'ಮುಜುಗರ ಇಲ್ಲದೇ ಹೇಳ್ತೇನೆ ನನಗೆ ಕೋಟಿ..ಕೋಟಿ ಸಾಲ ಇದೆ'-ನಟ ಅಜಯ್ ರಾವ್
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆ ನಟರಾಗಿದ್ದ ಅಜಯ್ ರಾವ್ ಅಂದರೆ ಇಂದಿಗೂ ಸಿನಿ ಪ್ರಿಯರಿಗೆ ಅಚ್ಚುಮೆಚ್ಚು. ಎಕ್ಸ್ಕ್ಯೂಸ್ ಮಿ ಚಿತ್ರದ ಬಹುದೊಡ್ಡ ಯಶಸ್ಸಿನ ಬಳಿಕ ತಾಜ ಮಹಲ್, ಪ್ರೇಮ್ ಕಹಾನಿ, ಕೃಷ್ಣನ್ ಲವ್ ಸ್ಟೋರಿ, ಕೃಷ್ಣ ರುಕ್ಕು, ಕೃಷ್ಣ ಲೀಲಾ ಸೇರಿದಂತೆ ಜನರಿಗೆ ತಲುಪುವ ಸಿನಿಮಾಗಳನ್ನೇ ಮಾಡುತ್ತಿದ್ದ ಅಜಯ್ ರಾವ್, ಈ ಸಿನಿಮಾ ಪಯಣದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದರೂ ಕೂಡ ಈಗಲೂ ಅವರು ಕೋಟಿಗಟ್ಟಲೆ ಸಾಲ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸ್ವತಃ ಅಜಯ್ ರಾವ್ ಮಾತನಾಡಿದ್ದಾರೆ.
Rapid Rashmi ಯೂಟ್ಯೂಬ್ ಚಾನೆಲ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, 'ನಾನು ಯಾವುದೇ ಮುಜುಗರ ಇಲ್ಲದೇ ಹೇಳುತ್ತೇನೆ. ಈಗ ನನಗೆ ಕೋಟಿ ಕೋಟಿಗಟ್ಟಲೆ ಸಾಲ ಇದೆ. ಆದರೆ ನನಗೆ ಖುಷಿ ಇದೆ. ನಾನು ಕೋಟಿ ಸಾಲ ಪಡೆಯಲು ಅರ್ಹನಾಗಿದ್ದೇನೆ ಎನ್ನುವ ಖುಷಿ ಇದೆ. ಬೆಂಗಳೂರಿಗೆ ಬಂದಾಗ ನನ್ನ ಪರಿಸ್ಥಿತಿ ಹೇಗಿತ್ತು ಅಂದರೆ ನಮ್ಮ ಅಣ್ಣ ನೂರು ರೂಪಾಯಿ ಕೊಟ್ಟರೆ ಅವತ್ತಿನ ದಿನದ ಜೀವನ ನಡೆಯುತ್ತಿತ್ತು. ಒಂದು ಕಾಲದಲ್ಲಿ ನಾನು ಪ್ರತಿ ದಿನ ಮೆಜೆಸ್ಟಿಕ್ನಿಂದ ಬಸವೇಶ್ವರ ನಗರಕ್ಕೆ ನಡೆದುಕೊಂಡು ಹೋಗುತ್ತಿದ್ದೆ. ಯಾಕೆಂದರೆ ನನ್ನ ಜೇಬಿನಲ್ಲಿ ಹಣ ಇರುತ್ತಿರಲಿಲ್ಲ'ಎಂದರು.

'ಅವತ್ತಿನ ಕಾಲಕ್ಕೆ ನಾನು ಮನೆಗೆ ಹೋಗುವ ಸಮಯದಲ್ಲಿ ಬಸ್ಗಳು ಓಡಾಡುತ್ತಿರಲಿಲ್ಲ. ಬಸ್ ಚಾರ್ಜ್ಗೂ ನನ್ನ ಬಳಿ ಹಣ ಇರುತ್ತಿರಲಿಲ್ಲ. ಆಟೋದಲ್ಲಿ ಡಬ್ಬಲ್ ಹಣ ಕೇಳುತ್ತಿದ್ದರು. ಗಾಂಧಿ ನಗರದಲ್ಲಿ ಯಾರೋ ಡೈರೆಕ್ಟರ್ ಸಿಕ್ಕಿ ಅವರ ಜೊತೆ ಮಾತನಾಡಿದ ಮೇಲೆ ಅವರಿಗೆ ಕಾಫಿ ನಾನೇ ಕೊಡಿಸುತ್ತಿದ್ದೆ. ಚಿಕ್ಕಪೇಟೆಯಲ್ಲಿ ಒಂದು ಕಡೆ ಬಿಸಿ ಬಿಸಿ ಇಡ್ಲಿ ಮಾಡುತ್ತಿದ್ದರು ಒಂದು ವರ್ಷ ರಾತ್ರಿ ಊಟ ಅದೇ ನನಗೆ. ಮಧ್ಯಾಹ್ನ ಊಟಕ್ಕೆ ಇರುವ ಹಣವನ್ನು ಎಣಿಸಿ ಯೋಚಿಸುತ್ತಿದ್ದೆ. ಮಧ್ಯಾಹ್ನ ಊಟಕ್ಕೆ ಕಡ್ಲೆ ಕಾಯಿ ತಿನ್ನುತ್ತಿದ್ದೆ. ಅದನ್ನು ತಿಂದರೆ ಹಸಿವು ಆಗುತ್ತಿರಲಿಲ್ಲ. ಪ್ರತಿ ಮಧ್ಯಾಹ್ನ ಅದನ್ನೇ ತಿನ್ನುತ್ತಿದ್ದೆ. ಅದೇ ಹಣದಲ್ಲಿ ಡೈರೆಕ್ಟರ್ಗಳಿಗೆ ಕಾಫಿ ಕುಡಿಸುತ್ತಿದ್ದೆ' ಎಂದು ಹೇಳಿದರು.
