ಚುನಾವಣೆ ವಿಶೇಷ: ರಾಜಕೀಯ ತಂತ್ರ-ಪ್ರತಿತಂತ್ರ ಫಲಿಸುತ್ತಾ?
ಮುಂದಿನ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿವೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಹಠಕ್ಕೆ ಬಿದ್ದಂತೆ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ತಂತ್ರ ಪ್ರತಿತಂತ್ರ ಆರಂಭಿಸಿವೆ. ಈ ವಿಚಾರದಲ್ಲಿ ಜೆಡಿಎಸ್ ಕೂಡ ಹಿಂದೆ ಬಿದ್ದಿಲ್ಲ. ಕನ್ನಡದ ಜತೆಗೆ ಅಭಿವೃದ್ಧಿ ಮಂತ್ರ ಪಠಿಸುತ್ತಾ ಜನರ ಮುಂದೆ ಹೊರಟಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಏನೇ ಆಗಲಿ ಕಾಂಗ್ರೆಸ್ಅನ್ನು ಅಧಿಕಾರಕ್ಕೆ ತಂದೇ ತೀರಬೇಕು ಎಂಬ ಹುಮ್ಮಸ್ಸಿನಲ್ಲಿದ್ದಾರೆ. ರಾಜ್ಯದಲ್ಲಿ ರಾಹುಲ್ ಗಾಂಧಿ ಅವರ ಜೋಡೋ ಯಾತ್ರೆ ಯಶಸ್ಸು ಕಂಡ ಹಿನ್ನಲೆಯಲ್ಲಿ ಆಡಳಿತ ಪಕ್ಷ ಬಿಜೆಪಿಯನ್ನು ಮಣಿಸಲು ತಂತ್ರ ಶುರು ಮಾಡಿದ್ದಾರೆ. ಬರೀ ಪ್ರಚಾರ, ಸಮಾವೇಶಗಳ ನಡುವೆ ರಾಜಕೀಯ ದಾಳವನ್ನು ಎಸೆಯುತ್ತಿದ್ದಾರೆ. ಕಾಂಗ್ರೆಸ್ನಲ್ಲಿದ್ದ ಕೆಲವು ಪ್ರಭಾವಿ ಮುಖಂಡರು ಬಿಜೆಪಿಗೆ ಸೇರಿ ಸಚಿವರಾಗಿದ್ದಾರೆ. ಈ ನಡುವೆ ತುಮಕೂರಿನ ಪ್ರಭಾವಿ ನಾಯಕ ಮುದ್ದಹನುಮೇಗೌಡರು ಸೇರಿದಂತೆ ಕೆಲವು ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಈಗಾಗಲೇ ಬಿಜೆಪಿ ವಿರುದ್ಧ ಹೋರಾಟ ಮಾಡಿ ಸರ್ಕಾರದ ಬಗ್ಗೆ ಜನರಲ್ಲಿ ಅವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರೂ ಕೂಡ ಮುಂದಿರುವ ಆರು ತಿಂಗಳಲ್ಲಿ ಏನು ಬೇಕಾದರೂ ಆಗಬಹುದು. ಚುನಾವಣೆಯಲ್ಲಿ ಗೆಲುವು ಕಾಂಗ್ರೆಸ್ಗೆ ಪ್ರಮುಖವಾಗಿರುವುದರಿಂದ ಈಗ ಬಿಜೆಪಿಯತ್ತ ಹೋಗುವ ಮುಖಂಡರನ್ನು ಉಳಿಸಿಕೊಳ್ಳುವುದರ ಜತೆಗೆ ಈಗಾಗಲೇ ಬಿಜೆಪಿಗೆ ಹೋಗಿರುವ ನಾಯಕರನ್ನು ಮರಳಿ ಪಕ್ಷಕ್ಕೆ ಕರೆ ತರುವ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಿಂತನೆ ಮಾಡಿದ್ದಾರೆ. ಹೀಗಾಗಿಯೇ ಅವರು ವಲಸಿಗರಿಗೆ ಮುಕ್ತ ಆಹ್ವಾನ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಪಕ್ಷದೊಳಗೆ ಯಾವ ರೀತಿಯಲ್ಲಿ ಚರ್ಚೆಗೆ ಗ್ರಾಸವಾಗುತ್ತದೆಯೋ ಗೊತ್ತಿಲ್ಲ. ಪಕ್ಷದಿಂದ ಬಿಟ್ಟು ಹೋದವರನ್ನು ಯಾವುದೇ ಕಾರಣಕ್ಕೂ ಸೇರಿಸಿಕೊಳ್ಳಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಬ್ಬರಿಸಿದ್ದರು. ಇದೀಗ ಡಿಕೆಶಿ ಅವರ ನಡೆ ಅಚ್ಚರಿಗೆ ಕಾರಣವಾಗುತ್ತಿದೆ.

