ಸಿಎಎ ವಿರೋಧಿಸಿ ಜೈಲು ಸೇರಿದ ಅಖಿಲ್ ಈಗ ಎಂಎಲ್ಎ
ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ರೈತಪರ ಹೋರಾಟಗಾರ ಅಖಿಲ್ ಗೊಗಾಯಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸದ್ಯ ಜೈಲಿನಲ್ಲಿರುವ ಅಖಿಲ್ ಅವರು ಸಿಬ್ಸಾಗರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರಭಿ ರಾಜ್ಕೊವಾರಿ ಅವರನ್ನು 12,000 ಮತಗಳ ಅಂತರದಿಂದ ಅಖಿಲ್ ಸೋಲಿಸಿದ್ದಾರೆ. ಈ ಮೂಲಕ ಜೈಲಿನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಅಸ್ಸಾಂ ರಾಜ್ಯದ ಮೊದಲ ಶಾಸಕ ಎನಿಸಿಕೊಂಡಿದ್ದಾರೆ.
126 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ 60 ಸ್ಥಾನ ಗಳಿಸಿದ್ದು, ಮತ್ತೆ ಅಧಿಕಾರಕ್ಕೇರಿದೆ. ಕಾಂಗ್ರೆಸ್ 29 ಸ್ಥಾನ, ಎಐಯುಡಿಜಿ, ಎಜಿಪಿ 16 ಹಾಗೂ 9 ಸ್ಥಾನ ಪಡೆದುಕೊಂಡಿದೆ. ಬಿಡಿಎಫ್, ಸಿಪಿಐ(ಎಂ) ಹಾಗೂ ಯುಪಿಪಿಎಲ್ ಕ್ರಮವಾಗಿ 4,1 ಹಾಗೂ 6 ಸ್ಥಾನ ಗಳಿಸಿವೆ.
ಡಿಸೆಂಬರ್ 2019ರಿಂದ ಜೈಲಿನಲ್ಲಿರುವ ಅಖಿಲ್ ಅವರು ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಹೋರಾಟ ನೇತೃತ್ವ ವಹಿಸಿದ್ದರು. ಈ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ನಡೆಸಿದ ಶೂಟಿಂಗ್ನಲ್ಲಿ ಐದು ಮಂದಿ ಮೃತಪಟ್ಟಿದ್ದರು. ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಅಖಿಲ್ ಅವರನ್ನು ಬಂಧಿಸಿ, ಜೈಲಿಗೆ ಕಳಿಸಲಾಗಿತ್ತು.

ಅಸ್ಸಾಂ ವಿಧಾನಸಭೆ ಚುನಾವಣೆ 2021
ಅಸ್ಸಾಂ ವಿಧಾನಸಭೆ ಚುನಾವಣೆ 2021ರಲ್ಲಿ ಸ್ಪರ್ಧಿಸಿದ ಅಖಿಲ್ ಅವರ ಪರ ತಾಯಿ ಪ್ರಿಯೊದಾ ಗೊಗಾಯಿ ಪ್ರಚಾರ ನಡೆಸಿ, ತನ್ನ ಮಗನಿಗಾದ ಅನ್ಯಾಯಕ್ಕೆ ನ್ಯಾಯ ಸಿಗಬೇಕಿದೆ ಎಂದು ಪ್ರಚಾರ ಭಾಷಣದಲ್ಲಿ ಕೇಳಿಕೊಂಡರು. ಹೋರಾಟಗಾರ್ತಿ ಮೇಧಾ ಪಾಟ್ಕರ್ ಹಾಗೂ ವಿದ್ಯಾರ್ಥಿ ಸಂಘಟನೆಗಳ ಬೆಂಬಲವೂ ಸಿಕ್ಕಿತ್ತು.

ಜನರ ಆಶೀರ್ವಾದದಿಂದ ನನ್ನ ಮಗ ಅಖಿಲ್ ಗೆಲುವು
ಜನರ ಆಶೀರ್ವಾದದಿಂದ ನನ್ನ ಮಗ ಅಖಿಲ್ ಇಂದು ವಿಧಾನಸಭೆಗೆ ಆಯ್ಕೆಯಾಗಿದ್ದಾನೆ. ಈಗ ಜನರಿಗಾಗಿ ಕೆಲಸ ಮಾದಬೇಕಾಗಿದೆ. ಅಸ್ಸಾಂ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ, ಆಡಳಿತದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡಬೇಕಿದೆ ಎಂದು ಅಖಿಲ್ ತಾಯಿ ಪ್ರಿಯೋದಾ ಪ್ರತಿಕ್ರಿಯಿಸಿದ್ದಾರೆ.

45 ವರ್ಷ ವಯಸ್ಸಿನ ರೈತ ಮುಖಂಡ
45 ವರ್ಷ ವಯಸ್ಸಿನ ರೈತ ಮುಖಂಡ, ಸಾಮಾಜಿಕ ಹೋರಾಟಗಾರ, ಆರ್ ಟಿ ಐ ಕಾರ್ಯಕರ್ತ ಅಖಿಲ್ ಅವರು ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಾ ಬಂದಿದ್ದಾರೆ. ಈಶಾನ್ಯರಾಜ್ಯಗಳಲ್ಲಿ ಪರಿಸರ ವಿರೋಧಿ ಅಣೆಕಟ್ಟು ನಿರ್ಮಾಣ ಯೋಜನೆ, ಭೂ ಹಗರಣಗಳ ವಿರುದ್ಧ ಹೋರಾಟ ನಡೆಸಿದ್ದಾರೆ.

ಅಸೆಂಬ್ಲಿಯಲ್ಲಿ ಸಿಂಹ ಘರ್ಜನೆ
ನಾಗರಿಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೆ ಬಂದರೆ 1.90 ಕೋಟಿ ಅಸ್ಸಾಮಿಗಳಿಗೆ ತೊಂದರೆಯಾಗಲಿದೆ. 1971ರ ಹಿಂದೂ ಬೆಂಗಾಲಿ ವಲಸಿಗರಿಗೆ ನೀಡಿದ್ದ ಪೌರತ್ವಕ್ಕೆ ಬೆಲೆ ಸಿಗುವುದಿಲ್ಲ ಎಂದು ಅಖಿಲ್ ವಿರೋಧ ವ್ಯಕ್ತಪಡಿಸಿದ್ದರು. ಅಖಿಲ್ ಗೊಗಾಯಿ ಗೆಲುವಿನಿಂದ ಬೆಂಬಲಿಗರ ಸಂಭ್ರಮ ಮುಗಿಲು ಮುಟ್ಟಿದೆ. ಇನ್ಮುಂದೆ ಅಸೆಂಬ್ಲಿಯಲ್ಲಿ ಸಿಂಹ ಘರ್ಜನೆ ಕೇಳಿಸಲಿದೆ ಎಂದು ಸಂತಸದಿಂದ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications