ಇರುವುದೆಲ್ಲವ ಬಿಟ್ಟು ಇಲ್ಲದ್ದರ ಕಡೆಗೆ...

* ಪ್ರಕಾಶ, ಒಂದು ಖಾಸಗಿ ಕಂಪನಿಯಲ್ಲಿ ಸೆಕ್ಷನ್ ಇನ್ಚಾರ್ಜ್. ಅವನ ಕೈ ಕೆಳಗೆ ಆರು ಮಂದಿ ಕೆಲಸ ಮಾಡುತ್ತಾರೆ. ಆ ಕಂಪನಿಯಲ್ಲಿ ಸಂಬಳ ಜೋರಾಗಿದೆ. ಪಿ.ಎಫ್., ಬೋನಸ್, ರಜೆ ಸೇರಿದಂತೆ ಇತರೆ ಅನುಕೂಲಗಳೂ ಚೆನ್ನಾಗಿವೆ. ಈಗಾಗಲೇ ಪ್ರಕಾಶ ಭರ್ತಿ ಏಳು ಲಕ್ಷಕ್ಕೆ ಒಂದು ಮನೆಯನ್ನು ಲೀಸ್ಗೆ ಪಡೆದಿದ್ದಾನೆ. ಮೈಸೂರಿಗೆ ಸಮೀಪದಲ್ಲಿ ಒಂದು ಸೈಟನ್ನೂ ಖರೀದಿಸಿದ್ದಾನೆ. ಕೆನರಾಬ್ಯಾಂಕ್ನಿಂದ ಪಡೆದ ಎಂಟು ಲಕ್ಷ ರೂಪಾಯಿಗಳ ಸಾಲವಿದೆ ಅನ್ನೋದು ಬಿಟ್ಟರೆ, ಅವನದು ಹೊರೆಯೇ ಇಲ್ಲದ ಸಂತೃಪ್ತ ಬದುಕು. ಇಚ್ಛೆಯನ್ನರಿತು ಬದುಕುವ ಹೆಂಡತಿ ಇದ್ದಾಳೆ. ಹತ್ತು ಮಂದಿಗೆ ಇಷ್ಟವಾಗುವಂಥ ಮಕ್ಕಳಿವೆ. ಸಮಾಜದಲ್ಲಿ, ಪ್ರಕಾಶನಿಗೆ ಒಂದು ಸ್ಥಾನಮಾನವೂ ಇದೆ...
ಆದರೂ, ಪ್ರಕಾಶನಿಗೆ ನೆಮ್ಮದಿಯಿಲ್ಲ. ಅವನ ಜತೆಗೇ ಓದಿಕೊಂಡ ಒಂದಿಬ್ಬರು ತಹಶೀಲ್ದಾರ್ ಹುದ್ದೆಯಲ್ಲಿದ್ದಾರೆ. ಇನ್ನೊಂದಿಬ್ಬರು ಅಮೆರಿಕಾದಲ್ಲಿದ್ದಾರೆ. ಅವರ ಬಳಿ ಕಾರುಗಳಿವೆ. ಆಗಲೇ ಸ್ವಂತ ಮನೆಗಳನ್ನು ಕಟ್ಟಿಸಿಕೊಂಡಿದ್ದಾರೆ. ಇದನ್ನೆಲ್ಲ ಸುಮ್ಮನೇ ನೆನಪಿಸಿಕೊಂಡರೂ ಸಾಕು; ಪ್ರಕಾಶ ಖಿನ್ನನಾಗುತ್ತಾನೆ. ಜತೆಗೇ ಆಡಿದವರು, ಜತೆಗೇ ಓದಿದವರು, ಜತೆಗೇ ಬೆಳೆದವರು ಈಗ ಹೇಗಿದ್ದಾರಲ್ಲ ಎಂಬ ಒಂದೇ ಒಂದು ಯೋಚನೆ ಅವನನ್ನು ಹಣ್ಣಾಗಿಸುತ್ತದೆ. ಆಗಲೇ, ನಾನೂ ಅವರಂತೆಯೇ ಇದ್ದಿದ್ದರೆ... ಎಂದು ಯೋಚಿಸಿ ನಿಟ್ಟುಸಿರಾಗುತ್ತಾನೆ.
