'ಇನ್ನೆರಡು ವರ್ಷದಲ್ಲಿ ರಾಯನ್ಗೆ ಅಪ್ಪ ಅನ್ನೋದು ತಲೆಗೆ ಬಂದೇ ಬರುತ್ತದೆ..ಮೇಘನಾಗೂ ಹೇಳಿದ್ದೇನೆ'
ಬೆಂಗಳೂರು, ಸೆಪ್ಟೆಂಬರ್ 17: ನನ್ನ ತಾಯಿ ಇಲ್ಲ, ತಂದೆ ಇಲ್ಲ, ಚಿರುನೂ ಇಲ್ಲ. ಇದೆಲ್ಲಾ ಒಂದೊಂಡು ವರ್ಷದ ಅಂತರದಲ್ಲಿ ನಡೆದು ಹೋಯಿತು. 2018ರಲ್ಲಿ ನನ್ನ ತಾಯಿ ಕಳೆದುಕೊಂಡೆ, 2019ರಲ್ಲಿ ನನ್ನ ತಂದೆ ಕಳೆದುಕೊಂಡೆ ಆನಂತರ 2020ರಲ್ಲಿ ನನ್ನ ಅಳಿಯನನ್ನು ಕಳೆದುಕೊಂಡೆ. ನನ್ನ ಹೆತ್ತವರು ಇಬ್ಬರು ಇಲ್ಲ, ಮನೆಗೆ ಬಂದ ಮಗನೂ ಇಲ್ಲ. ಮಗಳು ಮನೆಯಲ್ಲಿದ್ದಾಳೆ ಹೊಟ್ಟೆಯಲ್ಲಿ ಮಗು ಇದೆ. ಆ ಸಮಯದಲ್ಲಿ ನಾನು ಪಟ್ಟ ನೋವು ಇದೆಯಲ್ಲಾ, ಆಗ ದೇವರ ಮೇಲೆ ನಂಬಿಕೆ ಕಳೆದುಕೊಂಡೆ ಎಂದು ಹಿರಿಯ ನಟ ಸುಂದರ್ ರಾಜ್ ತಮ್ಮ ನೋವಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
Rapid Rashmi ಯೂಟ್ಯೂಬ್ ಚಾನೆಲ್ನಲ್ಲಿ ತಮ್ಮ ಜೀವನದ ಸುಖ-ದುಃಖಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಅವರು, ದೇವರು ಇಲ್ಲ ಅಂತ ಬೈಯುತ್ತಿದೆ. ಯಾಕೆ ಬೈದಿದ್ದು ಅಂದ್ರೆ ಒಂದೊಂದು ಸಲ ನಮಗೆ ಆ ಕೋಪ ಬರುತ್ತದೆ. ನಮ್ಮದು ಅಸಹಾಯಕತೆ. ನಾವು ದೇವರಿಗೆ ಇಷ್ಟೆಲ್ಲಾ ಮಾಡಿದ್ದೇವೆ. ನಾವೇನು ತಪ್ಪು ಮಾಡಿದ್ದೇವೆ ಎಂದು ಪ್ರಶ್ನಿಸಿದರು.

ದಿನ ಬೆಳಗ್ಗೆ ನಿನಗೆ ದೀಪ ಹಚ್ಚುತ್ತೀನಿ, ಪೂಜೆ ಮಾಡುತ್ತೀನಿ ಹೀಗಿರುವಾಗ ನೀನು ನನಗೆ ಕಷ್ಟ ಕೊಡುತ್ತೀಯಾ?. ಅವಾಗ ಕೆಲವು ಉತ್ತರ ಸಿಕ್ಕಿದವು. ಆದದ್ದು ಆಗಿ ಹೋಯ್ತು. ವಯನಾಡಿನಲ್ಲಿ ರಾತ್ರಿ ಮಲಗಿದ್ದವರು ಬೆಳಗ್ಗೆ ಎಳದೇ ನೂರಾರು ಜನ ಹೋಗಿ ಬಿಟ್ಟರು. ಅದು ಕೂಡ ಇದೇ ಪನಿಷ್ಮೆಂಟ್. ಅಂದರೆ ಚಿರುಗೆ ಸಿಕ್ಕಿದ್ದು ಕೂಡ ಇದೇ ಶಿಕ್ಷೆನಾ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಚಿರುಗೆ ಎರಡು ದಿನ ಅವಕಾಶವಿತ್ತು
ಅದೇ ಚಿರುಗೆ ಎರಡು ದಿನ ಅವಕಾಶವಿತ್ತು. ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಅನ್ನೋ ನೋವು ಇದೆ. ಆ ಸಮಯದಲ್ಲಿ ಕೋವಿಡ್ ಅಂತಾ ಒಂದು ಬಂದು ಸಾಕಷ್ಟು ನಿಯಮಗಳಿದ್ದವು. ಅದೆಲ್ಲಾ ಇರಲಿಲ್ಲ ಅಂದಿದ್ರೆ ಖಂಡಿತಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವು. ನಮ್ಮ ದುರಾದೃಷ್ಟ ಭಾನುವಾರ ಡಾಕ್ಟರ್ಗಳು ಇರಲಿಲ್ಲ. ಇದು ವಿಧಿ. ಒಂದೊಂದು ಸಾರಿ ಎಲ್ಲಾ ಇದ್ದು ಏನೂ ಇರಲ್ಲ ಎಂದು ನೋವು ತೋಡಿಕೊಂಡರು.

ಬಹಳ ಪ್ರೀತಿಯಿಂದ ಮುದ್ದಾಡಿ ಬೆಳೆಸಿದ ಮಗಳು ಮೇಘನಾ, ಆಕೆಯನ್ನು ನೋಡಿದರೆ ಬೇಸರವಾಗುತ್ತದೆ. ನನ್ನ ಕೇಂದ್ರವೆಲ್ಲಾ ಈಗ ರಾಯನ್ ಮೇಲೆ ಇದೆ ಏಕೆಂದರೆ ಎರಡು ವರ್ಷ ಆದ ಮೇಲೆ ಅಪ್ಪ ಅನ್ನೋದು ಅವನ ತಲೆಯಲ್ಲಿ ಬಂದೇ ಬರುತ್ತದೆ. ಏಕೆಂದರೆ ಸ್ಕೂಲ್ಗೆ ಹೋಗುವ ಅಲ್ಲಿ ಜನರನ್ನು ನೋಡಿ ಅವನಿಗೆ ಕೆಲವೊಂದು ಮೈನಸ್ ಆಗಿ ಕಾಣಿಸುತ್ತದೆ. ಮೇಘನಾಳಿಗೂ ಹೇಳಿದ್ದೀನಿ, ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾಳೆ. ನಾವು ತಾತ ಅಜ್ಜಿಯಾಗಿ ಪ್ರೀತಿ ಕೊಡುತ್ತಿದ್ದೀವಿ. ಪಾಪ ಆ ಮಗುವಿಗೆ ಚಿಕ್ಕ ವಯಸ್ಸಿಗೆ ಹೀಗೆ ಆಯ್ತು ಅಂತಾ ಕರಳು ಚುರುಕ್ ಅನ್ನುತ್ತಿರುತ್ತದೆ ಎಂದು ಸುಂದರ್ ರಾಜ್ ಹೇಳಿದ್ದಾರೆ.












Click it and Unblock the Notifications