Sudeep-Darshan: ಹುಚ್ಚ ಸಿನಿಮಾದಲ್ಲಿ ಸುದೀಪ್ ಗೆಳೆಯನ ಪಾತ್ರ ಕೇಳಿದ್ದ ದರ್ಶನ್; ನಿರ್ಮಾಪಕ ರೆಹಮಾನ್
ಸುದೀಪ್ ಮತ್ತು ದರ್ಶನ್ ಸದ್ಯ ಕನ್ನಡ ಚಿತ್ರರಂಗದ ದೊಡ್ಡ ಸೂಪರ್ ಸ್ಟಾರ್ ಗಳು, ಇಬ್ಬರಿಗೂ ಅಪಾರ ಅಭಿಮಾನ ಬಳಗವೇ ಇದೆ. ಕೆಲವೊಮ್ಮೆ ಇಬ್ಬರ ಅಭಿಮಾನಿಗಳು ಕಿತ್ತಾಡುವುದು ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ, ಒಂದು ಕಾಲದಲ್ಲಿ ಇಬ್ಬರು ಜೀವದ ಗೆಳೆಯರಂತಿದ್ದರು. ಬಳಿಕ ಹಲವು ಕಾರಣಗಳಿಂದ ದೂರವಾದರು.
'ಹುಚ್ಚ' ಸುದೀಪ್ಗೆ ಸಿನಿಮಾ ರಂಗದಲ್ಲಿ ಭದ್ರ ಬುನಾದಿ ಹಾಕಿಕೊಟ್ಟ ಸಿನಿಮಾ. 2001ರಲ್ಲಿ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆಗಿತ್ತು. ಸುದೀಪ್ ಅಭಿನಯ ನೋಡಿ ಅಭಿಮಾನಿಗಳು ಮನಸೋತಿದ್ದರು. ಅದಕ್ಕೂ ಮುನ್ನ ಬಿಡುಗಡೆಯಾಗಿದ್ದ ಸ್ಪರ್ಶ ಸಿನಿಮಾ ಉತ್ತಮವಾಗಿದ್ದರು, ಬಿಡುಗಡೆಯಾದ ಸಂದರ್ಭದಲ್ಲಿ ಡಾ. ರಾಜ್ಕುಮಾರ್ ಅಪಹರಣ ಆದ ಕಾರಣ ಚಿತ್ರಮಂದಿರ ಮುಚ್ಚಿ, ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ನಷ್ಟ ಅನುಭವಿಸಿತ್ತು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ದರ್ಶನ್ ಜೈಲು ಪಾಲಾಗಿದ್ದಾರೆ. ಅಭಿಮಾನಿಗಳು ಸಹಜವಾಗಿಯೇ ಬೇಸರ ಮಾಡಿಕೊಂಡಿದ್ದಾರೆ. ದರ್ಶನ್ ಚಿತ್ರರಂಗದ ಆರಂಭದ ದಿನಗಳು, ಅವರು ಕಷ್ಟಪಟ್ಟು ಬೆಳೆದ ರೀತಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ಹುಚ್ಚ ಸಿನಿಮಾ ನಿರ್ಮಾಪಕರು ದರ್ಶನ್ ಬಗ್ಗೆ ಹೇಳಿಕೆ ನೀಡಿರುವುದು ಭಾರಿ ಚರ್ಚೆಯಾಗುತ್ತಿದೆ.
ಸುದೀಪ್ ಗೆಳೆಯನ ಪಾತ್ರ ಕೇಳಿದ್ದ ದರ್ಶನ್
ಹುಚ್ಚ ಸಿನಿಮಾ ಮರುಬಿಡುಗಡೆಯಾಗಲು ಸಜ್ಜಾಗಿದ್ದು ನಿರ್ಮಾಪಕ ರೆಹಮಾನ್ ಮಾತನಾಡಿದ್ದು, ಹುಚ್ಚ ಸಿನಿಮಾದಲ್ಲಿ ಸುದೀಪ್ ಜೊತೆ ಇರುವ ನಾಲ್ಕು ಸ್ನೇಹಿತರ ಪಾತ್ರದಲ್ಲಿ ಯಾವುದಾದರು ಒಂದು ಪಾತ್ರವನ್ನು ತನಗೆ ಕೊಡಿ ಎಂದು ದರ್ಶನ್ ಕೇಳಿದ್ದರು ಎಂದು ಹೇಳಿದ್ದಾರೆ.
ದರ್ಶನ್ ನನ್ನ ಬಳಿ ಅವಕಾಶ ಕೇಳಿಕೊಂಡು ಬಂದಿದ್ದರು, ಆದರೆ ಅಷ್ಟೊತ್ತಿಗಾಗಲೇ ಎಲ್ಲಾ ಪಾತ್ರಗಳಿಗೆ ನಟರನ್ನು ಆಯ್ಕೆ ಮಾಡಿ ಆಗಿತ್ತು. ತೂಗುದೀಪ ಶ್ರೀನಿವಾಸ್ ಅವರ ಮಗ ಎನ್ನುವ ಕಾರಣಕ್ಕೆ ದರ್ಶನ್ ಅವರನ್ನು ಭೇಟಿ ಮಾಡಿದ್ದೆ.
ದರ್ಶನ್ರನ್ನು ಅದುವರೆಗೂ ನಾನು ನೋಡೇ ಇರಲಿಲ್ಲ, ಅವರನ್ನು ನೋಡುತ್ತಿದ್ದಂತೆ ಥ್ರಿಲ್ ಆಗಿದ್ದೆ. ಆತ ಹೀರೋ ಆಗಲು ಸರಿಯಾಗಿದ್ದ, ಅದಕ್ಕೆ ಆತನಿಗೆ ನೀನು ಹೀರೋ ಆಗುವ ಪರ್ಸನಾಲಿಟಿ ಇದೆ. ಈ ಚಿತ್ರದಲ್ಲಿ ಎಲ್ಲರ ಪಾತ್ರಕ್ಕೂ ನಟರನ್ನು ಆಯ್ಕೆ ಮಾಡಲಾಗಿದೆ. ನೀನು ಕೇಳುತ್ತಿರುವ ಪಾತ್ರ ಪ್ರಮುಖವಾದದ್ದೇನೂ ಅಲ್ಲ, ಹೀರೋ ಇಂದೆ ಇರುವ ಕ್ಯಾರೆಕ್ಟರ್ ಅಷ್ಟೇ, ನೀನು ಹೀರೋ ಆಗಲು ಪ್ರಯತ್ನ ಮಾಡು ಎಂದು ಹೇಳಿ ಕಳಿಸಿದ್ದೆ ಎಂದಿದ್ದಾರೆ.
ದರ್ಶನ್ ಮತ್ತು ಅವರ ಅಭಿಮಾನಿಗಳು ಒದನ್ನು ಹೇಗೆ ತೆಗೆದುಕೊಳ್ಳುತ್ತಾರೆ ನನಗೆ ಗೊತ್ತಿಲ್ಲ. ದರ್ಶನ್ ಬಗ್ಗೆ ನಾನೇನೂ ಕೆಟ್ಟದ್ದನ್ನು ಹೇಳುತ್ತಿಲ್ಲ. ಒಳ್ಳೆಯ ಮಾತುಗಳನ್ನು ಹೇಳಿದ್ದೇನೆ, ಯಾರು ಏನೇ ಅಂದುಕೊಂಡರೂ ನನಗೇನೂ ನಷ್ಟವಿಲ್ಲ ಎಂದಿದ್ದಾರೆ.












Click it and Unblock the Notifications