* ಗೌರಿಯ ಗಂಡ ಬಿಜಿನೆಸ್ಮನ್. ಹೊರಗೆ ಸ್ವಲ್ಪ ಜೋರಾಗಿದ್ದಾನೆ. ಮಾತೂ ಸ್ವಲ್ಪ ಒರಟೇ. ಆದರೆ, ಮನೆಯೊಳಗೆ ಮಾತ್ರ-ಅಮ್ಮಾವ್ರ ಗಂಡ. ಪ್ರತಿ ತಿಂಗಳ ಆದಾಯವನ್ನೂ ತಪ್ಪದೇ ಗೌರಿಗೆ ಒಪ್ಪಿಸುತ್ತಾನೆ. ಹೇಳಿ ಕೇಳಿ ಬಿಜಿನೆಸ್ಮನ್ ನೋಡಿ; ಹಾಗಾಗಿ ಒಂದಿಷ್ಟು ಕೈಬಿಗಿ ಹಿಡಿದು ಖರ್ಚು ಮಾಡುತ್ತಾನೆ. ಈ ಕಾರಣಕ್ಕೇ ಗೌರಿಗೆ ಗಂಡನೆಂದರೆ ಅಸಮಾಧಾನ, ಸಿಡಿಮಿಡಿ, ತಾತ್ಸಾರ. ಪಕ್ಕದ್ಮನೆ ಪಂಕಜಾಳ ಗಂಡನ್ನ ನೋಡಿ ಕಲಿತುಕೊಳ್ರೀ- ಮೊನ್ನೆ ಅವಳು ಹಾಗೇ ಸುಮ್ಮನೆ ಮಾತಾಡುತ್ತಾ, ಸೀರೆ ತಗೋಬೇಕಿತ್ತು' ಅಂದಳಂತೆ. ಅಷ್ಟಕ್ಕೇ ಅವನು ಮರುಮಾತಾಡದೆ, ಆರು ಸಾವಿರ ರೂ. ತೆಗೆದು ಟೇಬಲ್ ಮೇಲಿಟ್ಟು ಹೋದನಂತೆ. ನೀವೂ ಇದೀರ ದಂಡಕ್ಕೆ! ಆರು ಸಾವಿರ ಕೇಳಿದ್ರೆ ಎರಡು ಸಾವಿರ ಕೊಟ್ಟು ಹೋಗಿಬಿಡ್ತೀರ' ಎಂದೆಲ್ಲ ಅವಳು ಅವಾಗವಾಗ ಜೋರು ಮಾಡುತ್ತಾಳೆ. ಚುಚ್ಚಿ ಮಾತಾಡುತ್ತಾಳೆ. ಸ್ವಾರಸ್ಯವೆಂದರೆ, ಗೌರಿಯ ಬಳಿ ಕಡಿಮೆಯೆಂದರೂ ನಲವತ್ತೆಂಟು ಭರ್ಜರಿ ಸೀರೆಗಳಿವೆ. ಅವುಗಳನ್ನೆಲ್ಲ ಉಟ್ಟುಕೊಂಡು ಮೆರೆವ ಆಸೆ ಅವಳಿಗೆ ಖಂಡಿತ ಇಲ್ಲ. ಆದರೆ, ಸಂಸಾರದ ವಿಷಯಕ್ಕೆ ಬಂದಾಗ, ಅವಳಿಗೆ ಗಂಡನಲ್ಲಿ ಏನೋ ಕೊರತೆ ಕಾಣಿಸುತ್ತಿದೆ. ನನ್ನ ಗಂಡನೂ ಪಕ್ಕದ್ಮನೆಯವಳ ಗಂಡನ ಥರಾನೇ ಇರಬಾರದಿತ್ತೆ ಅನಿಸುತ್ತದೆ...
* ಅದು ದುಬಾರಿ ಡೊನೇಷನ್ ಪಡೆವ ಸ್ಕೂಲು. ಅಲ್ಲಿ ಮಕ್ಕಳು ಮಾತ್ರವಲ್ಲ, ಅವರ ತಂದೆ-ತಾಯಿಗೂ ಸಂದರ್ಶನವಿದೆ. ಪಾಸು ಆದರೆ ಮಾತ್ರ ಸೀಟು. ತಿಂಗಳು ತಿಂಗಳಿಗೂ ಶುಲ್ಕದ ಹೆಸರಿನಲ್ಲಿ ಐದೂವರೆ ಸಾವಿರ ಕೊಡಬೇಕು. ಒಂದು ಸಂತೋಷವೆಂದರೆ, ಆ ಶಾಲೆಯಲ್ಲಿ ಆಟ, ಪಾಠ, ಶಿಸ್ತು... ಎಲ್ಲವನ್ನೂ ತುಂಬ ಚೆನ್ನಾಗಿ ಕಲಿಸುತ್ತಾರೆ. ಈ ಶಾಲೆಯಲ್ಲಿ ಆರನೇ ತರಗತಿಯಲ್ಲಿದ್ದಾಳೆ ಪ್ರಿಯಾಂಕ. ತಮ್ಮ ಶಾಲೆಯಿಂದ ಅರ್ಧ ಕಿಲೋಮೀಟರು ದೂರವಿರುವ ಇನ್ನೊಂದು ಶಾಲೆಯ ಮೇಲೆ ಅವಳಿಗೆ ಮೋಹ. ಅದನ್ನೇ ಮುಂದಿಟ್ಟುಕೊಂಡು ಅಪ್ಪನ ಬಳಿ ಹೇಳುತ್ತಾಳೆ: ನೋಡಿ ಪಪ್ಪಾ, ನಂಗೆ ಈ ಸ್ಕೂಲು ಇಷ್ಟವಾಗೊಲ್ಲ. ಆ' ಸ್ಕೂಲಿನಲ್ಲಿ ಹೋಂವರ್ಕೇ ಕೊಡಲ್ಲ, ಗೊತ್ತಾ? ಆದ್ರೂ ಅಲ್ಲಿ ಓದುವವರಿಗೆ ಎ' ಗ್ರೇಡ್ ಕೊಡ್ತಿದಾರೆ. ಮುಂದಿನ ವರ್ಷ ನನ್ನನ್ನು ಅಲ್ಲಿಗೇ ಸೇರಿಸಿ...
* ಸಾವಿತ್ರಮ್ಮನವರಿಗೆ ಸೊಸೆಯ ಮೇಲೆ ಮೊದಲಿಂದಲೂ ಸಿಡಿಮಿಡಿ. ಅವಳು ಕೂತರೂ ತಪ್ಪು, ನಿಂತರೂ ತಪ್ಪು. ಯಾವಾಗಲೂ ಗಂಡನಿಗೆ ಅಂಟಿಕೊಂಡೇ ಇರುತ್ತಾಳೆ ಎಂಬುದು ಅವರ ದೂರು. ಹೀಗೆ ದೂರುವಾಗಲೇ ಅವರು ಇನ್ಯಾವುದೋ ಉದಾಹರಣೆ ಹೇಳುತ್ತಾರೆ. ಯಾರೋ ಹುಡುಗಿಯ ಹೆಸರು ಹೇಳಿ- ಅಂಥವಳನ್ನು ಸೊಸೆಯಾಗಿ ಪಡೆಯಲು ಪುಣ್ಯ ಮಾಡಿರಬೇಕು...' ಎನ್ನುತ್ತಾರೆ. ಈ ಮಾತಿನ ಹಿಂದೆ, ಆ ಹುಡುಗಿಗೆ ವರದಕ್ಷಿಣೆಯ ರೂಪದಲ್ಲಿ ನೀಡಿದ ಎರಡು ಲಕ್ಷ ನಗದು, ಒಂದು ಸೈಟು, ಐದು ತೊಲೆ ಬಂಗಾರ... ಎಲ್ಲವೂ ಸೇರಿರುತ್ತದೆ. ಹಾಗೆ, ವರದಕ್ಷಿಣೆಯೊಂದಿಗೆ ಬಂದ ಹುಡುಗಿ ಅತ್ತೆ ಮನೆಯಲ್ಲಿ ಎಲ್ಲರ ಮೇಲೂ ಸವಾರಿ ಮಾಡುತ್ತಿದ್ದಾಳೆ ಎಂಬ ಸರಳ ಸತ್ಯವನ್ನು ಸಾವಿತ್ರಮ್ಮ ಮಾತಿನ ಮಧ್ಯೆ ಮರೆತೇ ಬಿಡುತ್ತಾರೆ. ಅದೇ ಸಂದರ್ಭದಲ್ಲಿ, ಸೊಸೆ ತುಂಬ ಪ್ರೀತಿಯಿಂದ ಮಾಡುವ ಉಪಚಾರವನ್ನೂ ತಪ್ಪಾಗಿ ಅರ್ಥಮಾಡಿಕೊಳ್ಳುತ್ತಾರೆ. ಅವರ ಮನಸ್ಸು ಇರುವುದನ್ನು ಬಿಟ್ಟು ಇಲ್ಲದ್ದರ ಕುರಿತೇ ಯೋಚಿಸುತ್ತಿರುತ್ತದೆ.
