S Janaki Passes Away: ತಮ್ಮಿಚ್ಛೆಯಂತೆ ಕನ್ನಡ ನಾಡಲ್ಲೇ ಕೊನೆಯುಸಿರೆಳೆದ ಗಾನಕೋಗಿಲೆ ಎಸ್.ಜಾನಕಿ
ಭಾರತೀಯ ಚಿತ್ರರಂಗದ ಅದ್ಭುತ ಗಾಯಕಿ, ಕೋಟ್ಯಂತರ ಸಂಗೀತ ಪ್ರೇಮಿಗಳ ಆರಾಧ್ಯ ದೈವ, 'ಗಾನಕೋಕಿಲೆ' ಎಂದೇ ಕರೆಸಿಕೊಂಡಿದ್ದ ಎಸ್. ಜಾನಕಿ (88) ಅವರು ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮೈಸೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ. ಅವರ ನಿಧನದಿಂದ ಇಡೀ ದಕ್ಷಿಣ ಭಾರತೀಯ ಚಿತ್ರರಂಗ ಹಾಗೂ ಸಂಗೀತ ಲೋಕದಲ್ಲಿ ಕತ್ತಲೆ ಆವರಿಸಿದ್ದು, ಗಾನಕೋಗಿಲೆಯ ಒಂದು ಸುವರ್ಣ ಯುಗ ಅಂತ್ಯಗೊಂಡಿದೆ.

ಐದು ದಶಕಗಳ ಗಾನಯಾತ್ರೆ
ದಶಕಗಳ ಕಾಲ ತಮ್ಮ ಮಧುರ ಕಂಠದಿಂದ ಕನ್ನಡಿಗರು ಸೇರಿದಂತೆ ಇಡೀ ದೇಶದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದ್ದ ಜಾನಕಿ ಅಮ್ಮ, ಕೇವಲ ಗಾಯಕಿಯಾಗಿರದೆ ಸಂಗೀತ ಲೋಕದ ಅಪ್ರತಿಮ ದೃಶ್ಯಕಾವ್ಯವಾಗಿದ್ದರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಒಟ್ಟು 17ಕ್ಕೂ ಹೆಚ್ಚು ಭಾಷೆಗಳಲ್ಲಿ ಅವರು ಬರೋಬ್ಬರಿ 48,000ಕ್ಕೂ ಹೆಚ್ಚು ಹಾಡುಗಳಿಗೆ ಧ್ವನಿಯಾಗಿದ್ದರು.
ಕನ್ನಡದೊಂದಿಗೆ ಅವಿನಾಭಾವ ಸಂಬಂಧ
ಆಂಧ್ರಪ್ರದೇಶದಲ್ಲಿ ಜನಿಸಿದರೂ ಜಾನಕಮ್ಮ ಅವರಿಗೆ ಕರ್ನಾಟಕ ಮತ್ತು ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ ಇತ್ತು. ಕನ್ನಡ ಚಿತ್ರರಂಗದಲ್ಲಿ ಡಾ.ರಾಜ್ಕುಮಾರ್, ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಅವರು ಹಾಡಿದ ಪ್ರೇಮಗೀತೆಗಳು ಹಾಗೂ ಭಕ್ತಿಗೀತೆಗಳು ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲೂ ಮೊಳಗುತ್ತಿವೆ. ಸಂಗೀತ ಕ್ಷೇತ್ರಕ್ಕೆ ಅವರು ನೀಡಿದ ಅಪ್ರತಿಮ ಕೊಡುಗೆಗಾಗಿ ಅವರಿಗೆ 4 ರಾಷ್ಟ್ರ ಪ್ರಶಸ್ತಿಗಳು ಹಾಗೂ ವಿವಿಧ ರಾಜ್ಯ ಸರ್ಕಾರಗಳಿಂದ ಹತ್ತಾರು ಭಾಷಾ ಪ್ರಶಸ್ತಿಗಳು ಒಲಿದು ಬಂದಿದ್ದವು. ಮೈಸೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತ್ತು. ಕೇವಲ ಪ್ರಶಸ್ತಿಗಳಿಗಷ್ಟೇ ಸೀಮಿತವಾಗದ ಅವರು, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ 'ಅಮ್ಮ' ಎಂದೇ ಸ್ಥಾನ ಪಡೆದಿದ್ದರು.
