ಹೌದು ಏನಿವಾಗ? ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ: ಸಿಟ್ಟಿಗೆದ್ದ ಆಂಕರ್ ಅನುಶ್ರೀ
ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರು ಮೊದಲಿನಿಂದಲೂ ನಾನಾ ವಿಚಾರಗಳಿಗೆ ಟ್ರೋಲ್ ಆಗುತ್ತಲೇ ಇದ್ದಾರೆ. ಇದಕ್ಕೆಲ್ಲ ಅನುಶ್ರೀ ಸೊಪ್ಪು ಹಾಕುತ್ತಿರಲಿಲ್ಲ. ಅವರ ಮದುವೆ ಬಗ್ಗೆ ಅಂತೆಕಂತೆಗಳು ಹೊರಬಂದರೂ ತಲೆಕೆಡಿಸಿಕೊಳ್ಳಲಿಲ್ಲ. ಇತ್ತೀಚೆಗೆ ಅನುಶ್ರೀ ಮತ್ತೊಂದು ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ಇದರ ಜಾಡು ಹಿಡಿದಿರುವ ಅವರು ನೇರವಾಗಿ ಆ ಟ್ರೋಲ್ ಪೇಜ್ನಲ್ಲಿ ಪೋಸ್ಟ್ ಆಗಿದ್ದ ತಮ್ಮದೇ ವಿಡಿಯೋಗೆ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ನಿರೂಪಣೆ ಮಾತ್ರವಲ್ಲದೆ ಅನುಶ್ರೀ ಅವರು ತಮ್ಮದೇ ಆದ ಯುಟ್ಯೂಬ್ ಚಾನಲ್ ಹೊಂದಿದ್ದಾರೆ. ಅದರಲ್ಲಿ ಸೆಲೆಬ್ರಿಟಿಗಳು ಸಂದರ್ಶನ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರು '45' ಚಿತ್ರತಂಡದೊಂದಿಗೆ ನಡೆಸಿದ್ದ ಸಂದರ್ಶನದ ವಿಡಿಯೋವೊಂದು ವೈರಲ್ ಆಗಿತ್ತು. 'ನಾನು ತಿರುಪತಿಗೆ ಹೋದಾಗಲೂ ಮೊದಲು ಕಾಣುವುದು ಶ್ರೀನಿವಾಸ ಕಲ್ಯಾಣದ ಡಾ.ರಾಜ್ಕುಮಾರ್ ಅವರು' ಎಂದು ಅನುಶ್ರೀ ಹೇಳಿದ್ದರು. ಇದರ ಜೊತೆಗೆ ಅನುಶ್ರೀ ಅವರ ಮತ್ತೊಂದು ಹಳೆಯ ವಿಡಿಯೋ ಕೂಡ ಲಿಂಕ್ ಮಾಡಲಾಗಿದೆ. ಇದರಲ್ಲಿ ಅವರು 'ಮಂಜುನಾಥ ಸ್ವಾಮಿಯ ದರ್ಶನ ಆಗುವಾಗ ಶ್ರೀಮಂಜುನಾಥ ಸಿನಿಮಾದ ಚಿರಂಜೀವಿ ಸರ್ ಪಾತ್ರವೇ ಕಣ್ಣ ಮುಂದೆ ಬರುತ್ತೆ' ಎಂದು ಹೇಳಿದ್ದರು.

ಅನುಶ್ರೀಗೆ ಆಸ್ಕರ್ ಎಂದು ಟ್ರೋಲ್
ಈ ವಿಡಿಯೋಗಳನ್ನು 'raichur_memes_bro' ಹೆಸರಿನ ಟ್ರೋಲ್ ಪೇಜ್ನವರು ಹಂಚಿಕೊಂಡು ಗೇಲಿ ಮಾಡಿದ್ದರು. 'ವಾರೆ ಮೇರೆ ಲಡ್ಕೀ, ಈ ದೇಶದಲ್ಲಿ ನಿನ್ನಂತವರು ಇನ್ನೂ ಇದ್ದಾರಾ? ನಿನ್ನ ಪಾದ ಜೆರಾಕ್ಸ್ ಮಾಡಿಕೊಡು' ಎನ್ನುವ ಉಪೇಂದ್ರ ಅವರ ಡೈಲಾಗ್ ಜೊತೆ ಟ್ರೋಲ್ ಮಾಡಿದ್ದರು. 'ಆಸ್ಕರ್ ವಿನ್ನರ್ ಅನುಶ್ರೀ' ಎಂದು ಪೋಸ್ಟ್ನಲ್ಲಿ ಬರೆದಿದ್ದರು. ಇದನ್ನು ಗಮನಿಸಿರುವ ಅನುಶ್ರೀ ನೇರವಾಗಿ ಆ ಟ್ರೋಲ್ ಪೇಜ್ನಲ್ಲಿ ಪೋಸ್ಟ್ ಮಾಡಿರುವ ತಮ್ಮ ವಿಡಿಯೋಗೆ ಕಾಮೆಂಟ್ನಲ್ಲಿ ಸರಿಯಾಗಿ ಕೌಂಟರ್ ಕೊಟ್ಟಿದ್ದಾರೆ.