* ಹರೀಶ ಕೆಲಸಕ್ಕೆ ಸೇರಿ ಈಗಿನ್ನೂ ಆರು ತಿಂಗಳಾಗಿದೆ. ಅವನಿಗೆ ಭರ್ತಿ ಹದಿನೆಂಟು ಸಾವಿರ ಸಂಬಳವಿದೆ. ಅವನದೇ ಕೆಲಸ ಮಾಡುವ, ನಾಲ್ಕು ವರ್ಷ ಸೀನಿಯಾರಿಟಿ ಹೊಂದಿರುವ ಸಹೋದ್ಯೋಗಿಗೆ ಇಪ್ಪತ್ತೆರಡು ಸಾವಿರವಿದೆ. ಕೆಲಸ ಮಾತ್ರವಲ್ಲ, ಜವಾಬ್ದಾರಿ ಕೂಡ ಜಾಸ್ತಿ ಇದೆ. ಆದರೆ ಹರೀಶನಿಗೆ ಇದೇನೂ ಕಾಣಿಸುತ್ತಿಲ್ಲ. ನನಗಿಂತ ಅವನಿಗೆ ನಾಲ್ಕು ಸಾವಿರ ರೂ. ಜಾಸ್ತಿ ಸಂಬಳ ಎಂಬುದಷ್ಟೇ ಕಾಣುತ್ತದೆ. ಅದನ್ನೇ ಗೆಳೆಯರೊಂದಿಗೆ ಹೀಗೆ ಹೇಳಿಕೊಳ್ಳುತ್ತಾನೆ: ಆ ನನ್ಮಗ ಏನು ಅಂತ ನಂಗೆ ಗೊತ್ತಿಲ್ವಾ? ಅವನಿಗೆ ಕೆಲಸವೇ ಗೊತ್ತಿಲ್ಲ. ಆದರೆ ಅವ್ನು ದಿನಾಲೂ ಬಾಸ್ಗೆ ಬಕೆಟ್ ಹಿಡೀತಾನೆ. ಹಾಗಾಗಿ ಸಂಬಳ ಜಾಸ್ತಿ ಇದೆ...' ತಾನು ಹೇಳುತ್ತಿರುವ ಮಾತು ಅರ್ಧ ಸತ್ಯ, ಅರ್ಧ ಸುಳ್ಳು ಎಂದು ಹರೀಶನಿಗೇ ಚೆನ್ನಾಗಿ ಗೊತ್ತಿರುತ್ತದೆ. ಈಗ ಸಿಗುತ್ತಿರುವ ಸಂಬಳದಲ್ಲಿ ಮಹರಾಜನಂತೆ ಬದುಕುತ್ತಿರುವುದರ ಅರಿವೂ ಅವನಿಗಿರುತ್ತದೆ. ಆದರೂ ಕೈಗೆ ಸಿಗದ ಕನಸಿನ ಬೆನ್ನೇರಿಯೇ ಅವನು ಯೋಚಿಸುತ್ತಿರುತ್ತಾನೆ!
* ಹೆಂಡತಿ ಸ್ವಲ್ಪ ಫ್ಯಾಷನಬಲ್ ಆಗಿಲ್ಲ ಎನ್ನುವುದು ಮೈಕೇಲ್ನ ಚಿಂತೆಗೆ ಕಾರಣ. ಅವಳು ತೆಳ್ಳಗಿದ್ದಾಳೆ. ಬೆಳ್ಳಗೂ ಇದ್ದಾಳೆ. ಸೈಡ್ ಆಂಗಲ್ನಿಂದ ನೋಡಿದರೆ, ಒಂದಿಬ್ಬರು ಚಿತ್ರ ನಟಿಯರ ಹಾಗೂ ಕಾಣುತ್ತಾಳೆ ನಿಜ. ಆದರೆ, ಅವಳಿಗೆ ಹಸಿ ಬಿಸಿ ಪ್ರೀತಿಯಲ್ಲಿ ಆಸಕ್ತಿಯಿಲ್ಲ. ಬೆಳಗ್ಗೆ ಎದ್ದವಳೇ ಗಂಡನಿಗೆ ಕಾಫಿ ಮಾಡಿಕೊಟ್ಟು ಅಡುಗೆ ಮನೆ ಸೇರಿ ಬಿಡುತ್ತಾಳೆ. ನಂತರ, ಪಾತ್ರೆ ತೊಳೆಯುವುದು, ಕಸ ಗುಡಿಸುವುದು, ಪೂಜೆ, ತಿಂಡಿ, ಆಪ್ತರಿಗೆ ಫೋನ್ ಮಾಡುವುದು... ಇದರಲ್ಲೇ ಸಮಯ ಕಳೆದು ಹೋಗುತ್ತದೆ. ಮಧ್ಯೆ ಈ ಮೈಕೇಲ್ ಸರಸವಾಡಲು ಬರುತ್ತಾನೆ ನಿಜ. ಇವಳೋ ಅವನನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಹೋಗಲಿ, ರಾತ್ರಿಯಾದರೂ ಅವನ ರಸಿಕತೆಗೆ, ಸರಸಕ್ಕೆ ಹೆಚ್ಚಿನ ಅವಕಾಶವಿದೆಯಾ ಅಂದರೆ ಅದೂ ಇಲ್ಲ.
ಆಗೆಲ್ಲ ಅಯ್ಯೋ ಏನ್ರೀ ಇದು ಅಸಹ್ಯಾ, ನಂಗೆ ಒಂಚೂರೂ ಇಷ್ಟವಾಗಿಲ್ಲಪ್ಪಾ' ಅಂದೇಬಿಡುತ್ತಾಳೆ ಮಹರಾಯರೆ, ಅವಳು ಹಾಗೆ ಹೇಳಿದಾಗೆಲ್ಲ ಮೈಕೇಲ್ಗೆ ಪಕ್ಕದ್ಮನೆಯ ವಯ್ಯಾರಿ ನೆನಪಿಗೆ ಬರುತ್ತಾಳೆ. ಒಂದೆರಡು ಸಂದರ್ಭದಲ್ಲಿ ಅವಳ ಹೊಕ್ಕಳು ಕಾಣುವಂತೆ ಸೀರೆಯುಟ್ಟು ಸಂಜೆ ವಾಕಿಂಗ್ ಹೋದದ್ದನ್ನು; ಸ್ವಲ್ಪ ಬೋಲ್ಡ್ ಆಗಿ ಮಾತಾಡುವುದನ್ನು ಮೈಕೇಲನೇ ಪ್ರತ್ಯಕ್ಷ ಕಂಡಿದ್ದಾನೆ. ಈ ಕಾರಣದಿಂದಲೇ ಅಂಥ ಹೆಂಡತಿ ಸಿಗಬಾರದಿತ್ತೆ ಎಂದು ಯೋಚಿಸುತ್ತಾನೆ. ಹೆಂಗಸರು, ಅದರಲ್ಲೂ ಗೃಹಿಣಿ ಅನ್ನಿಸಿಕೊಂಡವರು ಹಾಗೆಲ್ಲ ಬೋಲ್ಡ್ ಆಗಿ ವರ್ತಿಸಿದರೆ ಅದರಿಂದ ಒಳ್ಳೆಯದಕ್ಕಿಂತ ಕೆಟ್ಟದ್ದೇ ಜಾಸ್ತಿ ಎಂಬುದು ಅವನಿಗೆ ಗೊತ್ತಿಲ್ಲದ ಸಂಗತಿಯಲ್ಲ. ಆದರೂ, ಇಲ್ಲದ್ದರ ಕಡೆಗೇ ಅವನ ಧ್ಯಾನ...
ಈವರೆಗೂ ಹೇಳಿದ ಉದಾಹರಣೆಗಳೆಲ್ಲ ದಿನನಿತ್ಯದ ಬದುಕಿನಲ್ಲಿ ನಾವೆಲ್ಲರೂ ಕಾಣುತ್ತಲೇ ಇರುವಂಥವು. ಇರುವುದನ್ನು ಬಿಟ್ಟು ಇಲ್ಲದ್ದರ ಕುರಿತೇ ಯೋಚಿಸುವ ಜನರ ಬಗ್ಗೆ ದಿನವಿಡೀ ಉದಾಹರಣೆಗಳನ್ನೂ ನೀಡಬಹುದು. ಅದು ಹೀಗೆ: ಒಂದಿಬ್ಬರು ಆಸಾಮಿಗಳು ಅಂದುಕೊಳ್ಳಿ. ದಿನವೂ ಹತ್ತಿರದ ಪೇಟೆಗೋ; ಮಾರ್ಕೆಟ್ಟಿಗೋ ಹೋಗಿ ಬರುವುದು ಅವರ ದಿನಚರಿ. ಆಟೊಗೆ ಕೊಡುವಷ್ಟು ಕಾಸಿರುವುದಿಲ್ಲವಲ್ಲ? ಹಾಗಾಗಿ ಬಸ್ಸಿಗೇ ಹೋಗಬೇಕು. ಇವರು ಬರುವ ವೇಳೆಗೆ ಬಸ್ ಹೊರಟಿರುತ್ತದೆ. ಹೇಗೋ ಓಡೋಡಿ ಬಂದು ಬಸ್ ಹತ್ತುತ್ತಾರೆ. ನಂತರ ಸದ್ಯ, ಬಸ್ ಸಿಕ್ತು' ಎಂದು ಖುಷಿ ಪಡುವುದಿಲ್ಲ. ಬದಲಿಗೆ, ಏನ್ ರಶ್ಶುರೀ' ಎಂದು ರಾಗ ಎಳೆಯುತ್ತಾರೆ. ಆಗಲೇ ಇವರಿಗೆ ಸೀಟಿಲ್ಲವಲ್ಲ' ಎಂಬ ಚಿಂತೆ ಶುರುವಾಗುತ್ತೆ. ಒಂದೆರಡು ಸ್ಟಾಪ್ನ ನಂತರ ಸೀಟೂ ಸಿಗುತ್ತೆ. ಈ ಪುಣ್ಯಾತ್ಮರು ಆಗಲಾದರೂ ಸುಮ್ಮನಾಗೊಲ್ಲ. ಛೆ, ಕಿಟಕಿ ಪಕ್ಕ ಸೀಟು ಸಿಗಲಿಲ್ಲವಲ್ಲ...' ಎಂದು ಚಡಪಡಿಸಲು ಶುರು ಮಾಡುತ್ತಾರೆ!
ಇನ್ನು ಕಾಲೇಜಿಗೆ ಹೋಗುವ ಮಕ್ಕಳು ಅಪ್ಪ/ಅಮ್ಮನಿಗೆ ಛೇಡಿಸುತ್ತಾರಲ್ಲ? ಅದನ್ನು ಹೇಳದಿರುವುದೇ ಮೇಲು. ಮಕ್ಕಳು ಕಾಲೇಜಿಗೆ ಹೋಗುತ್ತಾರೆ ಎಂದು ಗೊತ್ತಾದ ತಕ್ಷಣ ಅಪ್ಪ/ಅಮ್ಮ ತಾವು ಕೊಡಿಸಿಟ್ಟಿದ್ದ ಹಣವನ್ನೆಲ್ಲ ಹೊಂದಿಸಿ ಮೊಬೈಲು ತೆಗೆದುಕೊಡ್ತಾರೆ. ಮೊಬೈಕು ಕೊಡಿಸಲು ಪ್ರಯತ್ನಿಸುತ್ತಾರೆ. ಅವರ ಸಂಕಟ ಮಕ್ಕಳಿಗೆ ಆರ್ಥವಾಗದ್ದೇನೂ ಅಲ್ಲ. ಆದರೂ, ಮೊಬೈಲ್ಗೆ ಕ್ಯಾಮರಾ ಇಲ್ಲ ಎಂಬ ನೆಪ; ಮೊಬೈಕು ಸೆಕೆಂಡ್ ಹ್ಯಾಂಡು ಎಂಬ ನೆಪಗಳನ್ನು ಮುಂದೆ ಮಾಡಿ ಕ್ಯಾತೆ ತೆಗೆಯುತ್ತಾರೆ. ಈ ಮೊಬೈಲು/ಮೊಬೈಕು ಖರೀದಿಸಲು ಅಪ್ಪ/ಅಮ್ಮನಿಗೆ ಅದೆಷ್ಟು ಕಷ್ಟವಾಗಿರಬಹುದು, ಹಣ ಸಾಕಾಗದೆ ಹೋದಾಗ ಅವರು ಗೆಳೆಯ/ಗೆಳತಿ; ಸಂಬಂಧಿಕರ ಮುಂದೆ ದೈನೇಸಿಯಂತೆ ನಿಂತು ಹೇಗೆ ಪ್ರಾರ್ಥಿಸಿರಬಹುದು? ಅವರು- ನಮ್ಮಲ್ಲಿ ಹಣವಿಲ್ಲ' ಎಂದು ನಿಷ್ಠುರವಾಗಿ ಹೇಳಿದ ಸಂದರ್ಭದಲ್ಲಿ ಅವಮಾನದಿಂದ ಹೇಗೆ ಕುಗ್ಗಿ ಹೋಗಿರಬಹುದು ಎಂದು- ಉಹುಂ, ಯಾವ ಮಕ್ಕಳೂ ಯೋಚಿಸುವುದಿಲ್ಲ. ಒಂದು ಸ್ವಾರಸ್ಯವೆಂದರೆ, ಹೀಗೆಲ್ಲ ಮಕ್ಕಳ ಪೋಷಕರಿಗೇ ದಬಾಯಿಸಿ ಮಾತಾಡಲು- ಮೊಬೈಲು/ಮೊಬೈಕು ಚೆನ್ನಾಗಿಲ್ಲ ಎಂಬುದಕ್ಕಿಂತ, ನನ್ನಲ್ಲಿ ಇಲ್ಲದ್ದು ಸಹಪಾಠಿಗಳ ಬಳಿ ಇದೆ ಎಂಬ ಹೊಟ್ಟೆಕಿಚ್ಚೇ ಕಾರಣವಾಗಿರುತ್ತದೆ ಎಂಬುದು ಸುಳ್ಳಲ್ಲ.