ಎಸ್. ಜಾನಕಿ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು ಹಾಗೂ ಗಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ಜಾನಕಮ್ಮ ಅವರ ಧ್ವನಿ ಎಂದಿಗೂ ಅಮರ. ಅವರು ದೈಹಿಕವಾಗಿ ನಮ್ಮನ್ನು ಅಗಲಿದ್ದರೂ, ಅವರು ಹಾಡಿ ಹೋಗಿರುವ ಸಾವಿರಾರು ಗೀತೆಗಳ ಮೂಲಕ ನಮ್ಮ ನಡುವೆಯೇ ಸದಾ ಜೀವಂತವಾಗಿರುತ್ತಾರೆ" ಎಂದು ಕಲಾ ಲೋಕದ ದಿಗ್ಗಜರು ಕಂಬನಿ ಮಿಡಿದಿದ್ದಾರೆ. ಮೈಸೂರಿನಲ್ಲಿ ನೆಲೆಸಿದ್ದ ಜಾನಕಮ್ಮನವರ ಪಾರ್ಥಿವ ಶರೀರದ ಅಂತಿಮ ದರ್ಶನ ಹಾಗೂ ಅಂತ್ಯಕ್ರಿಯೆಯ ವಿವರಗಳನ್ನು ಅವರ ಕುಟುಂಬದ ಸದಸ್ಯರು ಇನ್ನಷ್ಟೇ ಪ್ರಕಟಿಸಬೇಕಿದೆ.
ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಕಂಬನಿ
ನಾವೆಲ್ಲಾ ಸಣ್ಣವರಿದ್ದಾಗ ಇಂದಿನಂತೆ ಟಿವಿ, ಮೊಬೈಲ್ಗಳ ಗಲಾಟೆ ಇರಲಿಲ್ಲ. ಆಗೆಲ್ಲಾ ನಮಗೆ ರೇಡಿಯೋ ಒಂದೇ ಆಸರೆ. ಅದರಲ್ಲಿ ಬರುತ್ತಿದ್ದ ಇಂಪಾದ ಹಾಡುಗಳನ್ನು ಕೇಳುತ್ತಾ ಬೆಳೆದ ನಮಗೆ ಅತ್ಯಂತ ಪರಿಚಿತ ಹೆಸರು ಎಸ್.ಜಾನಕಿ. ಆ ಮಹಾತಾಯಿ ಹಾಡಿದ ಹಾಡುಗಳಷ್ಟೂ ಒಂದೊಂದೂ ಮುತ್ತಿನಂತಹ ಹಾಡುಗಳು. 'ಗಗನವೋ ಎಲ್ಲೋ ಭೂಮಿಯು ಎಲ್ಲೋ...' 'ಬಾನಲ್ಲೂ ನೀನೆ ಭುವಿಯಲ್ಲೂ ನೀನೆ...' 'ಪೂಜಿಸಲೆಂದೆ ಹೂಗಳ ತಂದೆ...' 'ಒಮ್ಮೆ ನಿನ್ನನ್ನು ಕಣ್ತುಂಬ ನೋಡುವಾಸೆ...' ಹೀಗೆ ಹೇಳುತ್ತಾ ಹೋದರೆ ಪಟ್ಟಿ ಮುಗಿಯುವುದಿಲ್ಲ. ಕೆಲವು ವರ್ಷಗಳ ಹಿಂದೆ ಜಾನಕಿ ಅಮ್ಮ ಮೈಸೂರಿನಲ್ಲಿ ತಮ್ಮ ಕೊನೆಯ ಕಾರ್ಯಕ್ರಮ ಮುಗಿಸಿದಾಗ ಮನಸ್ಸಿಗೆ ತುಂಬಾ ಕಸಿವಿಸಿಯಾಗಿತ್ತು. ನಮ್ಮ ಜೀವನದ ಪ್ರತಿಯೊಂದು ಖುಷಿ-ದುಃಖದಲ್ಲೂ ಜೊತೆಯಾಗಿದ್ದ ಅವರ ಧ್ವನಿ, ನಮ್ಮ ಕುಟುಂಬದ ಒಂದು ಭಾಗವೇ ಆಗಿಹೋಗಿತ್ತು. ಕೊನೆಗೂ ಪ್ರಕೃತಿಯ ನಿಯಮದಂತೆ ಆ ಹಾಡು ಹಕ್ಕಿಯ ಪಯಣ ಮುಗಿದಿದೆ. ಆದರೆ, ನಾದದೇವತೆಯನ್ನೇ ನಂಬಿ ಬದುಕಿದ ಜಾನಕಿ ಅಮ್ಮ, ಕನ್ನಡ ಸಿನಿರಸಿಕರ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ. ಕಾಲ ಓಡುತ್ತಿದ್ದರೂ, ಮನಸ್ಸು ಮಾತ್ರ ಅವರ ನೆನಪಿನಲ್ಲಿ ಕಂಬನಿ ಮಿಡಿಯುತ್ತಿದೆ. ಆ ದಿವ್ಯ ಚೇತನಕ್ಕೆ ಸದ್ಗತಿ ಸಿಗಲಿ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಅವರ ಅಭಿಮಾನಿಗಳು ಭಾವುಕ ಪೋಸ್ಟ್ ಹಂಚಿಕೊಳ್ಳುತ್ತಿದ್ದಾರೆ.












Click it and Unblock the Notifications