'ಪ್ರತಿ ದಿನ ರಾತ್ರಿ ಮೆಜೆಸ್ಟಿಕ್ನಿಂದ ಬಸವೇಶ್ವರ ನಗರಕ್ಕೆ ಡಾನ್ಸ್ ಮಾಡಿಕೊಂಡು, ಪಲ್ಟಿ ಹೊಡೆಯುತ್ತಾ, ಸಿನಿಮಾಕ್ಕೆ ಏನು ಬೇಕು ಅದನ್ನು ಪ್ರಾಕ್ಟೀಸ್ ಮಾಡುತ್ತಾ ನಡೆದುಕೊಂಡು ಹೋಗುತ್ತಿದ್ದೆ. ಒಂದು ವರ್ಷ ಹೀಗೆ ಕಳೆದಿದ್ದೇನೆ. ಆ ರೀತಿ ಇದ್ದ ವ್ಯಕ್ತಿ ಇಂದು ನನ್ನದೇ ಸ್ವಂತ ಪ್ರೊಡಕ್ಷನ್ನಲ್ಲಿ ನೂರಾರು ಜನರಿಗೆ ಕೆಲಸ ಕೊಟ್ಟು, ಕೋಟಿಗಟ್ಟಲೆ ಸಾಲ ಮಾಡಿಕೊಂಡಿದ್ದೇನೆ ಎಂದರೆ ಅದು ದೊಡ್ಡ ಸಾಧನೆ ಅಲ್ವಾ 'ಎಂದು ಅಜಯ್ ರಾವ್ ತಮ್ಮ ಆರಂಭದ ದಿನಕ್ಕೂ ಈಗಿರುವ ಬದುಕಿಗೂ ಇರುವ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.
ಇನ್ನು ಸಿನಿಮಾಗಳು ಸೋಲು ಕಾಣುತ್ತಿದ್ದ ಸಮಯದಲ್ಲಿ ಸ್ವಂತ ಪ್ರೊಡಕ್ಷನ್ ಮಾಡುವ ನಿರ್ಧಾರ ಯಾಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, 'ಸ್ವಂತ ಪ್ರೊಡಕ್ಷನ್ ಮಾಡುವ ನಿರ್ಧಾರ ಒಂದು ದಿನ ಬಲವಾಗಿ ಮಾಡಲೇಬೇಕಿತ್ತು. ಅವತ್ತಿನ ದಿನಗಳಲ್ಲಿ ಮಾಡಿದ ಸಿನಿಮಾಗಳು ಸಾಲು ಸಾಲು ಸೋಲಾಯ್ತು. ಎಲ್ಲಿ ತಪ್ಪಾಗುತ್ತಿದೆ ಎಂದು ಯೋಚಿಸಿದಾಗ ನನಗೆ ಬಂದಿರುವ ಕಥೆಗಳಲ್ಲಿ ಚೆನ್ನಾಗಿರುವುದನ್ನೇ ಮಾಡುತ್ತಿದ್ದೆ. ಆದರೆ ಅದು ಯಶಸ್ವಿಯಾಗುತ್ತಿರಲಿಲ್ಲ. ಅಲ್ಲಿ ಯಾರ ತಪ್ಪು ಅಂತಾನೂ ಹೇಳಲು ಆಗುವುದಿಲ್ಲ. ಸ್ವಲ್ಪ ಸಮಯ ಕಳೆದ ಮೇಲೆ ಕೃಷ್ಣ ಲೀಲಾ ಕಥೆ ಚೆನ್ನಾಗಿತ್ತು ಅಂತಾ ನನಗೆ ಗೊತ್ತಿತ್ತು. ಇದು ಮಾಡಿದರೆ ಮತ್ತೆ ನನ್ನನ್ನು ಜನ ಸ್ವೀಕರಿಸುತ್ತಾರೆ ಅಂತಾನೂ ಗೊತ್ತಿತ್ತು. ಈ ಸಮಯದಲ್ಲಿ ಯಾರು ಪ್ರೊಡಕ್ಷನ್ ಮಾಡುತ್ತಾರೆ ಅಂದಾಗ ಕೊನೆಗೆ ನಾನೇ ಮಾಡುವ ನಿರ್ಧಾರ ಮಾಡಿದೆ. ಯಾರೂ ನನ್ನನ್ನು ನಂಬಂದೇ ಇದ್ದಾಗ ನಾನೇ ನನ್ನನ್ನು ನಂಬಿದೆ' ಎಂದು ಹೇಳಿದರು.












Click it and Unblock the Notifications