***
ಯಾಕೆ ಹೀಗಾಗುತ್ತದೆ? ಇರುವುದೆಲ್ಲವನ್ನೂ ಬಿಟ್ಟು ಇಲ್ಲದ್ದಕ್ಕೆ ಈ ಹಾಳು ಮನಸೇಕೆ ಮನಸ್ಸು ಆಸೆಪಡುತ್ತದೆ ಎಂಬ ಪ್ರಶ್ನೆಗೆ ಇದಮಿತ್ಥಂ' ಎಂಬಂಥ ಉತ್ತರವಿಲ್ಲ. ಆದರೆ, ಅಂಥದೊಂದು ತಹತಹಕ್ಕೆ ಆಸೆಯೇ (ದುರಾಸೆಯೇ) ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಏಕೆಂದರೆ, ಮನುಷ್ಯ ಅನ್ನಿಸಿಕೊಂಡ ಮೇಲೆ ಎಲ್ಲರೂ ಒಂದೇ ರೀತಿ ಇರಲು, ಬದುಕಲು ಸಾಧ್ಯವಿಲ್ಲ. ಐದು ಬೆರಳು ಯಾವತ್ತೂ ಒಂದೇ ಸಮನಾಗಿರುವುದಿಲ್ಲ. ಯಾವುದೇ ವ್ಯಕ್ತಿಗೆ ಬಯಸಿದ್ದೆಲ್ಲ ಸಿಗುವುದು ಸಾಧ್ಯವೂ ಇಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿರುತ್ತದೆ. ಹಾಗಿದ್ದರೂ ಕೈಗೆ ಎಟುಕದ ದ್ರಾಕ್ಷಿಗೇ ಎಲ್ಲರೂ ಆಸೆ ಪಡುತ್ತಾರೆ. ಹೀಗೆ ಆಸೆ ಪಡುವ ಸಂದರ್ಭದಲ್ಲಿ ಚಿಕ್ಕಂದಿನಲ್ಲಿ ಬಾಯಿಪಾಠ ಮಾಡಿಕೊಂಡಿದ್ದ ಪಾಲಿಗೆ ಬಂದದ್ದು ಪಂಚಾಮೃತ', ಕೈಗೆಟುಕದ ದ್ರಾಕ್ಷಿ ಯಾವತ್ತೂ ಹುಳಿ' ಎಂಬಂಥ ಮಾತುಗಳು ಮರೆತೇ ಹೋಗಿರುತ್ತವೆ.
ಪರಿಣಾಮವಾಗಿಯೇ, ಎಲ್ಲರೂ ಆಸೆ'ಯೆಂಬ ಮೋಹಿನಿಯ ಹಿಂದೆ ಬೀಳುತ್ತಾರೆ. ಈ ಭೂಮಿ ಮೇಲೆ ಯಾರೂ ಶಾಶ್ವತವಲ್ಲ ಎಂದು ವೇದಾಂತ ಹೇಳುವವನೇ ಒಮ್ಮೆ ತನ್ನ ಬೋಳು ನೆತ್ತಿಯನ್ನು ಸವರಿಕೊಂಡು ಎದುರಿಗೆ ಕೂತವನ ಹಿಪ್ಪೆ ಕೂದಲಿನ ತಲೆಯನ ಹಿಪ್ಪೆ ಕೂದಲಿನ ತಲೆಯನ್ನೇ ಆಸೆಯಿಂದ ನೋಡುತ್ತಾನೆ. ಅವನಿಗಿರುವಂಥ ಜೊಂಪೆ ಜೊಂಪೆ ಕೂದಲು ನನಗೂ ಇದ್ದಿದ್ದರೆ ಚೆನ್ನಾಗಿತ್ತು ಎಂಬ ಯೋಚನೆಯೇ ಅವನನ್ನು ಆವರಿಸಿಕೊಂಡಿರುತ್ತದೆ. ತನ್ನ ಮಾತಿಗೆ ಪರವಶರಾಗುವ ಸಾವಿರಾರು ಜನ, ಈ ಮಾತುಗಾರಿಕೆಯಿಂದಲೇ ಸಮಾಜದಲ್ಲಿ ಸಿಕ್ಕಿರುವ ಸ್ಥಾನಮಾನ, ಎಲ್ಲವನ್ನೂ ಆತ ಮರೆತುಬಿಡುತ್ತಾನೆ. ನೊಂದಿರುವ ಸಾವಿರ ಮಂದಿಗೆ ಸಮಾಧಾನ ಹೇಳುವ ಅವನ ಮನಸ್ಸೂ ಇರದುದರ ಕುರಿತೇ ಚಿಂತಿಸುತ್ತಿರುತ್ತದೆ!
