಗಳಾದ ಗಜಪಡೆಯ ಮೇಲ್ವಿಚಾರಣೆಯನ್ನು ಅರಣ್ಯ ಇಲಾಖೆ ವಹಿಸಿಕೊಂಡು ಜಂಬೂಸವಾರಿಗೆ ಬೇಕಾದ ತಾಲೀಮನ್ನು ಅರಣ್ಯ ಅಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಆದರೆ ಹಿಂದಿನ ಕಾಲದಲ್ಲಿ ಖುದ್ದು ಮಹಾರಾಜರೇ ನೋಡಿಕೊಂಡು ಯಾವುದೇ ರೀತಿಯ ತೊಂದರೆಯಾಗದಂತೆ ದಸರಾ ಜಂಬೂಸವಾರಿಯನ್ನು ನಡೆಸುತ್ತಿದ್ದರು ಎಂಬ ಮಾಹಿತಿ ಇತಿಹಾಸದಿಂದ ತಿಳಿದು ಬರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+