ಜುಲೈ 31ರೊಳಗೆ ಮೈತ್ರಿ ಸರಕಾರ ಕೆಡವಲು ಅಮಿತ್ ಶಾ ಸೂಚನೆ?!
Recommended Video
ಕರ್ನಾಟಕದಲ್ಲಿ ಸರಕಾರ ಕೆಡವಲು ದಿನ ನಿಗದಿ ಆಗಿದೆಯಾ? ಸ್ವತಃ ಅಮಿತ್ ಶಾ ಈ ಬಗ್ಗೆ ಸೂಚನೆ ನೀಡಿದ್ದಾರಾ? ಮುಂಗಾರು ಅಧಿವೇಶನ ಮುಗಿಯುತ್ತಿದ್ದಂತೆ ಕೆಲ ದಿನಗಳಿಗೆ ಕರ್ನಾಟಕದಲ್ಲಿ ಸರಕಾರ ಬೀಳುತ್ತದಾ ಎಂಬ ಪ್ರಶ್ನೆಗಳು ಹರಿದಾಡುತ್ತಿವೆ. ಬಿಜೆಪಿಯ ಆಂತರಿಕ ಮೂಲಗಳ ಪ್ರಕಾರ ಜುಲೈ 31ನೇ ತಾರೀಕಿಗೆ ಡೆಡ್ ಲೈನ್ ನೀಡಲಾಗಿದೆ ಎಂಬುದು ಸದ್ಯದ ಮಾಹಿತಿ.
ಈ ಮಧ್ಯೆ ಕರ್ನಾಟಕದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆ ಕೂಡ ಬಹುತೇಕ ಪಕ್ಕಾ ಆಗಿದೆ. ದಲಿತ ನಾಯಕರೊಬ್ಬರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತರುವ ಹಾಗೂ ಮುಂದೆ ಅವರನ್ನೇ ಮುಖ್ಯಮಂತ್ರಿ ಹುದ್ದೆಯಲ್ಲಿ ಕೂರಿಸಲು ದೆಹಲಿ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದ್ದು, ಇದಕ್ಕೆ ಸ್ಥಳೀಯ ಮಟ್ಟದಲ್ಲಿ ಆರೆಸ್ಸೆಸ್ ನಾಯಕರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಆದರೆ, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಆಗಲಿ ಎಂಬುದೇ ಬಿಜೆಪಿ ಹೈ ಕಮಾಂಡ್ ನಿರೀಕ್ಷೆಯಾದ್ದರಿಂದ ನಾಯಕತ್ವದಲ್ಲಿ ತಕ್ಷಣಕ್ಕೆ ಬದಲಾವಣೆ ಮಾಡುವುದು ಬೇಡ ಎಂಬ ಸಲಹೆ ಬಂದಿದೆ. ಒಂದು ವೇಳೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವುದಿಲ್ಲ ಎಂದಾದರೆ ಲಿಂಗಾಯತ ಸಮಾಜದ ಮತಗಳು ಬಿಜೆಪಿಗೆ ಬಾರದಿರುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕೆ ನಾಯಕತ್ವ ಬದಲಾವಣೆ ಸದ್ಯಕ್ಕೆ ಇಲ್ಲ ಎಂಬ ಸಂದೇಶ ರವಾನಿಸಲಾಗಿದೆ.

ಡಿಸೆಂಬರ್ ನೊಳಗೆ ಚುನಾವಣೆ ನಡೆಸಬೇಕು ಎಂಬ ಲೆಕ್ಕಾಚಾರ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತವನ್ನು ತಂದು, ಈ ವರ್ಷದ ಡಿಸೆಂಬರ್ ನೊಳಗೆ ಚುನಾವಣೆ ನಡೆಸಬೇಕು ಎಂಬುದು ಸದ್ಯಕ್ಕೆ ಬಿಜೆಪಿ ವರಿಷ್ಠರ ಲೆಕ್ಕಾಚಾರ. ಅದಕ್ಕೂ ಮುನ್ನ ಕಾಂಗ್ರೆಸ್- ಜೆಡಿಎಸ್ ನ ಪ್ರಮುಖ ನಾಯಕರು ಕೆಲವರು ಬಿಜೆಪಿ ಸೇರುವುದು ಖಾತ್ರಿ ಆಗಿದೆ. ಈಗಾಗಲೇ ಬಿಜೆಪಿ ಸೇರಲು ಸಿದ್ಧರಾಗಿರುವವರಿಗೆ ಸ್ವಲ್ಪ ಕಾಲ ಕಾಯುವಂತೆ ತಿಳಿಸಲಾಗಿದೆ.

ಜೆಡಿಎಸ್- ಕಾಂಗ್ರೆಸ್ ಕಿತ್ತಾಡಿಕೊಳ್ಳುವುದು ಜನರು ನೋಡಬೇಕು
ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳು ತಾವಾಗಿಯೇ ಕಿತ್ತಾಡುವುದು ಜನರು ನೋಡುವಂತಾಗಬೇಕು. ಎರಡೂ ಪಕ್ಷಗಳ ಬಗ್ಗೆ ಹೇವರಿಕೆ ಹುಟ್ಟಿದ ಮೇಲೆ ಈ ಸರಕಾರವನ್ನು ಬೀಳಿಸಿ, ಆ ನಂತರ ರಾಷ್ಟ್ರಪತಿ ಆಡಳಿತವನ್ನು ಹೇರಿ, ಕೆಲ ತಿಂಗಳಲ್ಲಿ ಚುನಾವಣೆಗೆ ಹೋದರೆ ಬಿಜೆಪಿಗೆ ಅನುಕೂಲ ಆಗಲಿದೆ ಎಂಬುದು ಲೆಕ್ಕಾಚಾರ.

ಜೆಡಿಎಸ್ ಅನ್ನು ಹತ್ತು ಸ್ಥಾನದೊಳಗೆ ಕಟ್ಟಿ ಹಾಕಲು ತಂತ್ರ
ಇನ್ನು ಈ ಬಾರಿ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಮೇಲೆ ಕಣ್ಣಿಟ್ಟಿರುವ ಅಮಿತ್ ಶಾ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹತ್ತಕ್ಕಿಂತ ಹೆಚ್ಚು ಸ್ಥಾನದಲ್ಲಿ ಜಯಿಸದಂತೆ ನೋಡಿಕೊಳ್ಳಬೇಕು, ಅದಕ್ಕಾಗಿ ಬೇಕಾದ ಎಲ್ಲ ನೆರವು ನಾವು ನೀಡಲು ಸಿದ್ಧ ಎಂದು ತಿಳಿಸಿರುವುದಾಗಿ ಮೂಲಗಳು ಖಚಿತ ಪಡಿಸಿವೆ.

ಹಳೇ ಮೈಸೂರು ಭಾಗದಲ್ಲಿ ಹೊಡೆತ ನೀಡಲು ಸಿದ್ಧತೆ
ಕಾಂಗ್ರೆಸ್ ಕಡೆಯಿಂದ ಸಿದ್ದರಾಮಯ್ಯ ಮತ್ತು ಬೆಂಬಲಿಗರನ್ನು ತಟಸ್ಥರಾಗಿರುವಂತೆ ನೋಡಿಕೊಳ್ಳುವುದು, ಕೆಲವರನ್ನು ಐಟಿ, ಇಡಿ ಮೂಲಕ ಕಟ್ಟಿ ಹಾಕುವುದು ಯೋಜನೆಯ ಭಾಗವಾಗಿದೆ. ಮುಖ್ಯವಾಗಿ ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್-ಕಾಂಗ್ರೆಸ್ ಗೆ ಭಾರೀ ಹೊಡೆತ ನೀಡಲು ಸ್ಕೆಚ್ ರೆಡಿಯಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಸಾಗಿದರೆ ಅಮಿತ್ ಶಾ ಸೂಚನೆಯಂತೆ ಜುಲೈ 31ನೇ ತಾರೀಕಿನೊಳಗೆ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರ ಬೀಳುತ್ತದೆ.












Click it and Unblock the Notifications