ಅಂದಹಾಗೆ, ಇಲ್ಲದ್ದರ ಬಗ್ಗೆ ಧ್ಯಾನಿಸುವವರ ವಿವರ ಇಷ್ಟಕ್ಕೇ ನಿಲ್ಲುವುದಿಲ್ಲ. ಮೈತುಂಬ ಒಡವೆ ಹೇರಿಕೊಂಡಿದ್ದರೂ- ನಿಮ್ಮ ಆಫೀಸಿನಲ್ಲಿ ಯಾರೋ ಅಪರಿಚಿತರಿಗೆ ದಾನ ಮಾಡೋಕೆ ಹಣವಿರುತ್ತೆ. ನಾನು ಒಂದು ಒಡವೆ ಕೇಳಿದ್ರೆ ದುಡ್ಡಿಲ್ಲ ಅಂತೀರಲ್ರಿ? ಎಂದು ರೇಗುವ ಹೆಂಡತಿ; ಮಾವನ ಕೃಪೆಯಿಂದಳೇ ನೌಕರಿ ಪಡೆದೂ- ನಿಮ್ಮಪ್ಪ ಒಂದು ಸೈಟು ಕೊಡಲಿಲ್ವಲ್ಲೇ' ಎಂದು ಹೆಂಡತಿಗೆ ಕಿಚಾಯಿಸುವ ಗಂಡ; ಹುಡುಗ ಹಳ್ಳಿಯಲ್ಲಿದ್ದಾನೆ ಎಂಬ ಕಾರಣದಿಂದಲೇ ಮದುವೆಗೆ ಒಪ್ಪದೆ, ಬೆಂಗಳೂರಿನ ಗಂಡೇ ಬೇಕು ಎಂದು ಹಟ ಹಿಡಿಯುವ ಹುಡುಗಿ; ಯಾವುದೋ ಗಾಳಿಮಾತು ಕೇಳಿ, ಅದನ್ನೇ ನಿಜವೆಂದು ಭಾವಿಸಿ- ಛೆ, ನಾನು ಅಂಥ ಕಡೆ ಕೆಲಸ ಮಾಡಬೇಕಿತ್ತು...' ಎಂದು ಮೇಲಿಂದ ಮೇಲೆ ಹೇಳಿಕೊಂಡು ನರಳುವ ನಾವು-ನೀವು ಅವರು-ಇವರು... ಸದಾ ಇರದುದರ ಕಡೆಗೇ ಯೋಚಿಸುವವರೇ.
***
ಅಂದ ಹಾಗೆ, ಇಷ್ಟೆಲ್ಲ ಬರೆದ ಮೇಲೆ, ಇಡೀ ಲೇಖನವನ್ನು ಇನ್ನೂ ಚೆನ್ನಾಗಿ ಬರೆಯಬಹುದಿತ್ತು ಎಂದು ನನಗೂ ಅನ್ನಿಸಿದೆ. ಕುತೂಹಲದಿಂದ (?) ಓದುತ್ತ ಕಡೆಯ ಸಾಲಿಗೆ ಬಂದಾಗ- ಈ ವಿಷಯದ ಬಗ್ಗೆ ಇನ್ನೂ ಚೆನ್ನಾಗಿ ಬರೀಬೇಕಿತ್ತು ಎಂಬ ಭಾವ ಓದುಗರನ್ನೂ ಕಾಡುತ್ತಿರಬಹುದು! ಅದಕ್ಕೇ ಹೇಳಿದ್ದು: ಇರುವುದೆಲ್ಲವ ಬಿಟ್ಟು...
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications