ಮಕ್ಕಳಿಗೆ ಇನ್ಮುಂದೆ ಥಿಯೇಟರ್ಗೆ ನೋ ಎಂಟ್ರಿ: ಏನಿದು ಹೊಸ ರೂಲ್ಸ್?
ಸಾಮಾನ್ಯವಾಗಿ ಥಿಯೇಟರ್ಗಳಿಗೆ ಮನೆಮಂದಿಯೆಲ್ಲ ಬಂದು ಸಿನಿಮಾ ನೋಡುವ ಪ್ರವೃತ್ತಿ ಮೊದಲಿನಿಂದಲೂ ಇದೆ. ಆದರೆ, ಇನ್ನು ಮಕ್ಕಳಿಗೆ ಥಿಯೇಟರ್ನಲ್ಲಿ ಪ್ರವೇಶ ಸಿಗುವುದಿಲ್ಲ. ಇಂತಹ ನಿಯಮವೊಂದು ಈಗಾಗಲೇ ಜಾರಿಯಾಗಿದೆ. 16 ವರ್ಷದೊಳಗಿನ ಯಾವುದೇ ಮಕ್ಕಳಿಗೆ ರಾತ್ರಿ 11 ಗಂಟೆಯ ನಂತರ ಥಿಯೇಟರ್ ಹಾಗೂ ಮಲ್ಟಿಫ್ಲೆಕ್ಸ್ಗಳಲ್ಲಿ ಸಿನಿಮಾ ವೀಕ್ಷಿಸಲು ಅನುಮತಿ ನೀಡಬಾರದು ಎಂದು ಹೈಕೋರ್ಟ್ ಖಡಕ್ ಸೂಚನೆ ನೀಡಿದೆ.
ಅಸಲಿಗೆ ಪಕ್ಕದ ತೆಲಂಗಾಣದಲ್ಲಿ ಈ ರೂಲ್ಸ್ ಬಂದಿದೆ. ಈ ಬಗ್ಗೆ ತೆಲಂಗಾಣ ಹೈಕೋರ್ಟ್ ಖುದ್ದಾಗಿ ಅಲ್ಲಿನ ಸರ್ಕಾರಕ್ಕೆ ಸೂಚನೆ ನೀಡಿದೆ. ಅದರಂತೆ ರಾತ್ರಿ 11 ಗಂಟೆಯ ಮಕ್ಕಳಿಗೆ ಚಿತ್ರಮಂದಿರ ಮತ್ತು ಮಲ್ಟಿಫ್ಲೆಕ್ಸ್ಗಳಲ್ಲಿ ಚಲನಚಿತ್ರ ವೀಕ್ಷಿಸಲು ಅನುಮತಿ ನೀಡಬಾರದು ಎಂದು ತೆಲಂಗಾಣ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಚರ್ಚಿಸಿ ಕೂಡಲೇ ನಿಯಮ ಜಾರಿ ಮಾಡುವಂತೆ ಸರ್ಕಾರಕ್ಕೆ ಹೇಳಿದೆ.

ಇನ್ನು ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ತನಕ 16 ವರ್ಷದೊಳಗಿನ ಮಕ್ಕಳಿಗೆ ರಾತ್ರಿ 11 ಗಂಟೆಯ ನಂತರ ಥಿಯೇಟರ್ನಲ್ಲಿ ಸಿನಿಮಾ ವೀಕ್ಷಿಸಲು ಅನುಮತಿ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದೆ. ಸಿನಿಮಾಗಳ ಟಿಕೆಟ್ ದರ ಏರಿಕೆ ಕುರಿತಾದ ಅರ್ಜಿಗಳ ವಿಚಾರಣೆ ವೇಳೆ ತೆಲಂಗಾಣ ನ್ಯಾಯಾಲಯವು ಈ ರೀತಿ ನಿಯಮ ಜಾರಿ ಮಾಡುವಂತೆ ಸೂಚಿಸಿದೆ.
ಅಪ್ರಾಪ್ತ ವಯಸ್ಕರಿಗೆ ತಡರಾತ್ರಿವರೆಗೆ ಸಿನಿಮಾ ವೀಕ್ಷಣೆಗೆ ಅನುಮತಿ ಕೊಡಬಾರದು. ಒಂದು ವೇಳೆ ಮಕ್ಕಳನ್ನು ರಾತ್ರಿಯೂ ಸಿನಿಮಾ ನೋಡಲು ಬಿಟ್ಟರೆ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು.

ಹಾಗಾಗಿ ತಡರಾತ್ರಿವರೆಗೆ ಥಿಯೇಟರ್ಗಳಲ್ಲಿ ಮಕ್ಕಳಿಗೆ ಪ್ರವೇಶ ನೀಡಬಾರದು. ಇದನ್ನು ನಿಯಂತ್ರಿಸಲು ಸರ್ಕಾರ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕೇಳಿದ್ದರು. ಅಲ್ಲದೆ ಇತ್ತೀಚೆಗೆ ಪುಷ್ಪ-2 ಸಿನಿಮಾದ ಪ್ರದರ್ಶನದ ವೇಳೆ ಹೈದರಾಬಾದ್ ಥಿಯೇಟರ್ನಲ್ಲೇ ಸಂಭವಿಸಿದ್ದ ಕಾಲ್ತುಳಿತ ಪ್ರಕರಣವನ್ನು ಅವರು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಈ ಘಟನೆಯಲ್ಲಿ ಮಹಿಳೆಯೊಬ್ಬರು ಮೃತಪಟ್ಟರೆ, ಮಗುವೊಂದು ಗಂಭೀರ ಗಾಯಗೊಂಡಿತ್ತು. ಇದನ್ನು ಕೂಡ ಅವರು ಉಲ್ಲೇಖಿಸಿದ್ದಾರೆ.
ಸದ್ಯ ಥಿಯೇಟರ್ಗಳಲ್ಲಿ ತಡರಾತ್ರಿವರೆಗೂ ಸಿನಿಮಾಗಳ ಪ್ರದರ್ಶನವಿದೆ. ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಈ ನೈಟ್ ಶೋಗೆ ಹೆಚ್ಚಿನ ಜನ ಹೋಗುತ್ತಾರೆ. ಇಡೀ ಕುಟುಂಬ ಸಮೇತರಾಗಿ ಹೋಗಿ ಸಿನಿಮಾ ನೋಡಿ ಬರುವ ಪರಿಪಾಟವಿದೆ. ಆದರೆ, ಇಲ್ಲಿವರೆಗೆ ಮಕ್ಕಳಿಗೆ ತಡರಾತ್ರಿ ಥಿಯೇಟರ್ ಪ್ರವೇಶ ಇಲ್ಲ ಎಂಬ ರೂಲ್ಸ್ ಇರಲಿಲ್ಲ. ಮಲ್ಟಿಪ್ಲೆಕ್ಸ್ಗಳಲ್ಲೂ ಕೊನೆಯ ಪ್ರದರ್ಶನ ಸುಮಾರು ಮಧ್ಯರಾತ್ರಿ ದಾಟಿರುತ್ತದೆ.

ಹೈಕೋರ್ಟ್ ಆದೇಶದ ಮೇರೆಗೆ ತೆಲಂಗಾಣ ಸರ್ಕಾರ ಈ ನಿಯಮವನ್ನು ಜಾರಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪುಷ್ಪ-2 ಸಿನಿಮಾದ ಕಾಲ್ತುಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ತೆಲಂಗಾಣ ಸರ್ಕಾರವು ಯಾವುದೇ ಮುಲಾಜಿಲ್ಲದೆ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಿತ್ತು. ಹಾಗಾಗಿ ಇಂತಹ ಘಟನೆಗಳು ಮರಕಳಿಸದಂತೆ ಮಕ್ಕಳಿಗೆ ಥಿಯೇಟರ್ ಪ್ರವೇಶ ನಿರ್ಬಂಧಿಸುವ ಸಾಧ್ಯತೆ ಇದೆ.












Click it and Unblock the Notifications