ಅಧಿಕಾರ ಹಿಡಿಯುವ ಕನಸಲ್ಲಿ ಕುಮಾರಸ್ವಾಮಿ
ಇದೆಲ್ಲದರ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಹೊರಗಿಟ್ಟು ತಾವು ಅಧಿಕಾರ ಹಿಡಿಯಬೇಕೆಂಬ ಕನಸು ಜೆಡಿಎಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರದ್ದಾಗಿದೆ. ಹಾಗಾಗಿ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಪಕ್ಷದಲ್ಲಿದ್ದ ಪ್ರಭಾವಿ ನಾಯಕರ ಪೈಕಿ ಕೆಲವರು ಮುನಿಸಿಕೊಂಡು ಪಕ್ಷದಿಂದ ಹೊರ ಹೋಗುವ ತೀರ್ಮಾನದಲ್ಲಿದ್ದಾರೆ. ಅವರನ್ನು ಹೇಗಾದರೂ ಮಾಡಿ ಪಕ್ಷದಲ್ಲಿಯೇ ಉಳಿಸಿಕೊಳ್ಳಬೇಕೆಂಬ ನಿರ್ಧಾರಕ್ಕೆ ಬಂದಿರುವ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡರು ತಾವೇ ಖುದ್ದು ಅಖಾಡಕ್ಕಿಳಿದಿದ್ದು, ಪಕ್ಷದಿಂದ ಒಂದು ಕಾಲು ಹೊರ ಇಟ್ಟಿದ್ದ ಜಿ.ಟಿ.ದೇವೇಗೌಡರೊಂದಿಗೆ ಸಂಧಾನ ನಡೆಸಿ ಅವರನ್ನು ಪಕ್ಷದಲ್ಲಿಯೇ ಉಳಿಯುವಂತೆ ಮಾಡಿದ್ದಾರೆ.

ಜೆಡಿಎಸ್ಗೆ ಬಿಜೆಪಿ-ಕಾಂಗ್ರೆಸ್ ಎದುರಿಸುವ ಸವಾಲು
ಹಾಗೆ ನೋಡಿದರೆ ಜೆಡಿಎಸ್ನಲ್ಲಿ ಪಕ್ಷ ಸಂಘಟಿಸುವ ಶಕ್ತಿಯಿರುವುದು ಹೆಚ್.ಡಿ.ದೇವೇಗೌಡರನ್ನು ಹೊರತು ಪಡಿಸಿದರೆ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಾತ್ರ. ಅವರನ್ನು ಹೊರತು ಪಡಿಸಿ ಪ್ರವಾಸ ಮತ್ತು ಪ್ರಚಾರ ಮಾಡಿ ಸಮಾವೇಶ ಆಯೋಜಿಸಿ ಪಕ್ಷವನ್ನು ಸಂಘಟಿಸುವಂತಹ ಪರಿಸ್ಥಿತಿಯಲ್ಲಿ ಯಾವ ನಾಯಕರೂ ಇಲ್ಲ. ರಾಜ್ಯದಲ್ಲಿ ಕುಮಾರಸ್ವಾಮಿ ಅವರ ಅನುಪಸ್ಥಿತಿಯಲ್ಲಿ ಪಕ್ಷದ ಕಾರ್ಯಕ್ರಮ ನಡೆಸಿ ಯಶಸ್ವಿಗೊಳಿಸುವ ಧೈರ್ಯವೂ ಇತರೆ ನಾಯಕರಲ್ಲಿ ಇಲ್ಲದಂತಾಗಿದೆ. ಹೀಗಿರುವಾಗ ಮುಂದಿನ ಚುನಾವಣೆಯನ್ನ ಬಲಿಷ್ಠ ಮತ್ತು ರಾಷ್ಟ್ರೀಯ ಪಕ್ಷಗಳಾಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಅಬ್ಬರದ ನಡುವೆ ಎದುರಿಸುವುದು ಹೇಗೆ ಎಂಬ ಚಿಂತೆಯೂ ಜೆಡಿಎಸ್ ನಾಯಕರನ್ನು ಕಾಡದೆ ಉಳಿದಿಲ್ಲ.

ಕನ್ನಡ ಮಂತ್ರ ಜಪಿಸುತ್ತಿರುವ ಕುಮಾರಸ್ವಾಮಿ
ಈಗಾಗಲೇ ಹೊಸ ತಂತ್ರಗಳನ್ನು ಮಾಡುತ್ತಿರುವ ಎಚ್.ಡಿ.ಕುಮಾರಸ್ವಾಮಿ ಅವರು ಕನ್ನಡದ ಮಂತ್ರವನ್ನು ಜಪಿಸುತ್ತಿದ್ದಾರೆ. ಕನ್ನಡಪರ ಸಂಘಟನೆಗಳ ಸಹಕಾರವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಮತ್ತು ಕನ್ನಡದ ಪರ ಧ್ವನಿ ಎತ್ತಿದ್ದಾರೆ. ಸದಾ ನಾಡು, ನುಡಿಯ ಕುರಿತಂತೆ ಹೆಚ್ಚು ಹೆಚ್ಚಾಗಿ ಮಾತನಾಡಲಾರಂಭಿಸಿದ್ದಾರೆ. ಈಗಾಗಲೇ ಪಂಚಯಾತ್ರೆಗೆ ಚಾಲನೆ ನೀಡಿರುವ ಅವರು ಅದನ್ನು ರಾಜ್ಯದಾದ್ಯಂತ ಮುಂದುವರೆಸಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾಂಗ್ರೆಸ್ ವಿರುದ್ಧ ಎನ್ನುವುದಕ್ಕಿಂತಲೂ ಸಿದ್ದರಾಮಯ್ಯ ಅವರನ್ನೇ ಟಾರ್ಗೆಟ್ ಮಾಡಿ ಸಮರ ಸಾರಿದ್ದವು. ಜತೆಗೆ ಜೆಡಿಎಸ್ ನಮಗೆ ಬೆಂಬಲ ನೀಡಬಹುದು ಎಂಬ ನಿರೀಕ್ಷೆ ಬಿಜೆಪಿಯಲ್ಲಿತ್ತು. ಆದರೆ ಚುನಾವಣೆ ನಡೆದು ಫಲಿತಾಂಶ ಬಂದ ಬಳಿಕ ಜೆಡಿಎಸ್ ನಡೆ ಬಿಜೆಪಿಗೆ ನುಂಗಲಾರದ ತುತ್ತಾಗಿತ್ತು.

ಕಾರ್ಯತಂತ್ರಗಳು ಮತದಾರರ ಮೇಲೆ ಪ್ರಭಾವ ಭೀರಲಿವೆಯೇ?
ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ಎಚ್ಚೆತ್ತು ಕೊಂಡಿವೆ. ಅವೆರಡು ಪಕ್ಷಗಳು ಜೆಡಿಎಸ್ಅನ್ನೇ ಟಾರ್ಗೆಟ್ ಮಾಡಿದರೂ ಅಚ್ಚರಿ ಪಡಬೇಕಾಗಿಲ್ಲ. ಏಕೆಂದರೆ ಜೆಡಿಎಸ್ ಅಧಿಕ ಸ್ಥಾನ ಪಡೆದಷ್ಟೂ ಬಿಜೆಪಿ ಮತ್ತು ಕಾಂಗ್ರೆಸ್ಗೆ ಸಂಕಷ್ಟ ತಪ್ಪಿದಲ್ಲ. ಹೀಗಾಗಿ ಜೆಡಿಎಸ್ ಮಣಿಸುವ ತಂತ್ರಗಳು ನಡೆಯುತ್ತಿವೆ. ಒಟ್ಟಾರೆ ಮೂರು ಪಕ್ಷಗಳು ಗೆಲುವಿಗಾಗಿ ಹೆಣೆಯುತ್ತಿರುವ ತಂತ್ರಗಳು ರಾಜ್ಯದ ಮತದಾರರ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.












Click it and Unblock the Notifications