ಮೊದಲಿಗೆ ನಗುವ ಇಮೋಜಿ ಹಾಕಿರುವ ಅನುಶ್ರೀ, 'ಹೌದು ಏನಿವಾಗ? ಎಂದು ಖಡಕ್ ಆಗಿ ಕೇಳಿದ್ದಾರೆ. ಓಬವ್ವ ಅಂದಾಗ ಜಯಂತಿ ಅಮ್ಮ ನೆನಪಾಗ್ತಾರೆ. ಕಿತ್ತೂರು ಚೆನ್ನಮ್ಮ ಅಂದಾಗ ಸರೋಜಮ್ಮ ನೆನಪಾಗ್ತಾರೆ. ಶ್ರೀನಿವಾಸ ಎಂದಾಗ ಅಪ್ಪಾಜಿ. ಮಂಜುನಾಥ ಎಂದಾಗ ಚಿರಂಜೀವಿ ಸರ್ ನೆನಪಾಗ್ತಾರೆ. ಅದು ಹೆಮ್ಮೆ ಪಡೋ ಅಂತ ವಿಷಯ. ಕಾಮಾಲೆ ಕಣ್ಣೋರಿಗೆ ಕಾಣೋದೆಲ್ಲ ಹಳದಿ ಅನ್ನೋ ಹಾಗೆ, ನಿಮ್ಮ ಬುದ್ಧಿವಂತಿಕೆಗೆ ಹಾಗೆ ಕಾಣೋದು' ಎಂದು ತಿರುಗೇಟು ನೀಡಿದ್ದಾರೆ.
ಈ ಪೋಸ್ಟ್ ಕೂಡ ಹಂಚಿಕೊಂಡಿರುವ ಟ್ರೋಲ್ ಪೇಜ್ನವರು, 'ನಾನು ಹಾಕಿದ ರೀಲ್ಗೆ ಖುಷಿಯಿಂದಲೇ ರಿಪ್ಲೈ ಕೊಟ್ಟ ಅನುಶ್ರೀ ಮೇಡಂಗೆ ಥ್ಯಾಂಕ್ಸ್ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಅನುಶ್ರೀ ಅವರ ಕಾಮೆಂಟ್ಗೆ ಉತ್ತರಿಸಿದ ಪೇಜ್, ಕ್ಷಮಿಸಿ ಮೇಡಂ, ಆದ್ರೆ ಮನುಷ್ಯರನ್ನು ದೇವರಿಗೆ ಹೋಲಿಸುವುದು ಎಷ್ಟರಮಟ್ಟಿಗೆ ಸರಿ?' ಎಂದು ಪ್ರಶ್ನಿಸಿದ್ದಾರೆ.
ಆಂಕರ್ ಅನುಶ್ರೀ ಅವರು ಇತ್ತೀಚೆಗೆ ಆಗಸ್ಟ್ 28ರಂದು ಕುಶಾಲನಗರದ ಉದ್ಯಮಿ ರೋಷನ್ ಅವರನ್ನು ವಿವಾಹವಾದರು. ಬೆಂಗಳೂರಿನ ಹೊರವಲಯದಲ್ಲಿ ಇವರ ವಿವಾಹ ನೆರವೇರಿತು. ಅವರ ಗೆಳೆಯನೊಂದಿಗೆ ನಡೆದ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದು, ಈ ಸಮಾರಂಭಕ್ಕೆ ಶಿವರಾಜ್ಕುಮಾರ್, ರಚಿತಾ ರಾಮ್ ಸೇರಿದಂತೆ ಅನೇಕ ಸ್ಯಾಂಡಲ್ವುಡ್ ಗಣ್ಯರು ಸಾಕ್ಷಿಯಾಗಿದ್ದರು. ಮದುವೆ ಸರಳವಾಗಿ, ಆತ್ಮೀಯರ ಸಮ್ಮುಖದಲ್ಲಿ ನಡೆದಿತ್ತು. ತಮ್ಮನ್ನು ರೋಷನ್ ಅವರೊಂದಿಗೆ ಒಂದುಗೂಡಿಸಿದ್ದು ದಿವಂಗತ ನಟ ಪುನೀತ್ ರಾಜ್ ಕುಮಾರ್ ಎಂದು ಭಾವುಕರಾಗಿ ಅನುಶ್ರೀ ಹೇಳಿದ್ದರು. ಪುನೀತ್ ಪರ್ವ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದೆವು ಎಂದಿದ್ದರು.












Click it and Unblock the Notifications