Pawan Kalyan: ಡಾ. ರಾಜ್ಕುಮಾರ್ರನ್ನು ಹೊಗಳಿ ಅಲ್ಲು ಅರ್ಜುನ್ರ 'ಪುಷ್ಪ' ಸಿನಿಮಾವನ್ನು ಟೀಕಿಸಿದ ಪವನ್ ಕಲ್ಯಾಣ್!
ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ ಮತ್ತು ಟಾಲಿವುಡ್ ನಟ ಪವನ್ ಕಲ್ಯಾಣ್ ಆಗಸ್ಟ್ 8ರಂದು ಬೆಂಗಳೂರಿಗೆ ಬಂದಿದ್ದರು. ಸಿಎಂ ಸಿದ್ದರಾಮಯ್ಯ, ಅರಣ್ಯ ಸಚಿವ ಈಶ್ವರ್ ಖಂಡ್ರೆ, ಜಮೀರ್ ಅಹ್ಮದ್ರನ್ನು ಅವರನ್ನು ಭೇಟಿಯಾಗಿದ್ದರು. ಇದೇ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವನ್ ಕಲ್ಯಾಣ್ ಕನ್ನಡ ಭಾಷೆ ಮೇಲೆ ಅಪಾರ ಗೌರವ ಇದೆ ಎಂದರು. ಕನ್ನಡದಲ್ಲೇ ಮಾತನಾಡಲು ಪ್ರಯತ್ನಿಸುವ ಮೂಲಕ ಗಮನ ಸೆಳೆದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಜೊತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪವನ್ ಕಲ್ಯಾಣ್, ರಾಷ್ಟ್ರಕವಿ ಕುವೆಂಪು ಅವರ ಪದ್ಯದ ಸಾಲುಗಳನ್ನು ಹೇಳಿದರು. ಕನ್ನಡ ಕಲಿಯದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದ ಅವರು, ಡಾ. ರಾಜ್ಕುಮಾರ್ ಅವರನ್ನು ಕೂಡ ನೆನಪು ಮಾಡಿಕೊಂಡರು. ಡಾ. ರಾಜ್ಕುಮಾರ್ ಅವರ ಉದಾಹರಣೆ ಕೊಟ್ಟು ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾವನ್ನು ಟೀಕಿಸಿದ್ದಾರೆ. ಟಾಲಿವುಡ್ ಅಂಗಳದಲ್ಲಿ ಇದು ಸಂಚಲನ ಮೂಡಿಸಿದೆ.

ಕಾಡು ದೋಚುವವರು ನಾಯಕರು!
ನಾನೀಗ ಅರಣ್ಯ ಸಚಿವನಾಗಿದ್ದೇನೆ, ಕಾಡಿನ ಮಹತ್ವದ ಬಗ್ಗೆ ನನಗೆ ಅರಿವು ಮೂಡಿಸಿದ ಸಿನಿಮಾ ಡಾ. ರಾಜ್ಕುಮಾರ್ ಅವರ ಗಂಧದ ಗುಡಿ. ಅದು ಅರಣ್ಯದ ರಕ್ಷಣೆ, ಮಹತ್ವದ ಬಗ್ಗೆ ಕುರಿತಾದ ಸಿನಿಮಾ. ಡಿಎಫ್ಒ ಪಾತ್ರದಲ್ಲಿ ಕಾಣಿಸಿಕೊಳ್ಳುವ ಡಾ. ರಾಜ್ಕುಮಾರ್ ಅವರು ಕಳ್ಳ ಸಾಗಾಣೆದಾರರಿಂದ ಅರಣ್ಯವನ್ನು ರಕ್ಷಿಸುವ ಕೆಲಸ ಮಾಡುತ್ತಾರೆ. ಈಗ ನೋಡಿ ಕಾಲ ಹೇಗೆ ಬದಲಾಗಿದೆ ಎಂದು 40 ವರ್ಷಗಳ ಹಿಂದೆ ಕಾಡು ರಕ್ಷಿಸುವವರು ನಾಯಕರಾಗಿದ್ದರೆ, ಈಗ ಕಾಡಿನ ಮರಗಳನ್ನು ಕದಿಯುವವರು ನಾಯಕರಾಗಿದ್ದಾರೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಅಲ್ಲು ಅರ್ಜುನ್ರ ಪುಷ್ಪ ಸಿನಿಮಾವನ್ನು ಟೀಕಿಸಿದರು.
ಅಲ್ಲು ಅರ್ಜುನ್ ಮೇಲೆಕೆ ಕೋಪ
ಒಂದೇ ಕುಟುಂಬಕ್ಕೆ ಸೇರಿದವರಾದರೂ ಅಲ್ಲು ಅರ್ಜುನ್ ವಿರುದ್ಧವೇ ಪವನ್ ಕಲ್ಯಾಣ್ ಟೀಕೆ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ. ಆದರೆ ಇದರ ಹಿಂದೆ ರಾಜಕೀಯ ಕಾರಣವಿದೆ ಎನ್ನುವುದು ಆಂಧ್ರಪ್ರದೇಶದ ರಾಜಕೀಯನವನ್ನು ಹತ್ತಿರದಿಂದ ನೋಡಿದವರಿಗೆ ಗೊತ್ತಿರುತ್ತದೆ.
ಪವನ್ ಕಲ್ಯಾಣ್ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ನಿಂತಿದ್ದಾಗ, ಅಲ್ಲು ಅರ್ಜುನ್ ಎದುರಾಳಿ ಪಕ್ಷದ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದರು. ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು. ಮೆಗಾ ಫ್ಯಾಮಿಲಿಯಲ್ಲಿ ಒಳ ಜಗಳವಿದೆ ಎನ್ನುವುದು ಇದರಿಂದ ಬಹಿರಂಗವಾಗಿತ್ತು. ಪವನ್ ಕಲ್ಯಾಣ್ರ ಮುನಿಸು ಇನ್ನೂ ಕಡಿಮೆಯಾಗಿಲ್ಲ ಎನ್ನುವುದು ಅವರ ಮಾತುಗಳಿಂದ ಮತ್ತೆ ಸಾಬೀತಾಗಿದೆ.












Click it and Unblock the Notifications